ರಾಷ್ಟ್ರ ರಾಜಧಾನಿಯಲ್ಲೇ ಕೋಣ ಒಯ್ಯುತ್ತಿದ್ದವರ ಮೇಲೆ ಹಲ್ಲೆ
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಗೂ ಸ್ವಲ್ಪ ಮೊದಲು ಇದೇ ಪಿಎಫ್ಎ ಸಂಘಟನೆಯ ಸದಸ್ಯರೊಬ್ಬರು ದೆಹಲಿ ಪೊಲೀಸರಿಗೆ ಕರೆ ಮಾಡಿ ಜಾನುವಾರಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.
ನವ ದೆಹಲಿ, ಏಪ್ರಿಲ್ 23: ಶನಿವಾರ ಕೋಣಗಳನ್ನು ಸಾಗಣೆ ಮಾಡುತ್ತಿದ್ದ ಮೂರು ಜನರ ಮೇಲೆ ನವ ದೆಹಲಿಯಲ್ಲಿ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ದೆಹಲಿಯ ಡಿಸಿಪಿ ಆರ್ ಬನಿಯಾ, "ಮೂವರು ಸಕ್ರಮ ಕಸಾಯಿಖಾನೆಗೆ ಬಫೆಲೋಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಪೀಪಲ್ ಫಾರ್ ಎನಿಮಲ್ಸ್ (ಪಿಎಫ್ಎ) ಸದಸ್ಯರ ಜತೆ ಜಗಳ ನಡೆದಿದೆ. ಆದರೆ ಇದನ್ನು ಸಂಘಟನೆಯವರು ಅಲ್ಲಗಳೆದಿದ್ದಾರೆ," ಎಂದು ಹೇಳಿದ್ದಾರೆ.[ರೋಗಿಗಳಿಗೆ ಜನರಿಕ್ ಔಷಧಗಳನ್ನೇ ನೀಡಿ: ಎಂಸಿಐ]
ಆದರೆ ದಾಳಿ ಮಾಡಿರುವವರು ಗೋ ರಕ್ಷಕರಲ್ಲ. ಸರಕಾರೇತರ ಸಂಸ್ಥೆಯ ಸದಸ್ಯರು ಎಂದು ಬನಿಯಾ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಗೂ ಸ್ವಲ್ಪ ಮೊದಲು ಇದೇ ಸಂಘಟನೆಯ ಸದಸ್ಯರೊಬ್ಬರು ದೆಹಲಿ ಪೊಲೀಸರಿಗೆ ಕರೆ ಮಾಡಿ ಜಾನುವಾರಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋದಾಗ ರಿಜ್ವಾನ್, ಅಶು ಮತ್ತು ಕಾಮಿಲ್ ಎಂಬ ಮೂವರು ಯುವಕರು ಸ್ಥಳದಲ್ಲಿ ಗಾಯಗೊಂಡಿದ್ದರು. ಇವರನ್ನು ಪೊಲೀಸರು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರು ತಮ್ಮ ಮೇಲೆ ಪಿಎಫ್ಎ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಲಾರಿಯಲ್ಲಿ ಒಟ್ಟು 14 ಕೋಣಗಳಿದ್ದವು.[ಇಂದು ಎಂಸಿಡಿ ಚುನಾವಣೆ: ಮತದಾನ ಮಾಡಿದ ಕೇಜ್ರಿವಾಲ್]
ಪರಸ್ಪರ ದೂರು
ಘಟನೆಗೆ ಸಂಬಂಧಿಸಿದಂತೆ ಪಿಎಫ್ಎ ಕಾರ್ಯಕರ್ತರು ಜಾನುವಾರು ಸಾಗಣೆ ಮಾಡುತ್ತಿರುವವರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ದೂರು ನೀಡಿದ್ದಾರೆ.
ಇನ್ನು ಪೊಲೀಸರು ರಿಜ್ವಾನ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಅದರಂತೆ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಎಫ್ಎ ಅಧ್ಯಕ್ಷೆ ಕೇಂದ್ರ ಸಚಿವೆ ಮೇನಕಾ ಗಾಂಧಿಯಾಗಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, "ಘಟನೆಗೂ ನಮಗೂ ಸಂಬಂಧವಿಲ್ಲ. ದೆಹಲಿಯಲ್ಲಿ ಪಿಎಫ್ಎ ವಿಭಾಗವೂ ಇಲ್ಲ. ಯಾರೋ ಪ್ರಾಣಿಗಳ ಹಕ್ಕುಗಳ ಪರ ಹೋರಾಡುವವರು ಹೀಗೆ ಮಾಡಿರಬಹುದು. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ.