ವಿರೋಧ ಪಕ್ಷ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ!
ನವದೆಹಲಿ, ಜೂ. 22: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ. "ಇಡೀ ಭಾರತ ದೇಶವನ್ನು ವಶಪಡಿಸಿಕೊಳ್ಳುವುದು ಬಿಜೆಪಿ ಪಕ್ಷದ ಗುರಿಯಾಗಿದೆ" ಎಂದು ಕಿಡಿಕಾರಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, "ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಮಾತನಾಡಿದರೆ ಅದನ್ನು ಬಿಜೆಪಿ ಸಹಿಸುವುದಿಲ್ಲ. ಅವರು ವಿರೋಧ ಪಕ್ಷ ಮುಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಸಾಗುತ್ತಿದ್ದಾರೆ. ಮೊದಲು ಅವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದಾರೆ. ಈಗ ಅದನ್ನು ವಿಪಕ್ಷ ಮುಕ್ತ ಎಂದು ಬದಲಾಯಿಸಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
Breaking: ಮಹಾರಾಷ್ಟ್ರ ಸರ್ಕಾರಕ್ಕೆ ಸಿಡಿಲು ಹೊಡೆಯುವ ಕಾಲದಲ್ಲಿ ಸಿಎಂಗೆ ಕೊರೊನಾ ವೈರಸ್!
ಶಾಸಕರ ಬಂಡಾಯ; "ಮಹಾರಾಷ್ಟ್ರದ 30 ಶಾಸಕರು ತಮ್ಮೊಂದಿಗೆ ಅಸ್ಸಾಂನ ಗುವಾಹಟಿಗೆ ತೆರಳಿದ್ದು, ಅವರು ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. 30 ಶಾಸಕರು ಕೂಡ ತಮ್ಮ ಜೊತೆಗಿದ್ದಾರೆ. ಆದರೆ ಅವರು ಯಾರ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ" ಎಂದು ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.
ಬಿಜೆಪಿ ನಾಯಕರಿಂದ ಸ್ವಾಗತ; ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ನೇತೃತ್ವದ ಸರ್ಕಾರದ ವಿರುದ್ಧ ಶಿವಸೇನೆ ಶಾಸಕರು ಬಂಡಾಯವೆದ್ದಿದ್ದಾರೆ. ಬಂಡಾಯ ಶಾಸಕರನ್ನು ಗುವಾಹಟಿಯ ವಿಮಾನ ನಿಲ್ದಾಣದಲ್ಲಿ ಅಸ್ಸಾಂನ ಬಿಜೆಪಿ ಸಂಸದ ಪಲ್ಲಬ್ ಲೋಚನ್ ದಾಸ್ ಮತ್ತು ಶಾಸಕ ಸುಶಾಂತ ಬೊರ್ಗೊಹೈನ್ ಬರಮಾಡಿಕೊಂಡರು.
ಬಂಡಾಯ ಶಾಸಕರನ್ನು ಅಸ್ಸಾಂ ರಾಜ್ಯ ಸಾರಿಗೆ ಸಂಸ್ಥೆಯ ಮೂರು ಬಸ್ಗಳಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ನಗರದ ಹೊರವಲಯದಲ್ಲಿರುವ ಐಷಾರಾಮಿ ಹೋಟೆಲ್ಗೆ ಕರೆದೊಯ್ಯಲಾಗಿದೆ. 30 ಶಿವಸೇನೆ ಮತ್ತು ಏಳು ಸ್ವತಂತ್ರ ಶಾಸಕರು ಸೇರಿದಂತೆ 40 ಮಹಾರಾಷ್ಟ್ರ ಶಾಸಕರು ಪತ್ರಕ್ಕೆ ಸಹಿ ಹಾಕುವ ಮೂಲಕ ಏಕನಾಥ ಶಿಂಧೆಗೆ ಬೆಂಬಲ ಸೂಚಿಸಿದ್ದಾರೆ.
Maharashtra Political Crisis : ಠಾಕ್ರೆ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದು ಹೇಗೆ ಏಕನಾಥ್ ಶಿಂಧೆ?
ಬಿಜೆಪಿ ಬಂಡಾಯ ಎಬ್ಬಿಸಿದೆ; ಬಂಡಾಯ ಶಾಸಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗಾಗಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ಪತ್ರ ಬರೆಯಬಹುದು ಎಂದು ಮೂಲಗಳು ತಿಳಿಸಿವೆ. ಆಡಳಿತಾರೂಢ ಎಂವಿಎ ಮೈತ್ರಿಕೂಟವನ್ನು ಉರುಳಿಸಲು ಬಿಜೆಪಿಯು ಬಂಡಾಯ ಎಬ್ಬಿಸಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ. ಆದರೆ ಇದನ್ನು ಬಿಜೆಪಿ ನಿರಾಕರಿಸಿದೆ.
ಮ್ಯಾಜಿಕ್ ನಂಬರ್; ಮಹಾವಿಕಾಸ ಅಘಾಡಿ ನೇತೃತ್ವದ ಶಿವಸೇನೆಯು ವಿಧಾನಸಭೆಯಲ್ಲಿ 55 ಶಾಸಕರನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಮಿತ್ರಪಕ್ಷಗಳಾದ ಎನ್ಸಿಪಿ 53 ಮತ್ತು ಕಾಂಗ್ರೆಸ್ 44 ಶಾಸಕರು ಇದ್ದಾರೆ. 288 ಸದಸ್ಯರ ವಿಧಾನಸಭೆಯಲ್ಲಿ ಪ್ರಸ್ತುತ ಸರಳ ಬಹುಮತಕ್ಕೆ 144 ಜನರ ಬೆಂಬಲ ಬೇಕಾಗಿದೆ.