ಸ್ವಾವಲಂಬನೆ ಎಂದರೆ ವಿದೇಶಿ ವಸ್ತುಗಳನ್ನೆಲ್ಲ ಬಹಿಷ್ಕರಿಸುವುದೇ?
ನವದೆಹಲಿ, ಆಗಸ್ಟ್.13: ಸ್ವದೇಶಿ ಎಂದರೆ ವಿದೇಶದ ಪ್ರತಿಯೊಂದು ವಸ್ತುಗಳನ್ನು ಬಹಿಷ್ಕಿರಿಸುವುದು ಎಂದರ್ಥವಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಸ್ಥಳೀಯವಾಗಿ ಲಭ್ಯವಿಲ್ಲದ ವಸ್ತುಗಳು ಮತ್ತು ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕೊರೊನಾವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಸ್ವದೇಶಿ ಮತ್ತು ಸ್ವಾವಲಂಬಿ ಪ್ರಸ್ತುತತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಾಗತೀಕರಣವು ನಿರೀಕ್ಷಿತ ರೀತಿಯ ಫಲಿತಾಂಶವನ್ನು ನೀಡಿಲ್ಲ. ಎಲ್ಲಾ ಕಡೆಗಳಲ್ಲೂ ಒಂದೇ ರೀತಿಯ ಆರ್ಥಿಕ ಮಾದರಿಯನ್ನು ಅನ್ವಯಿಸಲಾಗುವುದಿಲ್ಲ ಎನ್ನುವುದನ್ನು ಸಾಂಕ್ರಾಮಿಕ ರೋಗವು ಸ್ಪಷ್ಟಪಡಿಸಿದೆ ಎಂದರು.
ಮೋಹನ್ ಭಾಗವತ್ ಹತ್ಯೆಗೆ ಸಂಚು: ಸದಾನಂದ ಗೌಡ, ಬಿ.ಸಿ ಪಾಟೀಲ್ ಹೇಳಿದ್ದೇನು?
ಸ್ವಾವಲಂಬಿ ರಾಷ್ಟ್ರಗಳ ನಡುವಿನ ಪರಸ್ಪರ ಸಹಕಾರವು ವಿಶ್ವವನ್ನು ಒಂದು ಕುಟುಂಬವನ್ನಾಗಿ ಪರಿಗಣಿಸಬೇಕೇ ವಿನಃ ಒಂದು ಮಾರುಕಟ್ಟೆಯನ್ನಾಗಿ ಪರಿಗಣಿಸಬಾರದು. ಇದು ಕೊರೊನಾವೈರಸ್ ಸೋಂಕಿನ ನಂತರದಲ್ಲಿ ಜಗತ್ತಿಗೆ ಒಂದು ಆರ್ಥಿಕ ಮಾದರಿಯಾಗಲಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದರು.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ:
ಕೇಂದ್ರ ಸರ್ಕಾರದ ತೀರ್ಮಾನವನ್ನು ಬೆಂಬಲಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸ್ವದೇಶಿ ಮತ್ತು ಸ್ವಾವಲಂಬಿ ದೇಶದ ನಿರ್ಮಾಣಕ್ಕೆ ಕರೆ ನೀಡಿದರು. ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳಿಗೆ ಉತ್ತೇಜನ ಹಾಗೂ ಆದ್ಯತೆಯನ್ನು ನೀಡಬೇಕು. ಹಾಗೆಂದ ಮಾತ್ರಕ್ಕೆ ಎಲ್ಲ ರೀತಿಯ ವಿದೇಶಿ ವಸ್ತುಗಳನ್ನು ಬಹಿರಷ್ಕರಿಸಬೇಕು ಎಂದಲ್ಲ. ದೇಶದಲ್ಲಿರುವ ಜನರು ಈ ಆಲೋಚನೆಯನ್ನು ಮೊದಲು ಬದಲಾಯಿಸಿಕೊಳ್ಳಬೇಕು ಎಂದರು.
ಭಾರತದಲ್ಲಿ ನೀತಿ ನಿರೂಪಣೆಯು ಪಾಶ್ಚಾತ್ಯ ಮತ್ತು ಅನ್ಯ ದೇಶಗಳಿಂದ ಪ್ರಭಾವಿತವಾಗಿದೆ. ಇದರ ಪರಿಣಾಮ ಸ್ಥಳೀಯವಾಗಿ ಲಭ್ಯವಿರುವ ಅನೇಕ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಕಡೆಗಣಿಸಿ, ವಿದೇಶಿ ವಸ್ತುಗಳ ಬಳಕೆಯನ್ನು ಹೆಚ್ಚಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದರು.