ಜೈಷ್ ಉಗ್ರ ಸಂಘಟನೆ ಈಗ ಮಸೂದ್ ಅಜರ್ ಕೈಲಿಲ್ಲ
ನವದೆಹಲಿ, ಸೆಪ್ಟೆಂಬರ್ 10: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ನೋಡಿಕೊಳ್ಳುತ್ತಿರುವುದು ಜಾಗತಿಕ ಉಗ್ರ ಮಸೂದ್ ಅಜರ್ ಅಲ್ಲ ಆತನ ಸಹೋದರ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ಎಲ್ಲಾ ಉಗ್ರ ಚಟುವಟಿಕೆಗಳನ್ನು ಮಸೂದ್ ಅಲ್ಲ ಆತನ ಸಹೋದರ ನೋಡಿಕೊಳ್ಳುತ್ತಿದ್ದಾನೆ. ಜಾಗತಿಕ ಉಗ್ರ ಮಸೂದ್ ಅಜರ್ ಆರೋಗ್ಯ ಸರಿ ಇಲ್ಲದ ಕಾರಣ ಆತನ ಸಹೋದರ ಅಬ್ದುಲ್ ರವೂಫ್ ಅಸ್ಘರ್ ಈ ಸಂಘಟನೆ ನೋಡಿಕೊಳ್ಳುತ್ತಿದ್ದಾನೆ.
ಜಾಗತಿಕ ಉಗ್ರ ಮಸೂದ್ ಅಜರ್ನನ್ನು ಗುಟ್ಟಾಗಿ ಬಿಡುಗಡೆಗೊಳಿಸಿದ ಪಾಕಿಸ್ತಾನ
ವಿಶ್ವಸಂಸ್ಥೆಯಿಂದ 'ಜಾಗತಿಕ ಉಗ್ರ' ಎಂದು ಕರೆಯಲ್ಪಟ್ಟಿರುವ ಮಸೂದ್, ಈಗ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಭಾರತವು ವೈಯಕ್ತಿಕ ಉಗ್ರ ಎಂದು ಘೋಷಿಸಿದೆ.
ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಫೆಬ್ರವರಿಯಲ್ಲಿ ಬಾಲಾಕೋಟ್ ಮೇಲೆ ಸೇನೆಯ ದಾಳಿ
ಫೆಬ್ರವರಿಯಲ್ಲಿ ಬಾಲಾಕೋಟ್ ಮೇಲೆ ಐಎಎಫ್ ವಾಯುದಾಳಿ ನಡೆಸಿತ್ತು, ಅಲ್ಲಿದ್ದ ಜೈಷ್ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು. ಅದಾದ ಬಳಿಕ ಜೈಷ್-ಎ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಬಂಧಿಸಲಾಗಿತ್ತು.
ಅಸ್ಘರ್ ಹೆಸರೂ ಎಲ್ಲಿಯೂ ಉಲ್ಲೇಖವಾಗದಂತೆ ನಿಗಾ
ಈ ಅಸ್ಘರ್ ಭಯೋತ್ಪಾದಕರನ್ನು ಸಂಘಟಿಸಿ, ದಾಳಿ ಮಾಡಿಸುತ್ತಾನೆ, ಆತ ಪಾಕಿಸ್ತಾನದ ಸಶಸ್ತ್ರ ಬೆಂಗಾವಲಿನೊಂದಿಗೆ ಕೆಲಸ ಮಾಡುತ್ತಾನೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿರುವುದೇ ಈ ಅಸ್ಘರ್ ಎಂದು ಹೇಳಲಾಗುತ್ತಿದೆ.
ಪಠಾಣ್ಕೋಟ್ ದಾಳಿಯಲ್ಲಿ ಅಸ್ಘರ್ ಕೈವಾಡ
2016ರಲ್ಲಿ ನಡೆದ ಪಠಾಣ್ ಕೋಟ್ ದಾಳಿಯಲ್ಲಿ ಉಗ್ರ ಅಸ್ಘರ್ ಕೈವಾಡವಿತ್ತು. ಹಾಗೆಯೇ 2016ರಲ್ಲಿ ಸೇನೆಯ ಕ್ಯಾಂಪ್ ಮೇಲೆ ಕೂಡ ದಾಳಿ ನಡೆಸಿದ್ದರು. ಪುಲ್ವಾಮಾ ಉಗ್ರರ ದಾಳಿಯಲ್ಲೂ ಕೂಡ ಅಸ್ಘರ್ ಕೈವಾಡವಿತ್ತು. ಇನ್ನೂ ಹೆಚ್ಚಿನ ದಾಳ ನಡೆಸುತ್ತೇವೆ ಎಂದು ಜೈಷ್ ವೆಬ್ಸೈಟ್ ರಂಗೋನೂರ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಸೂದ್ ಅಜರ್ನನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದ ಪಾಕಿಸ್ತಾನ
ಜಾಗತಿಕ ಉಗ್ರ ಮಸೂದ್ ಅಜರ್ನನ್ನು ಪಾಕಿಸ್ತಾನವು ಸದ್ದಿಲ್ಲದೆ ಬಿಡುಗಡೆ ಮಾಡಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಭಾರತ ವಿರುದ್ಧ ಪಾಕಿಸ್ತಾನ ಭಾರಿ ಸಂಚು ರೂಪಿಸುತ್ತಿದ್ದು, ಇದಕ್ಕಾಗಿ ಜಾಗತಿಕ ಉಗ್ರ ಹಣೆಪಟ್ಟಿಯ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ರಹಸ್ಯವಾಗಿ ಮಸೂದ್ ಅಜಾರ್ ನನ್ನು ಬಿಡುಗಡೆ ಮಾಡಿದೆ. ಬೇರೆ ಭಯೋತ್ಪಾದನಾ ಸಂಘಟನೆಗಳು ಕೂಡಾ ಬಹಿರಂಗವಾಗಿಯೇ ಕೆಲಸ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.