'ಮಾಧ್ಯಮ ವರದಿಯಲ್ಲಿ ಕೋಮು ಬಣ್ಣ ಸೃಷ್ಟಿ ದೇಶಕ್ಕೆ ಕೆಟ್ಟ ಹೆಸರು ತರಬಹುದು': ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 02: "ಮಾಧ್ಯಮದ ಒಂದು ವಿಭಾಗದಲ್ಲಿ ತೋರಿಸಲಾದ ಸುದ್ದಿಗಳು ಕೋಮುವಾದದ ಧ್ವನಿಯನ್ನು ಹೊಂದಿದೆ. ಇದು ದೇಶ ಕೆಟ್ಟ ಹೆಸರು ತರಬಹುದು," ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವರ್ಷ ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡ ಆರಂಭದಲ್ಲಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ಕೂಟ ಸೇರಿದ್ದ ವಿಷಯಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, "ಕೆಲವು ಮಾಧ್ಯಮಗಳು ಕೋಮುವಾದದ ನಿಟ್ಟಿನಲ್ಲಿ ಈ ಸುದ್ದಿಯನ್ನು ಮಾಡಿದೆ. ಇದರಿಂದಾಗಿ ಭಾರತ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ," ಎಂದು ಅಭಿಪ್ರಾಯಿಸಿದೆ.
"ಕೆಲವೊಂದು ಮಾಧ್ಯಮಗಳು ಎಲ್ಲಾ ಸುದ್ದಿಗಳನ್ನು ಒಂದು ಕೋಮುವಾದಿ ನಿಲುವಿನಿಂದ ವರದಿ ಮಾಡುವುದು ದೇಶದಲ್ಲಿರುವ ಒಂದು ಸಮಸ್ಯೆಯಾಗಿದೆ. ಅದುವೇ ಒಂದು ದೊಡ್ಡ ಸಮಸ್ಯೆ. ಈ ರೀತಿ ಎಲ್ಲಾ ವಿಚಾರದಲ್ಲೂ ಕೋಮುವಾದ ಸೃಷ್ಟಿಸುವುದು ಭಾರತ ದೇಶಕ್ಕೆ ಕೆಟ್ಟ ಹೆಸರನ್ನು ತರಲಿದೆ," ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
'ಪೊಲೀಸರು ಆಡಳಿತ ಪಕ್ಷದ ಪರವಾಗಿ ಇರುವುದು ಗೊಂದಲಕಾರಿ ಟ್ರೆಂಡ್': ಮುಖ್ಯ ನ್ಯಾಯಾಧೀಶ
ಕೋವಿಡ್ ವಿಚಾರದಲ್ಲಿ ಕೋಮುವಾದದ ವರದಿ ಮಾಡಿದ ಮಾಧ್ಯಮಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ದೆಹಲಿಯ ಮರ್ಕಜ್ ನಿಜಾಮುದ್ದೀನದಲ್ಲಿ ತಬ್ಲಿಘ್ ಜಮಾತ್ನಲ್ಲಿ ನಡೆದಿದ್ದ ಸಭೆಯ ಬಗ್ಗೆ ಮಾಧ್ಯಮಗಳು ಮಾಡಿದ ವರದಿಯ ನಿಟ್ಟಿನಲ್ಲಿ ಸಲ್ಲಿಸಲಾಗಿದೆ.
