ಗಡ್ಕರಿಯನ್ನು ಭೇಟಿ ಮಾಡಿದ ರೋಶನ್ ಬೇಗ್
ನವದೆಹಲಿ, ಆ. 4 : ಅತೀ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಎಂಟು ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಮೂಲಸೌಕರ್ಯವನ್ನು ಇನ್ನಷ್ಟು ಉತ್ತಮಪಡಿಸಬೇಕು ಮತ್ತು ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ಮಾಹಿತಿ ಸಚಿವ ರೋಶನ್ ಬೇಗ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ರೋಶನ್ ಬೇಗ್ ಅವರು ಕೇಂದ್ರ ಕೇಂದ್ರ ಹಡಗು, ರಸ್ತೆ ಸಂಚಾರ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಸೋಮವಾರ, ಆ.4ರಂದು ಭೇಟಿಯಾಗಿ ಮಾತುಕತೆ ನಡೆಸಿದರು. ನಿತಿನ್ ಗಡ್ಕರಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಗಳನ್ನೂ ನಿಭಾಯಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತ ತಪ್ಪಿಸಿ, ಪ್ರಯಾಣಿಕರ ಜೀವ ಉಳಿಸಲು, ಸಂಚಾರ ಸುಗಮಗೊಳಿಸಬೇಕು ಮತ್ತು ಸಂಚಾರದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಂಡರ್ ಪಾಸ್ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಬೇಕು ಎಂದೂ ರೋಶನ್ ಬೇಗ್ ಅವರು ಗಡ್ಕರಿ ಅವರನ್ನು ಕೋರಿದರು.
ಬೆಂಗಳೂರಿನ ಅಭಿವೃದ್ಧಿಗಾಗಿ ಕರ್ನಾಟಕ ಸರಕಾರ ತೋರುತ್ತಿರುವ ಕಾಳಜಿಯನ್ನು ಪ್ರಶಂಸಿಸಿದ ನಿತಿನ್ ಗಡ್ಕರಿ ಅವರು, ಕೇಂದ್ರ ಸರಕಾರ ನೆರವಿನ ಹಸ್ತ ನೀಡುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ತಾವೇ ಬರೆದಿರುವ 'India Aspires' ಪುಸ್ತಕವನ್ನು ರೋಶನ್ ಬೇಗ್ ಅವರಿಗೆ ಕಾಣಿಕೆಯಾಗಿ ನೀಡಿ ಅಚ್ಚರಿ ನೀಡಿದರು.