ಆಮ್ಲಜನಕ ಸಾಂದ್ರಕದ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ
ನವದೆಹಲಿ, ಜೂನ್ 4: ಕೊರೊನಾ ವೈರಸ್ನ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಗಳು ದೇಶಾದ್ಯಂತ ಹೆಚ್ಚಾಗಿತ್ತು. ತುರ್ತು ಸಂದರ್ಭದಲ್ಲಿ ಅಗತ್ಯವಾಗಿದ್ದ ಆಮ್ಲಜನಕದ ಸಾಂದ್ರಕದ ಬೇರೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಸರ್ಕಾರದ ಮಾಹಿತಿ ಪ್ರಕಾರವೇ ಇದರ ಬೆಲೆ 198 ಶೇಕಡಾದಷ್ಟು ಹೆಚ್ಚಾಗಿದೆ. ಹೀಗಾಗಿ ಇವುಗಳ ಬೆಲೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಔಷಧಿಗಳ ಬೆಲೆ ನಿಯಂತ್ರಣ ಆದೇಶದ ಮೂಲಕ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ(ಎನ್ಪಿಪಿಎ) ಆಮ್ಲಜನಕ ಸಾಂದ್ರಕಗಳ ಮೇಲಿನ ವಿತರಣಾ ಬೆಲೆಯಲ್ಲಿ ಶೇಕಡಾ 70ರ ವರೆಗೆ ನಿಯಂತ್ರಣ ಹೇರಿದೆ. ಈ ಮೂಲಕ ಆಮ್ಲಜನಕ ಸಾಂಧ್ರಕದ ಮಿತಿ ಮೀರಿದ ಬೆಲೆಗೆ ಕಡಿವಾಣ ಬೀಳಲಿದೆ. ಇದಕ್ಕೂ ಮುನ್ನ 2019ರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಔಷಧಿಗಳ ಮೇಲೆ ಬೆಲೆ ನಿಯಂತ್ರಣ ಹೇರುವಲ್ಲಿ ಯಶಸ್ವಿಯಾಗಿತ್ತು.
ಈ ಅಧಿಸೂಚನೆಯ ಪ್ರಕಾರ ಪರಿಷ್ಕೃತ ಗರಿಷ್ಟ ಮಾರುಕಟ್ಟೆ ಬೆಲೆಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡುವಂತೆ ಎನ್ಪಿಪಿಎ ಉತ್ಪಾದಕರು ಹಾಗೂ ಆಮದುದಾರರಿಗೆ ಸೂಚನೆ ನೀಡಿದೆ. ಪರಿಷ್ಕೃತ ದರಗಳನ್ನು ಎನ್ಪಿಪಿಎ ಒಂದು ವಾರದ ಒಳಗೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿದೆ.
ಆಮ್ಲಜನಕದ ಸಾಂದ್ರಕಗಳನ್ನು ಮಾರಾಟ ಮಾಡುವ ವ್ಯಾಪರಿಗಳು, ಆಸ್ಪತ್ರೆ ಮತ್ತು ಸಂಸ್ಥೆಗಳು ಉತ್ಪಾದಕರಿಂದ ಪಡೆದುಕೊಂಡಿರುವ ಬೆಲೆಯ ಪಟ್ಟಿಯನ್ನು ವ್ಯಾಪಾರ ಆವರಣದ ಒಂದು ಸ್ಪಷ್ಟವಾದ ಭಾಗದಲ್ಲಿ ಪ್ರದರ್ಶಿಸುತ್ತವೆ. ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲಗಳಾಗುತ್ತದೆ. ಬೆಲೆ ನಿಯಂತ್ರಣದ ನಂತರವೂ ಪರಿಷ್ಕೃತ ಮಾರುಕಟ್ಟೆ ಬೆಲೆಯನ್ನು ಅನುಸರಿಸದ ತಯಾರಕರು ಹಾಗೂ ಉತ್ಪಾದಕರು ಅಧಿಕ ಶುಲ್ಕವನ್ನು ಪಡೆದ ಮೊತ್ತಕ್ಕೆ 15 ಶೇಕಡಾ ಬಡ್ಡಿ ಹಾಗೂ 100 ಶೇಕಡಾದಷ್ಟು ದಂಡಪಾವತಿಗೆ ಅರ್ಹರಾಗಿರುತ್ತಾರೆ ಎಂದು 1955ರ ಅಗತ್ಯ ಸರಕುಗಳ ಕಾಯ್ದೆ ತಿಳಿಸುತ್ತದೆ.
ಇನ್ನು ಈ ನಿಯಮಗಳ ಪಾಲನೆ ಸೂಕ್ತ ರೀತಿಯಲ್ಲಿ ನಡೆಯುತ್ತಿದೆಯೇ ಎಂಬುದನ್ನು ರಾಜ್ಯ ಔಷಧಿ ನಿಯಂತ್ರಕಗಳು ಮೇಲ್ವಿಚಾರಣೆಯನ್ನು ನಡೆಸಲಿದೆ. ಈ ಆದೇಶ ನವೆಂಬರ್ 30, 2021ರವರೆಗೆ ಜಾರಿಯಲ್ಲಿ ಇರಲಿದೆ.