ಹಾಗೆಯೇ ಸುಪ್ರೀಂ ಕೋರ್ಟ್ ಸಿಜೆಜೆ ಎನ್ ವಿ ರಮಣ ವೆಬ್ ಮಾಧ್ಯಮಗಳನ್ನು ಕೂಡಾ ಟೀಕೆ ಮಾಡಿದ್ದಾರೆ. "ವೆಬ್ ಮಾಧ್ಯಮಗಳು ಯಾರು ಪ್ರಭಾವಶಾಲಿಗಳೋ ಅವರ ಪರವಾಗಿ ಇರುತ್ತಾರೆ. ನ್ಯಾಯಾಧೀಶರ ವಿರುದ್ದ ಮನ ಬಂದಂತೆ ಬರೆಯುತ್ತಾರೆ. ಸಂಸ್ಥೆಗಳ ವಿರುದ್ದ ಮನಬಂದಂತೆ ಬರೆಯುತ್ತಾರೆ. ಯಾವುದೇ ಆಧಾರವಿಲ್ಲದಿದ್ದರೂ ತಮ್ಮ ಊಹೆಯನ್ನು ಬರೆಯುತ್ತಾರೆ. ವೆಬ್ ಪೋರ್ಟ್ಲ್ಗಳು ಪ್ರಭಾವಶಾಲಿ ಮನುಷ್ಯರ ಬಗ್ಗೆ ಹೆಚ್ಚು ಚಿಂತೆ ಹೊಂದಿದೆಯೇ ಹೊರತು ನ್ಯಾಯಾಧೀಶರುಗಳು, ಸಂಸ್ಥೆಗಳು, ಜನ ಸಾಮಾನ್ಯರ ಬಗ್ಗೆ ಅಲ್ಲ. ಇದು ನಮ್ಮ ಅನುಭವದ ಮಾತು," ಎಂದು ತಿಳಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾಯಾಧೀಶರುಗಳನ್ನು ಬಡ್ತಿ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂಬ ಮಾಧ್ಯಮಗಳ ವರದಿಗಳ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಮೂರ್ತಿ ಎನ್ ವಿ ರಮಣ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂವರು ನ್ಯಾಯಾಧೀಶೆಯರು ಸೇರಿದಂತೆ ಒಟ್ಟು 9 ಮಂದಿ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹಾಗೆಯೇ ಹೆಸರುಗಳನ್ನು ಕೂಡಾ ಮಾಧ್ಯಮಗಳು ಉಲ್ಲೇಖ ಮಾಡಿದ್ದವು. ಈ ವರದಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ಎನ್ ವಿ ರಮಣ "ಈ ಎಲ್ಲಾ ವರದಿಗಳು ಬರೀ ಊಹಾಪೋಹ," ಎಂದು ಹೇಳಿದ್ದರು. ಹಾಗೆಯೇ ಇನ್ನೂ ಕೂಡಾ ಆಯ್ಕೆ ಪ್ರಕ್ರಿಯೆಯೇ ಮುಕ್ತಾಯವಾಗಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ನ್ಯಾಯಾಧೀಶರುಗಳ ನೇಮಕದ ಊಹಾತ್ಮಕ ವರದಿ: ಸಿಜೆಐ ಅಸಮಾಧಾನ
''ಈ ಸುದ್ದಿಗಳು ಸುಳ್ಳು, ಇದು ಬರೀ ಊಹಾಪೋಹದ ಸುದ್ದಿಗಳಾಗಿದ್ದು ಮಾಧ್ಯಮಗಳು ಈ ರೀತಿ ಊಹೆ ಮಾಡಿ ವರದಿ ಮಾಡಿರುವುದು ತೀರಾ ದುರದೃಷ್ಟಕರವಾಗಿದೆ," ಎಂದು ಎನ್ ವಿ ರಮಣ ಅಸಮಧಾನ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಅದರದ್ದೇ ಆದ ಘನತೆಯಿದೆ. ಈ ನೇಮಕಾತಿ ಪ್ರಕ್ರಿಯೆಯು ಬಹಳ ಪವಿತ್ರವಾದದ್ದು. ಮಾಧ್ಯಮಗಳು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯ ಪಾವಿತ್ರತ್ಯೆಯನ್ನು ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು ಎಂದು ಕೂಡಾ ನ್ಯಾಯಮೂರ್ತಿಗಳು ತಿಳಿಸಿದ್ದರು.
ಆಡಳಿತ ಪಕ್ಷದ ಪರವಾಗಿ ಪೊಲೀಸ್ ಅಧಿಕಾರಿಗಳು ಇರುವುದು ದೇಶದಲ್ಲಿ ನಿರ್ಮಾಣವಾಗಿರುವ ಗೊಂದಲಕಾರಿ ಟ್ರೆಂಡ್ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಈ ಹಿಂದೆ ಹೇಳಿದ್ದರು. "ಆಡಳಿತ ಪಕ್ಷವನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದಾರೆ ಹಾಗೂ ರಾಜಕೀಯ ವಿರೋಧ ಪಕ್ಷಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ," ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿತ್ತು. ಛತ್ತೀಸ್ಗಢದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ದ ದೇಶದ್ರೋಹದ ಆರೋಪ ಮಾಡಲಾಗಿದೆ ಹಾಗೂ ಅಮಾನತುಗೊಳಿಸಲಾಗಿದೆ. ಈ ಹಿನ್ನೆಲೆ ಛತ್ತೀಸ್ಗಢದ ಪೊಲೀಸ್ ಅಧಿಕಾರಿ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್, "ಪೊಲೀಸರು ಆಡಳಿತ ಪಕ್ಷದ ಪರವಾಗಿ ಇರುವುದು ಗೊಂದಲಕಾರಿ ಟ್ರೆಂಡ್" ಎಂದು ಹೇಳಿತ್ತು.
(ಒನ್ ಇಂಡಿಯಾ ಸುದ್ದಿ)