ತಬ್ಲಿಘಿ ಮುಖ್ಯಸ್ಥ ವಿಚಾರಣೆಗೆ ಹಾಜರಾಗಿಲ್ಲ, ಕೊರೊನಾ ವರದಿನೂ ಕೊಟ್ಟಿಲ್ಲ
ದೆಹಲಿ, ಜೂನ್ 9: ದೆಹಲಿಯ ನಿಜಾಮುದ್ದೀನ್ನಲ್ಲಿ ಧಾರ್ಮಿಕ ಸಭೆ ಆಯೋಜಿಸಿದ್ದ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆದರೆ, ಇದುವರೆಗೂ ತಬ್ಲಿಘಿ ಮುಖ್ಯಸ್ಥ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ.
ಕೊರೊನಾ ವೈರಸ್ ಭೀತಿಯಲ್ಲಿದ್ದ ಸಮಯದಲ್ಲಿ ದೆಹಲಿಯಲ್ಲಿ ಬಹುದೊಡ್ಡ ಧಾರ್ಮಿಕ ಸಭೆ ಆಯೋಜಿಸಿದ ಆರೋಪದಲ್ಲಿ ದೆಹಲಿ ಸಿಸಿಬಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಜಾರಿ ನಿರ್ದೇಶನಾಲಯವೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ್ದರು.
ತಬ್ಲಿಘಿ ನಂಟು: 2200 ವಿದೇಶಿಗರಿಗೆ 10 ವರ್ಷ ನಿರ್ಬಂಧ ಹೇರಿದ ಭಾರತ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ, ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿ ಎಂದು ನಾಲ್ಕೈದು ಬಾರಿ ನೊಟೀಸ್ ನೀಡಲಾಗಿದೆ. ಖುದ್ದು ವಿಚಾರಣೆಗೆ ಹಾಜರಾಗದ ಮೌಲಾನಾ ಸಾದ್, ತಮ್ಮ ವಕೀಲರ ಮೂಲಕ ಖಾಸಗಿ ಆಸ್ಪತ್ರೆಯ ಕೊರೊನಾ ಪರೀಕ್ಷೆ ವರದಿ ನೀಡಿದ್ದರು. ಅದರಲ್ಲಿ ಕೊವಿಡ್ ಸೋಂಕು ನೆಗಿಟಿವ್ ಎಂದು ಬಂದಿದೆ.
ದೆಹಲಿ ಪೊಲೀಸರು ತಬ್ಲಿಘಿ ಮುಖ್ಯಸ್ಥನ ಖಾಸಗಿ ಆಸ್ಪತ್ರೆಯ ವರದಿ ತಿರಸ್ಕರಿಸಿದ್ದರು, ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷಗೆ ಒಳಪಡಬೇಕು ಎಂದು ತಾಕೀತು ಹಾಕಿದ್ದರು.
ಈ ಕುರಿತು ಸೋಮವಾರ ಮಾತನಾಡಿದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ''ವಿಚಾರಣೆಗೆ ಹಾಜರಾಗುವಂತೆ ಮೌಲಾನಾ ಸಾದ್ ಗೆ ಹೊಸದಾಗಿ ನೋಟಿಸ್ ನೀಡಲಾಗುತ್ತಿದೆ. ಈ ಹಿಂದೆ ನೀಡಿದ ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ'' ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಬ್ಲಿಘಿ ವಕ್ತಾರ ''ಮೌಲಾನಾ ಸಾದ್ ತನಿಖೆಗೆ ಸಹಕರಿಸಿದ್ದಾರೆ. ಕೊರೊನಾ ಫಲಿತಾಂಶ ನೆಗಿಟಿವ್ ಬಂದಿದೆ. ಅದನ್ನು ತನಿಖಾ ಸಂಸ್ಥೆಗೆ ನೀಡಲಾಗಿದೆ. ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದರೆ ಮೌಲಾನಾ ಹಾಜರಾಗಲಿದ್ದಾರೆ'' ಎಂದು ಹೇಳಿದ್ದಾರೆ.
ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 2200ಕ್ಕೂ ಅಧಿಕ ವಿದೇಶಿಗರ ವಿಸಾ ರದ್ದು ಮಾಡಿರುವ ಕೇಂದ್ರ ಸರ್ಕಾರ, ಸುಮಾರು 10 ವರ್ಷಗಳ ಕಾಲ ಭಾರತ ಪ್ರವೇಶಕ್ಕೆ ನಿರ್ಬಂಧ ಹೇರಿದೆ ಎಂದು ಹೇಳಲಾಗಿದೆ.