ಖಾಸಗಿ ವಲಯದ ಉದ್ಯೋಗಕ್ಕೆ ಮೀಸಲಾತಿ ಇಲ್ಲ
ನವದೆಹಲಿ, ಡಿಸೆಂಬರ್ 11: ಖಾಸಗಿ ವಲಯದ ಉದ್ಯಮದ ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಚಿವ ರತನ್ ಲಾಲ್ ಕಠಾರಿಯಾ ತಿಳಿಸಿದ್ದಾರೆ.
ಈ ಮೂಲಕ ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ಕಳೆದ ಒಂದು ವರ್ಷದಿಂದ ಎತ್ತಿದ್ದ ಮೀಸಲಾತಿ ಗೊಂದಲಕ್ಕೆ ಕೇಂದ್ರ ಸಚಿವರು ತೆರೆ ಎಳೆದಿದ್ದಾರೆ.
ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡುವ ಬಗ್ಗೆ ಕಳೆದ ಕೆಲ ವರ್ಷಗಳಿಂದ ಚರ್ಚೆ ನಡೆಯುತ್ತಿದೆ ಈ ಸಂಬಂಧಕೆಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಮೀಸಲಾತಿಗೆ ಆಗ್ರಹಿಸಿದ್ದವು.
ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ರತ್ನ ಲಾಲ್ ಕಠಾರಿಯಾ ಮೀಸಲಾತಿ ಕೊಡುವುದು ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಬದಲಾಗಿ ಸಮಾಜದಲ್ಲಿನ ಹಿಂದುಳಿದ ಹಾಗೂ ಇತರೆ ವರ್ಗಗಳಿಗೆ ಸಮಾನ ನ್ಯಾಯ ಒದಗಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಹೀಗಾಗಿ ಖಾಸಗಿ ಸಂಸ್ಥೆಗಳೇ ಮುಂದೆ ಬಂದು ಪರೋಕ್ಷವಾಗಿ ಮೀಸಲಾತಿ ಜಾರಿಗೆ ಒಲವು ತೋರಿವೆ. ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಯ ಯುವ ಜನತೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ನೀತಿ ತೂಪಿಸುವ ಇರಾದೆಯನ್ನು ಹೊಂದಿದೆ.
ಈ ಹಂತದಲ್ಲಿ ಕೇಂದ್ರ ಸರ್ಕಾರವು ಈಸಲಾತಿ ನಿಯಮ ಜಾರಿಗೆ ಯಾವುದೇ ನಿರ್ಧಾರ ಮಾಡಿಲ್ಲ. ಒಂದೊಮ್ಮೆ ಖಾಸಗಿ ಸಂಸ್ಥೆಗಳು ಜಾರಿ ಮಾಡಿದರೆ ಅದನ್ನು ಸರ್ಕಾರ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಸರ್ಕಾರಿ ಉದ್ಯೋಗಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಉದ್ಯೋಗಗಳ ಮೇಲೆ ಒತ್ತಡ ಬೀಳುತ್ತಿದೆ. ಅಲ್ಲಿಯೂ ಮೀಸಲಾತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಆದರೆ ಸರ್ಕಾರಕ್ಕೆ ಇದು ಬಿಸಿ ತುಪ್ಪದಂತಾಗಿದೆ. ಖಾಸಗಿ ಉದ್ಯಮಗಳು ಅರ್ಹತೆ ನೋಡದೆ ನೇರವಾಗಿ ಮೀಸಲಾತಿಗೆ ಮಣೆ ಹಾಕಲು ಹಿಂಜರಿಯುತ್ತಿವೆ ಆದಾಗ್ಯೂ ಅರ್ಹ ಅಭ್ಯರ್ಥಿಗಳಿಗೆ ಜಾತಿ ಮೂಲಕ ಪ್ರಾತಿನಿಧ್ಯ ನೀಡುವ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.