ದೆಹಲಿ ಸಿಎಂ ಜೊತೆ ಚಂದ್ರಶೇಖರ ರಾವ್ ಪಂಜಾಬ್ ಪ್ರವಾಸ
ನವದೆಹಲಿ ಮೇ 22: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಭಾನುವಾರ ಪಂಜಾಬ್ಗೆ ಭೇಟಿ ನೀಡಿದರು, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ಕಳೆದ ವರ್ಷ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿದರು. ಚಂದ್ರಶೇಖರ ರಾವ್ ಪಂಜಾಬ್ ಭೇಟಿಗೆ ಕಾರಣ ಕುತೂಹಲ ಮೂಡಿಸಿದೆ.
2024 ರ ಲೋಕಸಭೆ ಚುನಾವಣೆಗೆ ಮುನ್ನ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಹಿಡಿತವನ್ನು ಬಲಪಡಿಸಲು ಹೊರಟಿದ್ದಾರೆ. ಅವರು ಇಡೀ ದೇಶಾದ್ಯಂತ ಪ್ರವಾಸಕ್ಕೆ ಮುಂದಾಗಿದ್ದು, ಇಂದು ಅವರು ದೆಹಲಿ ಸಿಎಂ ಕೇಜ್ರಿವಾಲ್ ಜೊತೆ ಪಂಜಾಬ್ ಪ್ರವಾಸ ಕೈಗೊಂಡಿದ್ದಾರೆ.
ರೈತ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳನ್ನು ಭೇಟಿ ಮಾಡುವುದಲ್ಲದೇ ಅವರಿಗೆ ಆರ್ಥಿಕ ನೆರವು ನೀಡಲಿದ್ದಾರೆ. ಚಂದ್ರಶೇಖರ ರಾವ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಇಂದು ಚಂಡೀಗಢಕ್ಕೆ ಭೇಟಿ ನೀಡಿದರು. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ 600 ರೈತರ ಕುಟುಂಬಗಳನ್ನು ಭೇಟಿಯಾದರು.
ಚಂದ್ರಶೇಖರ್ ರಾವ್ ಭೇಟಿ ವಿಶೇಷ ಏಕೆ?; 2019ರಲ್ಲಿ ಮಮತಾ ಬ್ಯಾನರ್ಜಿ ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮ ಹಿಡಿತವನ್ನು ಬಲಪಡಿಸಲು ದೇಶದ ಹಲವು ರಾಜ್ಯಗಳಿಗೆ ಪ್ರವಾಸ ಕೈಗೊಂಡರು. ಇದೀಗ ಮಮತಾ ಅವರಂತೆ ಕೆಸಿಆರ್ ಕೂಡ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಹಿಡಿತವನ್ನು ಗಟ್ಟಿ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಮೈತ್ರಿಕೂಟ ರಚನೆಗೆ ಶ್ರಮಿಸುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಯಾರೊಂದಿಗೂ ಕೈಜೋಡಿಸುವುದಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಚಂದ್ರಶೇಖರ ರಾವ್ ಪಂಜಾಬ್ ಮಾತ್ರವಲ್ಲ, ಕರ್ನಾಟಕಕ್ಕೂ ಆಗಮಿಸಲಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಹಲವು ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದರು. ಚಂದ್ರಶೇಖರ ರಾವ್ ಭಾನುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹ ಭೇಟಿ ಮಾಡಿದ್ದಾರೆ.
ಮೇ. 26ರಂದು ಕರ್ನಾಟಕದಲ್ಲಿ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ಇದಾದ ಬಳಿಕ ಮೇ 27ರಂದು ಮಹಾರಾಷ್ಟ್ರಕ್ಕೆ ತೆರಳಿ ಸಮಾಜ ಸೇವಕ ಅಣ್ಣಾ ಹಜಾರೆ ಭೇಟಿ ಮಾಡಲಿದ್ದಾರೆ.