ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆಯಲ್ಲಿ ನೆಹರೂ ಬಗ್ಗೆ ಕೆಂಡ
Recommended Video
ನವದೆಹಲಿ, ಜೂನ್ 23: "ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನಿಗೂಢ ಸನ್ನಿವೇಶದಲ್ಲಿ ಸಾವನ್ನಪ್ಪಿದರು. ಜವಾಹರ್ ಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರಕಾರ ಆ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ. ಮುಖರ್ಜಿ ಅವರ ತಾಯಿ ತಮ್ಮ ಮಗನ ಸಾವಿನ ಬಗ್ಗೆ ತನಿಖೆ ಮಾಡುವಂತೆ ಪತ್ರ ಬರೆದಿದ್ದರು. ಅದಕ್ಕೂ ನೆಹರೂ ಸ್ಪಂದಿಸಲಿಲ್ಲ" ಎಂದು ಕರ್ನಾಟಕ ಬಿಜೆಪಿಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾನುವಾರ ಆರೋಪಿಸಿದ್ದಾರೆ.
ಭಾರತೀಯ ಜನಸಂಘದ ಸ್ಥಾಪಕರಾದ ಮುಖರ್ಜಿ ಅವರ 66ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿ ಅವರು ಮಾತನಾಡಿದರು.
ಜುಲೈ 31ರೊಳಗೆ ಮೈತ್ರಿ ಸರಕಾರ ಕೆಡವಲು ಅಮಿತ್ ಶಾ ಸೂಚನೆ?!
ಮುಖರ್ಜಿ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಇಡೀ ದೇಶ ಒತ್ತಾಯಿಸಿತು. ಆದರೆ ನೆಹರೂ ಆದೇಶ ಮಾಡಲಿಲ್ಲ. ಇತಿಹಾಸವೇ ಇದಕ್ಕೆ ಸಾಕ್ಷಿ. ಮುಖರ್ಜಿ ಅವರ ತ್ಯಾಗ ಹುಸಿ ಹೋಗುವುದಿಲ್ಲ. ಬಿಜೆಪಿಯು ಅವರ ಉದ್ದೇಶವನ್ನು ಪೂರೈಸಲು ಬದ್ಧವಾಗಿದೆ ಎಂದು ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಜವಾಹರ್ ಲಾಲ್ ನೆಹರೂ ಅವರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದವರು. ಶ್ರೀನಗರ್ ನಲ್ಲಿ ಪೊಲೀಸ್ ವಶದಲ್ಲಿದ್ದಾಗ 1953ರಲ್ಲಿ ಮೃತಪಟ್ಟರು. ಅಕ್ರಮವಾಗಿ ಕಾಶ್ಮೀರವನ್ನು ಪ್ರವೇಶಿಸಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಆ ನಂತರ ಅವರ ಸಾವು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತಿಕ್ಕಾಟಕ್ಕೆ ಕಾರಣ ಆಗಿತ್ತು.
ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?
ಯಡಿಯೂರಪ್ಪ ಮಾತನಾಡಿ, ಜಮ್ಮು- ಕಾಶ್ಮೀರ ಸಂಪೂರ್ಣವಾಗಿ ಭಾರತದಲ್ಲಿ ಸೇರ್ಪಡೆ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದರು. ಒಂದು ದೇಶ, ಒಂದು ಧ್ವಜ ಮತ್ತು ಒಬ್ಬರೇ ಪ್ರಧಾನಿ ಎಂಬುದು ಅವರ ನಿಲುವಾಗಿತ್ತು. ಹೇಗೆ ಅಂಬೇಡ್ಕರ್ ಹಾಗೂ ವಲ್ಲಭ ಭಾಯ್ ಪಟೇಲ್ ರನ್ನು ಬಲಿಪಶು ಮಾಡಲಾಯಿತೋ ಅದೇ ರೀತಿಯಲ್ಲಿ ಮುಖರ್ಜಿ ಅವರನ್ನೂ ನೆಹರೂ ಮಾಡಿದರು ಎಂದು ಆರೋಪಿಸಿದರು.
ಕಾಶ್ಮೀರದ ಪರಿಚ್ಛೇದ 370 ತೆಗೆಯಲು ಸಂಸತ್ ನ ಹೊರಗೆ ಹಾಗೂ ಒಳಗೆ ಮುಖರ್ಜಿ ಅವರು ಬಹಳ ಹೋರಾಡಿದರು. ಆದರೆ ಆಗಲಿಲ್ಲ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎನ್ ಡಿಎ ಸರಕಾರದ ಅವಧಿಯಲ್ಲಿ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು.
ಆರ್ಟಿಕಲ್ 370 ರದ್ದುಗೊಳಿಸುವಂತೆ ಉಪವಾಸ ಸತ್ಯಾಗ್ರಹ
ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನವಾದ ಇಂದು ಸ್ಮರಿಸಲಾಗುತ್ತಿದೆ. ಅಪ್ರತಿಮ ದೇಶಭಕ್ತ, ಹೆಮ್ಮೆಯ ರಾಷ್ಟ್ರೀಯತಾವಾದಿ. ಮುಖರ್ಜಿ ಅವರ ಇಡೀ ಜೀವನವನ್ನು ಭಾರತದ ಏಕತೆ ಹಾಗೂ ಸಮಗ್ರತೆಗೆ ಮೀಸಲಿಟ್ಟರು. ಬಲಿಷ್ಠ ಹಾಗೂ ಒಗ್ಗಟ್ಟಿನ ಭಾರತದ ಬಗ್ಗೆ ಅವರ ಉತ್ಕಟ ಪ್ರೀತಿ ನಮಗೆಲ್ಲರಿಗೂ ಸ್ಫೂರ್ತಿ. ಜತೆಗೆ ನೂರಾ ಮೂವತ್ತು ಕೋಟಿ ಭಾರತೀಯರಿಗೆ ಸೇವೆ ಮಾಡಲು ಬಲ ನೀಡುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ತ್ಯಾಗದ ಫಲವಾಗಿ ಇತರ ರಾಜ್ಯಗಳ ಜನರು ಯಾವುದೇ ಪರವಾನಗಿ ಇಲ್ಲದೆ ಜಮ್ಮು- ಕಾಶ್ಮೀರಕ್ಕೆ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.