ಪ್ರಮುಖ 6 ಮಸೂದೆಗಳಿಗೆ ಒಪ್ಪಿಗೆ ನೀಡಿದ ಮೋದಿ ನೇತೃತ್ವದ ಸರ್ಕಾರ
ನವದೆಹಲಿ, ಡಿಸೆಂಬರ್ 04: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಪ್ರಮುಖ 6 ಮಸೂದೆಗಳಿಗೆ ಹಸಿರು ನಿಶಾನೆ ನೀಡಿದೆ. ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಕರುಣಿಸುವ ಪೌರತ್ವ ತಿದ್ದುಪಡಿ, ಎಸ್ಸಿ, ಎಸ್ಟಿ ಮೀಸಲಾತಿ ವಿಸ್ತರಣೆ ಸೇರಿದಂತೆ ಅತ್ಯಂತ ಪ್ರಮುಖ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ ಪಕ್ಷಕ್ಕೆ ಅತ್ಯಂತ ಪ್ರಮುಖವಾಗಿರುವ ಪೌರತ್ವ ಮಸೂದೆ ತಿದ್ದುಪಡಿಗೆ ಸಂಪುಟ ಅಸ್ತು ನೀಡಿದ್ದು, ಸಂಸತ್ತಿನಲ್ಲಿ ಮತ್ತೊಮ್ಮೆ ಈ ಮಸೂದೆಗಳ ಮಂಡನೆಗೆ ಸಿದ್ದವಾಗಿದೆ.
ಎಸ್ಸಿ/ಎಸ್ಟಿ ಮೀಸಲಾತಿ ಮತ್ತೆ 10 ವರ್ಷಕ್ಕೆ ಮುಂದುವರಿಕೆ
ಭಾರತದ ಅಕ್ಕ ಪಕ್ಕ ರಾಜ್ಯಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ಇದರ ಮುಖ್ಯ ಉದ್ದೇಶ. ಈ ಮಸೂದೆಯಿಂದ ಮುಸ್ಲಿಂರನ್ನು ಹೊರಗಿಡಲಾಗಿದೆ.
370 ವಿಧಿ ರದ್ದತಿಯಂತೆಯೇ ಪೌರತ್ವ ತಿದ್ದುಪಡಿ ಮಸೂದೆ
ಕಳೆದ ಜನವರಿಯಲ್ಲಿ ಲೋಕಸಭೆಯಲ್ಲಿ ಪೌರತ್ವ ಮಸೂದೆ ಮಂಡಿಸಲಾಗಿತ್ತು. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ, ಆದರೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿರಲಿಲ್ಲ. ಬಹುಮತ ಇಲ್ಲದ ಕಾರಣ ಕೇಂದ್ರ ಸರ್ಕಾರ ಅದನ್ನು ಹಿಂದಕ್ಕೆ ಪಡೆದಿತ್ತು.
ಮತ್ತೆ ಈ ಮಸೂದೆ ಮುನ್ನೆಲೆಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ 370 ವಿಧಿ ರದ್ದು ನಿರ್ಧಾರದಂತೆಯೇ ಪೌರತ್ವ ತಿದ್ದುಪಡಿ ಮಸೂದೆಯೂ ಕೇಂದ್ರ ಸರ್ಕಾರಕ್ಕೆ ಅತ್ಯಂತ ಪ್ರಮುಖವಾಗಿದೆ.
ಸೂಕ್ತ ದಾಖಲೆ ಇಲ್ಲದಿದ್ದರೂ ಪೌರತ್ವ
ಅಗತ್ಯ ದಾಖಲೆ ಪತ್ರ ಇಲ್ಲದೆ ಭಾರತಕ್ಕೆ ಬಂದಿರುವ, ದೇಶದಲ್ಲಿದ್ದೂ ದಾಖಲೆಗಳ ಅವಧಿ ಮುಕ್ತಾಯವಾಗಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ ಮತ್ತು ಪಾರ್ಸಿ ಧರ್ಮದವರಿಗೆ ಭಾರತದ ಪೌರತ್ವ ನೀಡಲು ಸಮ್ಮತಿ ನೀಡಿದೆ.
1955 ರಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮುಸ್ಲಿಮೇತರ ವಲಸಿಗರಿಗೆ ರಯಾಯಿತಿ ನೀಡಲಾಗಿತ್ತು. 2004 ಕ್ಕಿಂತ ಮೊದಲು ಭಾರತ ಪ್ರವೇಶ ಪಡೆದವರಿಗೆ ಇದರಿಂದ ಅನುಕೂಲವಾಗಿತ್ತು. ಈಗ ಅಂತವರಿಗೆ ಶಾಶ್ವತವಾಗಿ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!
ಜಂಟಿ ಸಮಿತಿಯಿಂದ ವರದಿ ಸಲ್ಲಿಕೆ
ಈ ಪೌರತ್ವ ಮಸೂದೆ ಮುಸ್ಲಿಂರನ್ನು ಹೊರಗಿಟ್ಟಿರುವುದಕ್ಕೆ ಶಿವಸೇನೆ, ಕಾಂಗ್ರೆಸ್ ಮತ್ತು ಕೆಲವು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಸಂವಿಧಾನದ 14 ನೇ ವಿಧಿ ಪ್ರಕಾರ ಸಮಾನತೆಗೆ ವಿರುದ್ದವಾಗಿದೆ. ಸಂವಿಧಾನದ ಆಶಯ ಎತ್ತಿ ಹಿಡಿಯುವಂತೆ ಆಗ್ರಹಿಸಿವೆ.
2016 ರಲ್ಲಿ ಪ್ರಥಮ ಬಾರಿಗೆ ಈ ಮಸೂದೆ ಅಂಗೀಕಾರವಾಗಿತ್ತು, ಆಗ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದ್ದವು. ನಂತರ ಜಂಟಿ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಅದೇ ಸಮಿತಿ ಕಳೆದ ಜನವರಿಯಲ್ಲಿ ವರದಿ ಸಲ್ಲಿಸಿದೆ.
ದೇಶಾದ್ಯಂತ ಎನ್ಆರ್ ಸಿ ಜಾರಿಗೆ
ಈ ಮೊದಲು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸಾಗಿದ್ದರೂ, ರಾಜ್ಯಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷ, ಎಡರಂಗ, ಆರ್ ಜೆಡಿ ಸೇರಿದಂತೆ ಅನೇಕ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ದೇಶಾದ್ಯಂತ ಕೇಂದ್ರ ಸರ್ಕಾರ ಎನ್ಆರ್ ಸಿ ಜಾರಿಗೆ ತರಲು ನಿರ್ಧರಿಸಿರುವ ಬೆನ್ನಲ್ಲೇ ಈ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ.
ಅಲ್ಲದೇ ಇದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಮತ್ತೆ 10 ವರ್ಷಗಳಿಗೆ ಮುಂದುವರೆಸಲಾಗಿದೆ. ಈ ಮೀಸಲಾತಿ ಅವಧಿ ಜನವರಿ 25, 2020 ಕ್ಕೆ ಕೊನೆಯಾಗಲಿದ್ದು, ಸಂಪುಟ ಸಭೆಯಲ್ಲಿ 10 ವರ್ಷಗಳಿಗೆ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.