ದೆಹಲಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಗೋಣಿ ಚೀಲದಲ್ಲಿ ಶವ ಪತ್ತೆ
ನವದೆಹಲಿ ಫೆಬ್ರವರಿ 21: ದೆಹಲಿಯ ನರೇಲಾದಲ್ಲಿ 14 ವರ್ಷದ ಬಾಲಕಿಯ ಕೊಳೆತ ದೇಹವು ಗೋಣಿ ಚೀಲದಲ್ಲಿ ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ಇಂದು ತಿಳಿಸಿದ್ದಾರೆ. ದೆಹಲಿಯ ಸನ್ನೋತ್ ಗ್ರಾಮದ ಹೊರವಲಯದಿಂದ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳನ್ನು ಹಿಡಿಯಲು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ.
ಡಿಸಿಪಿ ಬ್ರಿಜೇಂದ್ರ ಕುಮಾರ್ ಯಾದವ್ ಅವರ ಪ್ರಕಾರ, ಫೆಬ್ರವರಿ 15 ರಂದು ತನ್ನ ಮಗಳನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಂದೆಯ ಹೇಳಿಕೆಯ ಮೇರೆಗೆ ಅಪಹರಣ ಪ್ರಕರಣವನ್ನು ದಾಖಲಿಸಲಾಗಿದೆ. ನಂತರ ಪೊಲೀಸರು ಬಾಲಕಿ ಪತ್ತೆಗೆ ಪ್ರಯತ್ನ ಆರಂಭಿಸಿದ್ದರು.
ಅಷ್ಟರಲ್ಲಿ ಫೆಬ್ರವರಿ 19 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸನ್ನೋತ್ ಗ್ರಾಮದ ರಾಹುಲ್ ರೈ ಎಂಬ ವ್ಯಕ್ತಿಯಿಂದ ಪೊಲೀಸರಿಗೆ ಕರೆ ಬಂದಿದೆ. ಕೆಲ ದಿನಗಳಿಂದ ಝಾನ್ಸಿಯಿಂದ ಹಿಂದಿರುಗಿದ ರಾಹುಲ್ ತನ್ನ ಅಂಗಡಿಯಿಂದ ದುರ್ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ಹೇಳಿಕೊಂಡಿದ್ದಾನೆ. ಜೊತೆಗೆ ತಲೆಮರೆಸಿಕೊಂಡಿರುವ ಆರೋಪಿಗಳಲ್ಲಿ ಒಬ್ಬನಾದ ತನ್ನ ನೌಕರನು ನಾಪತ್ತೆಯಾಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಈ ವೇಳೆ ಅಂಗಡಿಯನ್ನು ಪರಿಶೀಲಿಸಿದಾಗ ಹಸುವಿನ ಸಗಣಿಗಳ ರಾಶಿಯಡಿಯಲ್ಲಿ ಇಡಲಾಗಿದ್ದ ಗೋಣಿ ಚೀಲದಲ್ಲಿ ಕಾಣೆಯಾಗಿದ್ದ ಬಾಲಕಿಯ ಭಾಗಶಃ ಕೊಳೆತ ಶವ ಪತ್ತೆಯಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಹೆಚ್ಚಿನ ತನಿಖೆಯ ನಂತರ, ಆರೋಪಿಗಳಲ್ಲಿ ಒಬ್ಬನನ್ನು ಫೆಬ್ರವರಿ 20 ಮತ್ತು 21 ರ ಮಧ್ಯರಾತ್ರಿ ಸನ್ನೋತ್ ಗ್ರಾಮದ ಹೊರವಲಯದಿಂದ ದೆಹಲಿಯಿಂದ ಮುಂಬೈಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪತ್ತೆಹಚ್ಚಿ ಬಂಧಿಸಲಾಗಿದೆ. ಫೆಬ್ರವರಿ 12 ರ ಸಂಜೆ ಮೆಟ್ರೋ ವಿಹಾರ್ನಲ್ಲಿ ರಾಹುಲ್ ಅವರ ಉದ್ಯೋಗಿಯೊಂದಿಗೆ ಒಟ್ಟಿಗೆ ಮದ್ಯ ಸೇವಿಸಿದ್ದರು. ಕೆಲಸ ನೀಡುವ ನೆಪದಲ್ಲಿ ಸಂತ್ರಸ್ತೆಯನ್ನು ರಾಹುಲ್ ಅಂಗಡಿಗೆ ಕರೆಸಲು ಯೋಜಿಸಿದ್ದರು ಎಂದು ಅವರ ವಿಚಾರಣೆಯಿಂದ ತಿಳಿದುಬಂದಿದೆ.
ನಂತರ ಅವರು ಹುಡುಗಿಯನ್ನು ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಳಿಕ ಬಟ್ಟೆಯ ತುಂಡಿನಿಂದ ಕತ್ತು ಹಿಸುಕಿದ್ದಾರೆ. ನಂತರ ಆಕೆಯ ಮೃತ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಸಗಣಿ ಮಧ್ಯೆ ಎಸೆದಿದ್ದಾರೆಂದು ತಿಳಿದು ಬಂದಿದೆ. ಸದ್ಯ ಇತರ ಆರೋಪಿಗಳ ಎಲ್ಲಾ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಡಿಸಿಪಿ ಯಾದವ್ ತಿಳಿಸಿದ್ದಾರೆ.