ಪಾಕಿಸ್ತಾನದ ಜೊತೆ ಮಾತುಕತೆ ಏನಿದ್ದರೂ ಪಿಒಕೆ ಬಗ್ಗೆ: ವೆಂಕಯ್ಯ ನಾಯ್ಡು
ನವದೆಹಲಿ, ಆಗಸ್ಟ್ 28: ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಯೇನಾದರೂ ನಡೆದರೆ, ಅದು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಬಗ್ಗೆ ನಡೆಯಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
"ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯ. ಈ ಬಗ್ಗೆ ಪಾಕಿಸ್ತಾನದೊಂದಿಗೆ ಮಾತನಾಡುವ ಅಗತ್ಯವಿಲ್ಲ. ಮುಂದೊಮ್ಮೆ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಮಾತುಕತೆ ನಡೆಯಬೇಕೆಂದರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ನಡೆಯಲಿದೆ" ಎಂದು ಪಾಕಿಸ್ತಾನಕ್ಕೆ ನಾಯ್ಡು ಬಿಸಿ ಮುಟ್ಟಿಸಿದರು.
ಕಾಶ್ಮೀರ, ಪಾಕಿಸ್ತಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವೈರಲ್
ಆಂಧ್ರಪ್ರದೇಶ ವಿಶಾಖಾಪಟ್ಟಣದಲ್ಲಿ ನೌಕಾ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗಾಲಯದ ಸುವರ್ಣಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವೆಂಕಯ್ಯ ನಾಯ್ಡು, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.
"ಭಾರತ ಯಾವ ದೇಶದ ಮೇಲೂ ತಾನಾಗೇ ದಾಳಿ ನಡೆಸಲು ಇಷ್ಟಪಡುವುದಿಲ್ಲ. ಆದರೆ ಯಾವುದೇ ದೇಶ ಅದರ ಮೇಲೆ ದಾಳಿ ನಡೆಸಿದರೆ ಸೂಕ್ತ ಉತ್ತರ ನೀಡಲೂ ಹಿಂದೆ ಬೀಳುವುದಿಲ್ಲ" ಎಂದು ನಾಯ್ಡು ಹೇಳಿದರು.
ಪಾಕಿಗೆ ಪಿಒಕೆಯದ್ದೇ ಚಿಂತೆ, ಹೆದರಿ ಮಾಡುತ್ತಿರುವ ಸಿದ್ಧತೆಗಳೇನು ಗೊತ್ತೇ?
ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಮಾತನಾಡಿದ್ದ ವೆಂಕಯ್ಯ ನಾಯ್ಡು, "ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಜನರು ಎಂದಿಗೂ ಕಾಶ್ಮೀರಿಯರ ಪರವಾಗಿ ನಿಲ್ಲುತ್ತಾರೆ. ಸರ್ಕಾರದ ಈ ನಡೆ ದೇಶದ ಹಿತಕ್ಕಾಗಿ, ಇದನ್ನು ರಾಜಕೀಯ ಉದ್ದೇಶ ಎಂದು ವ್ಯಾಖ್ಯಾನಿಸುವುದು ಬೇಡ" ಎಂದಿದ್ದರು.