ಯುಪಿಎ ಇಲ್ಲ, ಕಾಂಗ್ರೆಸ್ ಬೇಕಿಲ್ಲ ಎಂದ ದೀದಿ ವಿರುದ್ಧ ಟ್ವೀಟ್ ಸಂದೇಶ
ನವದೆಹಲಿ, ಡಿಸೆಂಬರ್ 2: ಸಂಸತ್ ಚಳಿಗಾಲ ಅಧಿವೇಶನ ನಡೆಯುತ್ತಿರುವ ಈ ಕಾಲದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕಾಂಗ್ರೆಸ್ ಒತ್ತಿ ಹೇಳಿದೆ. ಯುಪಿಎ ವಿರುದ್ಧ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
"ಯುಪಿಎ. ಕಾಂಗ್ರೆಸ್ ಇಲ್ಲದೇ ಯುಪಿಎ ಎಂಬುದು ಆತ್ಮವಿಲ್ಲದ ದೇಹವಿದ್ದಂತೆ. ಇದು ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಾದ ಕಾಲವಾಗಿದೆ," ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಎಸ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದ ಮಮತಾ ಬ್ಯಾನರ್ಜಿ, ಯುಪಿಎ ಎಂಬುದೇ ಇಲ್ಲ ಎಂಬ ಹೇಳಿಕೆ ನೀಡಿದ್ದರು.
'ಕಾಂಗ್ರೆಸ್ ಇಲ್ಲದೆ ಬಿಜೆಪಿ ಸೋಲು ಕನಸು': ಮಮತಾಗೆ ಕೆಸಿ ವೇಣುಗೋಪಾಲ್ ತಿರುಗೇಟು
ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ಒಂದು ಕಾಲದಲ್ಲಿ ಯುಪಿಎ(ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್) ಮೈತ್ರಿಕೂಟದ ಭಾಗವಾಗಿತ್ತು. ಇದೇ ಯುಪಿಎ ನೇತೃತ್ವದ ಸರ್ಕಾರವು 2004 ರಿಂದ 2014ರವರೆಗೂ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಲ್ಲಿ ಟಿಎಂಸಿ ಕೂಡಾ ಸೇರಿಕೊಂಡಿತ್ತು.
ಬಿಜೆಪಿ
ವಿರುದ್ಧ
ಹೋರಾಟಕ್ಕೆ
ಒಗ್ಗಟ್ಟಾಗಲು
ಖರ್ಗೆ
ಕರೆ:
"ಕಾಂಗ್ರೆಸ್ಸಿನ ವಿವಿಧ ಸಾಮಾಜಿಕ-ರಾಜಕೀಯ ವಿಷಯಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷುವನ್ನೂ ಸೇರಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೇವೆ. ವಿರೋಧ ಪಕ್ಷಗಳು ತಮ್ಮ ತಮ್ಮಲ್ಲೇ ಜಗಳವಾಡಿಕೊಳ್ಳಬಾರದು, ನಾವು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಬೇಕಿದೆ," ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಿ ಹೇಳಿದ್ದಾರೆ.
ವಿಪಕ್ಷ ನಾಯಕಿ ಎಂದು ಬಿಂಬಿಸುವ ಯತ್ನ:
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ತೃಣಮೂಲ ಪಕ್ಷವು ಪ್ರಚಂಡ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿಯವರನ್ನು ಪ್ರಬಲ ಹಾಗೂ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕಿಯಂತೆ ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನಂತರದ ಅತಿದೊಡ್ಡ ರಾಷ್ಟ್ರೀಯ ಪಕ್ಷವನ್ನಾಗಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಳೆಸುವುದಕ್ಕೆ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಗೋವಾ, ಬಿಹಾರ, ಮೇಘಾಲಯ ಮತ್ತು ಹರಿಯಾಣದಲ್ಲೂ ಟಿಎಂಸಿ ತನ್ನ ಛಾಪು ಮೂಡಿಸುವುದಕ್ಕೆ ಪ್ರಯತ್ನಿಸುತ್ತಿದೆ.
ಯುಪಿಎ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದೇನು?:
ಕೇಂದ್ರದಲ್ಲಿ ನಾವು ಯುಪಿಎ ಜೊತೆಗೆ ಮುನ್ನಡೆಯಬೇಕೇ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಶ್ನಿಸಿದ್ದಕ್ಕೆ ಮಮತಾ ಬ್ಯಾನರ್ಜಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದರು. "ಏನು ಯುಪಿಎ? ಈಗ ಯುಪಿಎ ಇಲ್ಲ? ಯುಪಿಎ ಎಂದರೇನು? ನಾವು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ನಮಗೆ ಬಲಿಷ್ಠವಾದ ಪರ್ಯಾಯ ವ್ಯವಸ್ಥೆ ಬೇಕಾಗಿದೆ," ಎಂದು ಪ್ರತಿಕ್ರಿಯೆ ನೀಡಿದ್ದರು.
"ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದೇ ಆದರೆ, ನಾನು ಗೋವಾದಲ್ಲಿ ಏಕೆ ಸ್ಪರ್ಧೆ ಮಾಡಬಾರದು," ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದರು. "ಬಿಜೆಪಿ ವಿರುದ್ಧ ಹೋರಾಡುವುದು ಹಾಗೂ ಕ್ಷೇತ್ರದಲ್ಲಿ ಉಳಿಯುವುದೇ ಇಲ್ಲಿ ಮುಖ್ಯ, ಇಲ್ಲದಿದ್ದರೆ ಅವರು ನಿಮ್ಮನ್ನು ಔಟ್ ಮಾಡುತ್ತಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದರೆ ಬಿಜೆಪಿಯನ್ನು ಸೋಲಿಸುವುದು ಸುಲಭವಾಗಿರುತ್ತದೆ. ರಾಜ್ಯದಲ್ಲಿ ಪರಿಸ್ಥಿತಿ ಚೆನ್ನಾಗಿದ್ದರೂ ನಾನು ಬಂಗಾಳದಿಂದ ಹೊರ ಬರಬೇಕಾಗಿದೆ, ಅದೇ ರೀತಿ ಇತರರೂ ಕೂಡ ಹೊರ ಬಂದರೆ ಉತ್ತಮ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ," ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಬಿಜೆಪಿ ವಿರುದ್ಧ ಹೋರಾಡಲು ಟಿಎಂಸಿಗೆ ಬರುವಂತೆ ಆಹ್ವಾನ:
ಭಾರತೀಯ ಜನತಾ ಪಕ್ಷದ ವಿರುದ್ಧ ಹೋರಾಡಲು ಬಯಸುವ ಯಾವುದೇ ನಾಯಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮಮತಾ ಬ್ಯಾನರ್ಜಿ ಮುಕ್ತ ಆಹ್ವಾನ ನೀಡಿದ್ದರು. ನವದೆಹಲಿಯಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ಅಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಆಗುತ್ತೀರಾ ಎಂಬ ಪ್ರಶ್ನೆಗೆ, ಅದೇನು ಕಡ್ಡಾಯವೇ ಎಂದು ಮರುಪ್ರಶ್ನೆ ಹಾಕಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಸ್ಪರ್ಧಿಸಿದ್ದವು. ಅದಾಗ್ಯೂ, ಬಂಗಾಳದಲ್ಲಿ ಟಿಎಂಸಿ ಪ್ರಚಂಡ ಗೆಲುವು ಸಾಧಿಸಿತ್ತು.
Recommended Video