ಕೊರೊನಾ ಚಿಕಿತ್ಸೆಯಲ್ಲಿ ಸಹಾಯ ಮಾಡಲು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ದೆಹಲಿ ಸರ್ಕಾರ
ನವದೆಹಲಿ, ನವೆಂಬರ್ 23: ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಯಲ್ಲಿ 4 ಮತ್ತು 5 ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ದಂತವೈದ್ಯರು ನವದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಾಯ ಮಾಡಲು ದೆಹಲಿ ಸರ್ಕಾರ ಅವಕಾಶ ನೀಡಿದೆ.
ಇನ್ಮುಂದೆ ದೆಹಲಿಯ ಸರ್ಕಾರಿ ಆಸ್ಪತ್ರೆಗಳು 4 ಮತ್ತು 5 ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಮತ್ತು ದಂತವೈದ್ಯರನ್ನು ಕೊರೊನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಡಗಿಸಿಕೊಳ್ಳಬಹುದು.
ಮಾಸ್ಕ್ ಧರಿಸದಿದ್ದರೆ 2 ಸಾವಿರ ರೂ ದಂಡ: ದೆಹಲಿ ಸರ್ಕಾರ ಆದೇಶ
ದೆಹಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಕೊರೊನಾ ಐಸಿಯುಗಳಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಆದೇಶವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಬೆಳಿಗ್ಗೆ ಆದೇಶ ಹೊರಡಿಸಿದರು.
ಆಸ್ಪತ್ರೆಗಳಲ್ಲಿನ ಮಾನವಶಕ್ತಿ(ವೈದ್ಯ) ಕೊರತೆಯನ್ನು ನೀಗಿಸಲು ದೆಹಲಿಯಲ್ಲಿನ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
4 ಮತ್ತು 5 ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲಿದ್ದು, ನಿರ್ಣಾಯಕ ಕೊರೊನಾ ಸೋಂಕಿತ ರೋಗಿಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ.
ಕೊರೊನಾ ಐಸಿಯು ಹಾಸಿಗೆಗಳನ್ನು ದೆಹಲಿಯಲ್ಲಿ 500 ಹಾಸಿಗೆಗಳನ್ನು ಹೆಚ್ಚಿಸಿದ ನಂತರ ವೈದ್ಯಕೀಯ ಸಿಬ್ಬಂದಿಯ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಲು ಆದೇಶ ನೀಡಿದರು.
ಕಳೆದ ಕೆಲವು ದಿನಗಳಿಂದ ಕೊರೊನಾ ವೈರಸ್ ಮೂರನೇ ಅಲೆ ಪ್ರಾರಂಭವಾಗಿದ್ದು, ದೆಹಲಿಯಲ್ಲಿ ಕೊರೊನಾ ವೈರಸ್ ರೋಗಿಗಳಿಗೆ ಹೆಚ್ಚಿನ ಐಸಿಯು ಹಾಸಿಗೆಗಳನ್ನು ಸೇರಿಸಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಭಾನುವಾರ ಪ್ರಕಟಿಸಿದ್ದರು.
ಕೊರೊನಾವೈರಸ್ ಏಕಾಏಕಿ ಮೂರನೇ ಅಲೆ ಆರಂಭಗೊಂಡಿದ್ದು, ರಾಷ್ಟ್ರೀಯ ಸಾವಿನ ಪ್ರಮಾಣ ಶೇ.1.48 ಇದ್ದರೆ, ದೆಹಲಿಯಲ್ಲಿ ಶೇ.1.58 ರಷ್ಟು ಸಾವಿನ ಪ್ರಮಾಣ ವರದಿಯಾಗಿದೆ.
ಶನಿವಾರ 111 ಸಾವಿನ ಪ್ರಕರಣಗಳು, ಶುಕ್ರವಾರ 118, ಬುಧವಾರ 131 ಸಾವುಗಳು, ಇಲ್ಲಿಯವರೆಗಿನ ಅತಿ ಹೆಚ್ಚು ಸಾವಿನ ಪ್ರಕರಣಗಳ ದಿನವೆಂದರೆ ನವೆಂಬರ್ 12, ಅಂದು 104 ಸಾವುಗಳು ಸಂಭವಿಸಿವೆ ಎಂದು ಅರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ.