ತ್ರಿವರ್ಣ ಧ್ವಜ ಹಿಡಿದು ಯಾತ್ರೆಗೆ ಸೇರಿ; RSS ಮುಖ್ಯಸ್ಥ ಮೋಹನ್ ಭಾಗವತ್ಗೆ ಕಾಂಗ್ರೆಸ್ ಕರೆ
ನವದೆಹಲಿ, ಸೆ. 23: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ದೆಹಲಿಯಲ್ಲಿ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರ ಭೇಟಿ ಪಕ್ಷದ ಭಾರತ್ ಜೋಡೋ ಯಾತ್ರೆಯ ಪರಿಣಾಮ ಎಂದು ಕಾಂಗ್ರೆಸ್ ಹೇಳಿದೆ.
ಯಾತ್ರೆಯ ಈ 15 ದಿನಗಳು ಅವರ ಮೇಲೆ ಪ್ರಭಾವ ಬೀರಿದ್ದರೆ, ಅವರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ್ ಜೋಡೋ ಯಾತ್ರೆಗೆ ಸೇರಬೇಕು ಎಂದು ಕಾಂಗ್ರೆಸ್ ಹೇಳಿದೆ.
ಮೋಹನ್ ಭಾಗವತ್ರನ್ನು 'ರಾಷ್ಟ್ರಪಿತ' ಎಂದ ಇಮಾಮ್ ಮುಖ್ಯಸ್ಥ
ಮೋಹನ್ ಭಾಗವತ್ ಗುರುವಾರ ದೆಹಲಿಯಲ್ಲಿ ಮಸೀದಿಗೆ ತೆರಳಿದ್ದರು. ಬಳಿಕ ಅವರು ಮದರಸಾವೊಂದಕ್ಕೆ ಭೇಟಿ ನೀಡಿದ್ದರು. ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರು ನಡುವಿನ ಸಭೆಯು ವಿವಿಧ ಸಮುದಾಯಗಳು ಮತ್ತು ಧರ್ಮಗಳ ಜೊತೆಗೆ ಆರ್ಎಸ್ಎಸ್ನ ನಿರಂತರ ಸಂಪರ್ಕದ ಭಾಗವಾಗಿತ್ತು ಎನ್ನಲಾಗಿದೆ.
ಯಾತ್ರೆ ಬಿಜೆಪಿ ನಾಯಕನ ಬಾಯಲ್ಲಿ'ಗೋಡ್ಸೆ ಮುರ್ದಾಬಾದ್' ಎನ್ನಿಸಿದೆ!
"ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿ ಕೇವಲ 15 ದಿನಗಳು ಕಳೆದಿವೆ. ಇಷ್ಟರಲ್ಲೇ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಕ್ತಾರರು 'ಗೋಡ್ಸೆ ಮುರ್ದಾಬಾದ್' ಎಂದು ಹೇಳಿದ್ದಾರೆ, ಮಾಧ್ಯಮಗಳ ಮೂಲಕ ಹರಡಿದ ದ್ವೇಷದ ಬಗ್ಗೆ ಸಚಿವರು ಕಳವಳಗೊಂಡಿದ್ದಾರೆ. ಮೋಹನ್ ಭಾಗವತ್ ಅವರು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿಯನ್ನು ಭೇಟಿಯಾಗಿದ್ದಾರೆ. ಮುಂದೆ ಏನಾಗುತ್ತದೆ ಎಂದು ನೋಡಿ" ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.
ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ರಾಹುಲ್ ಗಾಂಧಿ ಜೊತೆಗೆ ನಡೆಯಿರಿ!
ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಅವರು ಭಾರತ್ ಜೋಡೋ ಯಾತ್ರೆಗೆ ಮೋಹನ್ ಭಾಗವತ್ ಅವರಿಗೆ ಆಹ್ವಾನ ನೀಡಿದ್ದು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ರಾಹುಲ್ ಗಾಂಧಿ ಅವರ ಜೊತೆಯಲ್ಲಿ ನಡೆಯಬೇಕು ಎಂದು ಹೇಳಿದ್ದಾರೆ.
"ಯಾತ್ರೆಯ ಕೆಲವು ದಿನಗಳು ಅವರ ಮೇಲೆ ಇಂತಹ ಪ್ರಭಾವ ಬೀರಿರುವಾಗ, ಅವರು ಒಂದು ಗಂಟೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಬೇಕು, ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ರಾಹುಲ್ ಗಾಂಧಿಯವರೊಂದಿಗೆ ನಡೆಯಬೇಕು, ಭಾರತ್ ಮಾತಾ ಕಿ ಜೈ ಮತ್ತು ಭಾರತವನ್ನು ಒಂದುಗೂಡಿಸಿ ಎಂಬ ಘೋಷಣೆಯನ್ನು ಕೂಗಬೇಕೆಂದು ನಾವು ಭಾಗವತ್ ಜಿಗೆ ವಿನಂತಿಸುತ್ತೇವೆ" ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.
ಮೊದಲ ಬಾರಿಗೆ ಮದರಸಾವೊಂದಕ್ಕೆ ಮೋಹನ್ ಭಾಗವತ್ ಭೇಟಿ
ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಗೆ ತೆರಳಿದ ಮೋಹನ್ ಭಾಗವತ್ ನಂತರ ಆಜಾದ್ಪುರದ ಮದರಸಾ ತಜ್ವೀದುಲ್ ಕುರಾನ್ಗೆ ಭೇಟಿ ನೀಡಿದರು. ಮೋಹನ್ ಭಾಗವತ್ ಮದರಸಾವೊಂದಕ್ಕೆ ಭೇಟಿ ನೀಡಿದ್ದು ಇದೇ ಮೊದಲು.
ಮದರಸಾ ಭೇಟಿಯ ವೇಳೆ ಕುರಾನ್ ಪಠಿಸುವ ಮಕ್ಕಳೊಂದಿಗೆ ಸಂವಾದ ನಡೆಸಿ 'ವಂದೇ ಮಾತರಂ' ಮತ್ತು 'ಜೈ ಹಿಂದ್' ಘೋಷಣೆಗಳನ್ನು ಕೂಗಿದರು ಎಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಸಂವಾದದ ಸಮಯದಲ್ಲಿ, ಅವರು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದು ಮಕ್ಕಳಿಗೆ ವಿವರಿಸಿದ್ದಾರೆ.
ರಾಷ್ಟ್ರಕ್ಕೆ ಒಬ್ಬನೇ ಪಿತಾಮಹ
ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು ಮೋಹನ್ ಭಾಗವತ್ ಅವರನ್ನು 'ರಾಷ್ಟ್ರಪಿತ' ಎಂದು ಬಣ್ಣಿಸಿದ್ದಾರೆ. ಇದನ್ನು ಭಾಗವತ್ ಆಕ್ಷೇಪಿಸಿ, ರಾಷ್ಟ್ರಕ್ಕೆ ಒಬ್ಬನೇ ಪಿತಾಮಹ ಎಂದು ಹೇಳಿದ್ದಾರೆ. ಜೊತೆಗೆ ಎಲ್ಲರೂ 'ಭಾರತ್ ಕಿ ಸಂತನ್' (ರಾಷ್ಟ್ರದ ಮಕ್ಕಳು) ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಮೋಹನ್ ಭಾಗವತ್ ಅವರು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೈಶಿ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೇರ್ವಾನಿ ಸೇರಿದಂತೆ ಮುಸ್ಲಿಂ ಪ್ರಗತಿಪರರನ್ನು ಭೇಟಿ ಮಾಡಿದರು.
ಮೋಹನ್ ಭಾಗವತ್ ಅವರನ್ನು ಭೇಟಿ ಮಾಡುವವರು ಗಣ್ಯ ಮುಸ್ಲಿಮರು ಈ ನೆಲದ ವಾಸ್ತವದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.