ಇದಪ್ಪಾ ವರಸೆ: ಸಂಸತ್ ಎದುರು ಸೊಳ್ಳೆ ಪರದೆಯಲ್ಲಿ ಸಂಸದರ ಪ್ರತಿಭಟನೆ
ನವದೆಹಲಿ, ಜುಲೈ 29: ಸಂಸತ್ ಎದುರು ಪ್ರತಿಪಕ್ಷ ಸಂಸದರು ನಡೆಸುತ್ತಿರುವ ಪ್ರತಿಭಟನೆ ವೈಖರಿಯೇ ಹಾಗಿದೆ. 50 ಗಂಟೆಗಳ ಸಂಸದರ ಪ್ರತಿಭಟನೆಯು ವಿಭಿನ್ನ ಶೈಲಿಯಿಂದ ಸುದ್ದಿ ಆಗುತ್ತಿದೆ.
ಅಧಿವೇಶನದ ಸಂದರ್ಭದಲ್ಲಿ ಸಂಸದರ ಅಮಾನತು ಖಂಡಿಸಿ ಪ್ರತಿಪಕ್ಷದ ಸಂಸದರು ಸೊಳ್ಳೆ ಪರದೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ಬುಧವಾರ ಐವರು ಸಂಸತ್ ಸದಸ್ಯರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.
Video: ಗಾಂಧಿ ಪ್ರತಿಮೆ ಎದುರು ಕಪ್ಪುಪೇಟ ಸುತ್ತಿಕೊಂಡರೇಕೆ ಮಲ್ಲಿಕಾರ್ಜುನ ಖರ್ಗೆ?
ಎರಡನೇ ದಿನವೂ ಈ ಪ್ರತಿಭಟನೆ ಮುಂದುವರಿದಿದ್ದು, ಸೊಳ್ಳೆ ಪರದೆಯಲ್ಲಿ ಸಂಸದರು ಮಲಗಿರುವ ಫೋಟೋಗಳನ್ನು ಪ್ರತಿಪಕ್ಷ ಸದಸ್ಯರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಂಸದರ ಅಮಾನತು ಬಗ್ಗೆ ಒಬ್ರಿಯನ್ ಟ್ವೀಟ್
ಸಂಸತ್ತಿನಲ್ಲಿ ಬೆಲೆ ಏರಿಕೆ ಬಗ್ಗೆ ವಿಷಯದ ಚರ್ಚೆಗೆ ಒತ್ತಾಯಿಸಿದ 27 ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರಿಕ್ ಒಬ್ರಿಯನ್ ಟ್ವೀಟ್ ಮಾಡಿದ್ದಾರೆ. "ಜುಲೈ 29ರ ಬೆಳಗ್ಗಿನ ಸಮಯ ಸಂಸತ್ತು ಎದುರಿನ ಧರಣಿ ಸ್ಥಳದ ಚಿತ್ರ. 50 ಗಂಟೆಗಳವರೆಗೆ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಧರಣಿ ಮುಂದುವರಿಯಲಿದೆ. ಇದಿನ್ನೂ 12 ಗಂಟೆವರೆಗೂ ಮುಂದುವರಿಯಲಿದ್ದು, ಬೆಲೆ ಏರಿಕೆಯ ಚರ್ಚೆಗಾಗಿ ಒತ್ತಾಯಿಸಿದ 27 ಸಂಸದರ ಅಮಾನತ್ತನ್ನು ರದ್ದುಗೊಳಿಸಿ," ಎಂದು ಡೆರಿಕ್ ಒಬ್ರಿಯನ್ ಒತ್ತಾಯಿಸಿದ್ದಾರೆ.
ಸಂಸದರ ಧರಣಿ ಆರಂಭವಾಗಿದ್ದು ಎಲ್ಲಿ?
ಕೇಂದ್ರ ಸರ್ಕಾರದ ವಿರುದ್ಧ ಸಂಸದರು ನಡೆಸುತ್ತಿರುವ 50 ಗಂಟೆಗಳ ಧರಣಿಯು ಈ ಮೊದಲು ಗಾಂಧಿ ಪ್ರತಿಮೆ ಎದುರಿನ ಸ್ಥಳದಲ್ಲಿ ಶುರುವಾಯಿತು. ಆದರೆ ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಸದರ ಧರಣಿ ಸ್ಥಳವನ್ನು ಶಿಫ್ಟ್ ಮಾಡಲಾಯಿತು. ಸಂಸದರು ಧರಣಿ ಕುಳಿತುಕೊಳ್ಳುವುದಕ್ಕೆ ಸಂಸತ್ ಪ್ರವೇಶದ ಮುಂಭಾಗದ ಸ್ಥಳವನ್ನು ಆಯ್ಕೆ ಮಾಡಿಕೊಂಡರು.
ಸಂಸತ್ ಎದುರಿನಲ್ಲಿ ಧರಣಿ ಕುಳಿತಿದ್ದೇಕೆ ಸಂಸದರು?
2014ರಲ್ಲಿ ಪ್ರಧಾನಿ ಮೋದಿ ಸಂಸತ್ತಿಗೆ ಪ್ರವೇಶಿಸಿದಾಗ ನೀಡಿದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. "ಮೋದಿ ಮೊದಲ ದಿನ ಆಗಮಿಸಿದಾಗ ನೀಡಿದ್ದ ಭರವಸೆಯನ್ನು ನಾವು ನೆನಪಿಸಲು ಬಯಸುತ್ತೇವೆ. ಅದು ಅವರು ಇದ್ದ ಸ್ಥಳವಾಗಿದೆ," ಎಂದು ಸಂಸದರು ಹೇಳುತ್ತಿದ್ದಾರೆ.
ಸಂಸತ್ ಬಳಿ ಧರಣಿ ಕುಳಿತ ಸಂಸದರು
ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್ ನಾಯಕ ಸಂತಾನು ಸೇನ್, ಡೋಲಾ ಸೇನ್, ಅಬಿರ್ ರಂಜನ್ ಬಿಸ್ವಾಸ್ ಮತ್ತು ಡೆರಿಕ್ ಒಬ್ರೆಯನ್ ಮತ್ತು ಟಿಆರ್ಎಸ್ನ ರವಿಚಂದ್ರ ವಡ್ಡಿರಾಜು ಸಂಸತ್ತಿನ ಹೊರಗೆ ಧರಣಿ ಕುಳಿತರು. ಈ ವೇಳೆ ಡಿಎಂಕೆ ಮತ್ತು ಎಡಪಕ್ಷಗಳ ಕೆಲವು ನಾಯಕರೂ ಸಹ ಭಾಗವಾಗಿ ಗುರುತಿಸಿಕೊಂಡಿದ್ದರು. ಗುರುವಾರ ಸಂಸದರಿಗೆ ಡಿಎಂಕೆ ಇಡ್ಲಿಯನ್ನು ನೀಡಿದರೆ, ತೃಣಮೂಲ ಕಾಂಗ್ರೆಸ್ ಪಕ್ಷವು ಫಿಶ್ ಫ್ರೈ ಮತ್ತು ತಂದೂರಿ ಚಿಕನ್ ಬಡಿಸಿತು. ಗಾಂಧಿ ಪ್ರತಿಮೆ ಎದುರು ಮಾಂಸಹಾರ ನೀಡುವುದನ್ನು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ವಿರೋಧಿಸಿರುವುದು ವಿವಾದಕ್ಕೂ ಕಾರಣವಾಗಿತ್ತು.