'ನಿರ್ಭಯಾ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡುವ ಆಲೋಚನೆಯೇ ನಮಗೆ ಬಂದಿರಲಿಲ್ಲ'
Recommended Video
ನವದೆಹಲಿ, ಡಿಸೆಂಬರ್ 6: ತೆಲಂಗಾಣದಲ್ಲಿನ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ನಸುಕಿನಲ್ಲಿ ಎನ್ಕೌಂಟರ್ ಮಾಡಿದ ಘಟನೆ ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿದೆ.
ಇದು ನಕಲಿ ಎನ್ಕೌಂಟರ್ ಎಂದು ಅನೇಕರು ಆರೋಪಿಸಿದ್ದಾರೆ. ವಿಚಾರಣೆ ನಡೆಯದೆ, ಅವರು ತಪ್ಪಿತಸ್ಥರೆಂದು ಸಾಬೀತಾಗದೆ ಅವರನ್ನು ಹತ್ಯೆ ಮಾಡಲಾಗಿದೆ. ಇದು ಅಪಾಯಕಾರಿ ನಡೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ಪೊಲೀಸರ ಕ್ರಮವನ್ನು ಕೂಡ ಜನರು ಬೆಂಬಲಿಸಿದ್ದಾರೆ. ಇದು ಅಸಲಿಯೋ ಅಥವಾ ನಕಲಿಯೋ ಎಂಬ ಚರ್ಚೆಗಿಂತ, ವರ್ಷಗಟ್ಟಲೆ ವಿಚಾರಣೆ ಎದುರಿಸಿ ಬದುಕುಳಿಯುವ ನ್ಯಾಯ ಪದ್ಧತಿಗಿಂತ ಅವರು ತಪ್ಪಿತಸ್ಥರೆಂದು ಗೊತ್ತಾದಾಗಲೇ ಎನ್ಕೌಂಟರ್ ಮಾಡಿರುವುದು ಕಠಿಣ ಸಂದೇಶ ರವಾನಿಸುತ್ತದೆ ಎಂದು ಸಮರ್ಥಿಸಿದ್ದಾರೆ.
ನನ್ನ ಮಗಳಿಗಾದ ಅನ್ಯಾಯ ಯಾರಿಗೂ ಆಗೋದು ಬೇಡ: ನಿರ್ಭಯಾ ತಾಯಿ
ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಎಸಗಿದ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಿದೆ. ಘಟನೆ ನಡೆದ ಹತ್ತು ದಿನಗಳಲ್ಲಿಯೇ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿದೆ. ಆದರೆ ನನ್ನ ಮಗಳ ಪ್ರಕರಣದಲ್ಲಿ ಏಳು ವರ್ಷಗಳಿಂದಲೂ ಹೋರಾಡುತ್ತಿದ್ದೇನೆ. ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು 'ನಿರ್ಭಯಾ'ಳ ತಾಯಿ ಅಹವಾಲು ಹಂಚಿಕೊಂಡಿದ್ದಾರೆ. ನಿರ್ಭಯಾಳ ಪ್ರಕರಣದಲ್ಲಿಯೂ ಅತ್ಯಾಚಾರಿಗಳನ್ನು ಹೀಗೆಯೇ ಎನ್ಕೌಂಟರ್ ಮಾಡಬೇಕಿತ್ತು ಎಂದು ಅನೇಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದರೆ ತಮಗೆ ಅಂತಹ ಆಲೋಚನೆಯೇ ಬಂದಿರಲಿಲ್ಲ ಎಂದು ದೆಹಲಿಯ ಮಾಜಿ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಹಸಿದ ಸಿಂಹಗಳಿಗೆ ಎಸೆಯಿರಿ ಎಂದರು
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ನಡೆಸಿದ ದೆಹಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್, ಆರೋಪಿಗಳನ್ನು ಕೊಲ್ಲುವ ಯಾವುದೇ ಆಲೋಚನೆ ತಮ್ಮ ಮನಸ್ಸಿಗೇ ಬಂದಿರಲಿಲ್ಲ ಎಂದು ಹೇಳಿದ್ದಾರೆ.
