ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಟಿಡಿಪಿ ವಕ್ತಾರ ದಿನಕರ್
ನವದೆಹಲಿ, ಜೂನ್ 26: ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ ಬಳಿಕ ಇನ್ನಷ್ಟು ಮಂದಿ ಬಿಜೆಪಿ ಸೇರಲು ಸಜ್ಜಾಗಿರುವ ಮುನ್ಸೂಚನೆ ಸಿಕ್ಕಿತ್ತು ಈಗ ಟಿಡಿಪಿ ವಕ್ತಾರ ಲಂಕಾ ದಿವಾಕರ್ ಅವರು ಬಿಜೆಪಿ ಸೇರಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರ ಸಮ್ಮುಖದಲ್ಲಿ ಲಂಕಾ ದಿನಕರ್ ಅವರು ಬಿಜೆಪಿ ಸೇರಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ದಿನಕರ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ನಾಯ್ಡುಗೆ ಆಘಾತ, ಇನ್ನಷ್ಟು ಟಿಡಿಪಿ ಶಾಸಕರು, ಸಂಸದರು ಬಿಜೆಪಿಗೆ?
ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈ ಬಗ್ಗೆ ನನ್ನ ಬೆಂಬಲಿಗರು ಹಾಗೂ ಕುಟುಂಬಸ್ಥರೊಡನೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ 23 ಸ್ಥಾನವನ್ನು ಮಾತ್ರ ಗಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 3 ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಕು ಎಂದು ಮನವಿ ಮಾಡಿದ್ದ ಎನ್ ಚಂದ್ರಬಾಬು ನಾಯ್ಡು ಅವರು ಬೇಡಿಕೆ ಈಡೇರದ ಕಾರಣ, ಎನ್ಡಿಎ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದರು.
ಬಿಜೆಪಿ ಜತೆ ಟಿಟಿಪಿ ಮೈತ್ರಿ ಮುರಿದುಕೊಂಡಿದ್ದು ದೊಡ್ಡ ತಪ್ಪು ಹೆಜ್ಜೆಯಾಗಿತ್ತು. ಈ ಬಗ್ಗೆ ನಾಯ್ಡು ಅವರು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ನಮಗೆ ಭರವಸೆ ಇದೆ ಎಂದು ಟಿಡಿಪಿ ನಾಯಕರೊಬ್ಬರು ಹೇಳಿದ್ದಾರೆ.
ಹಾಲಿ ಶಾಸಕರಲ್ಲದೆ, ಮಾಜಿ ಶಾಸಕರು, ರಾಜ್ಯ ಸಚಿವರು, ಕಡಿಮೆ ಅಂತರದಿಂದ ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡವರು ಎಲ್ಲರೂ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಹೇಳಿದ್ದಾರೆ