'ಆ ಸಮಯದಲ್ಲಿ ನಮ್ಮ ಮೇಲೆ ಅತೀವ ಒತ್ತಡವಿತ್ತು. ಆದರೆ ಅವರನ್ನು ಕೊಲ್ಲುವ ಆಲೋಚನೆ ಎಂದಿಗೂ ಬರಲಿಲ್ಲ. ಆರೋಪಿಗಳನ್ನು ಹಸಿದ ಸಿಂಹಗಳ ಮುಂದೆ ಎಸೆಯಿರಿ ಎಂಬ ಸಂದೇಶಗಳು ನಮಗೆ ಬರುತ್ತಿದ್ದವು. ಆದರೆ ನಾವು ಕಾನೂನನ್ನು ಪಾಲಿಸಿದೆವು' ಎಂದು ನೀರಜ್ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಕಲಿಯಲಿ
'ಹೈದರಾಬಾದ್ ಪೊಲೀಸರು ಸೃಷ್ಟಿಸಿರುವ ನಿದರ್ಶನವನ್ನು ನ್ಯಾಯಾಲಯ, ಸರ್ಕಾರ ಮತ್ತು ದೆಹಲಿ ಪೊಲೀಸರು ನೋಡಿ ಕಲಿಯಲಿ. ನಿರ್ಭಯಾ ಅಪರಾಧಿಗಳನ್ನು ಆದಷ್ಟು ಬೇಗನೆ ಗಲ್ಲಿಗೇರಿಸುವ ಮೂಲಕ ಸಮಾಜಕ್ಕೆ ಒಂದು ಉದಾಹರಣೆಯನ್ನು ನಿರ್ಮಿಸುವಂತೆ ನ್ಯಾಯಾಂಗ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ' ಎಂದು ನಿರ್ಭಯಾ ತಾಯಿ ಹೇಳಿದ್ದಾರೆ.
'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?
ಪೊಲೀಸರ ವಿರುದ್ಧ ಕ್ರಮ ಬೇಡ
'ಅವರ ಎಸಗಿದ ಹೀನ ಅಪರಾಧದ ರೀತಿಯಲ್ಲಿ ಅವರೂ ಅದೇ ಹಣೆಬರಹವನ್ನು ಅನುಭವಿಸುತ್ತಾರೆ. ತೆಲಂಗಾಣ ಪೊಲೀಸರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಎನ್ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನಾನು ಒತ್ತಾಯಿಸುತ್ತೇನೆ' ಎಂದು ತಿಳಿಸಿದ್ದಾರೆ.
ಅತ್ಯಾಚಾರಿಗಳಲ್ಲಿ ಭಯ ಮೂಡುತ್ತದೆ
ನಿರ್ಭಯಾಳ ತಂದೆ ಮತ್ತು ಅಜ್ಜ ಕೂಡ ತೆಲಂಗಾಣ ಎನ್ಕೌಂಟರ್ಅನ್ನು ಸ್ವಾಗತಿಸಿದ್ದಾರೆ. 'ಅತ್ಯಾಚಾರಿಗಳನ್ನು ಪೊಲೀಸರು ಎನ್ಕೌಂಟರ್ನಲ್ಲಿ ಕೊಂದ ನಡೆಯನ್ನು ನಾನು ಪ್ರಶಂಸಿಸುತ್ತೇನೆ. ಇಂತಹ ನಿರ್ಧಾರಗಳು ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸುತ್ತವೆ. ಈ ರೀತಿಯ ಹೇಯ ಕೃತ್ಯಗಳನ್ನು ಎಸಗದಂತೆ ಅವರನ್ನು ತಡೆಯಲು ನೆರವಾಗುತ್ತವೆ' ಎಂದು ನಿರ್ಭಯಾ ಅಜ್ಜ ಹೇಳಿದ್ದಾರೆ.