ಅಮ್ಮನ ಬಗ್ಗೆ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಭಾವುಕ ಭಾಷಣ
Recommended Video
ನವದೆಹಲಿ, ಆಗಸ್ಟ್ 14: "ಆಕೆ ನನಗೆ ಕೇವಲ ತಾಯಿ ಮಾತ್ರ ಆಗಿರಲಿಲ್ಲ. ಜೀವನದಲ್ಲಿ ನನಗಿದ್ದ ಆತ್ಮೀಯ ಗೆಳತಿಯಾಗಿದ್ದರು ಆಕೆ..." ಗಂಟಲವರೆಗೂ ಬಂದ ದುಃಖವನ್ನು ಹತ್ತಿಕ್ಕಿಕೊಂಡು ತಮ್ಮ ತಾಯಿಯ ಉದಾತ್ತ ವ್ಯಕ್ತಿತ್ವದ ಬಗ್ಗೆ ಭಾವುಕರಾಗಿ ಮಾತನಾಡಿದ್ದು ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್.
ಆಗಸ್ಟ್ 6 ರಂದು ಹೃದಯಾಘಾತದಿಂದ ವಿಧಿವಶರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್(67) ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನವದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಮಂಗಳವಾರ ಆಚರಿಸಲಾಯಿತು.
ಮತ್ತೆ ನೆನಪಾಗುತ್ತಿದೆ ಆದರ್ಶ ದಂಪತಿ ಸುಷ್ಮಾ-ಸ್ವರಾಜ್ ಪ್ರೇಮಕಥೆ
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಹೋದ್ಯೋಗಿ ಸುಷ್ಮಾ ಸ್ವರಾಜ್ ಅವರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿ, 'ನನಗಿಂತ ಚಿಕ್ಕವರಾಗಿದ್ದರೂ, ನಾನು ಅವರಿಂದ ರಾಜಕೀಯದ ಹಲವು ಪಾಠಗಳನ್ನು ಕಲಿತೆ. ಅವರು ಮಾತೃಪ್ರೀತಿಯ ಖನಿ' ಎಂದರು.
ಬಾನ್ಸುರಿ ಸ್ವರಾಜ್ ಅವರು, 'ತಮ್ಮ ತಾಯಿ ತನಗೆ ಮಾತ್ರವಲ್ಲದೆ, ಇಡೀ ದೇಶದ ಜನರಿಗೂ ಮಾತೃತ್ವದ ಪ್ರೀತಿಯನ್ನು ಉಣಿಬಡಿಸಿದವರು. ಅಂಥ ತಾಯಿಯನ್ನು ಪಡೆದಿದ್ದೇನೆ ಎನ್ನಲು ನನಗೆ ಅತೀವ ಹೆಮ್ಮೆಯಾಗುತ್ತದೆ' ಎಂದರು.
ಅಮ್ಮನ ಅಂತ್ಯಕ್ರಿಯೆ ನೆರವೇರಿಸಿದ ಸುಷ್ಮಾ ಪುತ್ರಿ ಬಾನ್ಸುರಿ ಸ್ವರಾಜ್
ಈ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಾಲ್ ಅವರೂ ಉಪಸ್ಥಿತರಿದ್ದರು. ಅವರ ಭಾಷಣದ ಮುಖ್ಯಾಂಶ ಇಲ್ಲಿದೆ...
ಎಲ್ಲ ಸಂಗ್ರಾಮವನ್ನೂ ಧೈರ್ಯವಾಗಿ ಎದುರಿಸಿದರು
"ಪಕ್ಷ, ಸಿದ್ಧಾಂತಗಳನ್ನು ಬದಿಗಿಟ್ಟು ಅಮ್ಮನ ಸ್ಮರಣೆಗಾಗಿ ಇಲ್ಲಿಗೆ ಆಗಮಿಸಿ, ನನ್ನ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ನಿಮಗೆಲ್ಲರಿಗೂ ನಾನು ಆಭಾರಿ. ಜೀವನದ ಎಂಥ ಸಂಗ್ರಾಮದ ಸಂದರ್ಭದಲ್ಲೂ ನನ್ನ ತಾಯಿ ಧೈರ್ಯಗೆಡಲಿಲ್ಲ. ಮರ್ಯಾದೆಯ ಗಡಿ ದಾಟಲಿಲ್ಲ, ತಾಳ್ಮೆ ಕಳೆದುಕೊಳ್ಳಲಿಲ್ಲ. ಅವರ ಎಲ್ಲವನ್ನೂ ಧೈರ್ಯವಾಗಿ ಎದುರಿಸಿದರು." - ಬಾನ್ಸುರಿ ಸ್ವರಾಜ್
ವಿರೋಧಿಗಳನ್ನೂ ಪ್ರೀತಿಸಿದರು!
"ಸಂಸತ್ತಿನಲ್ಲಿ ಅವರು ಯಾರನ್ನೇ ವಿರೋಧಿಸಿದರೂ, ಯಾರೊಂದಿಗೇ ಕಾದಾಡಿದರೂ, ಅಲ್ಲಿಂದ ಹೊರಬಂದಮೇಲೆ ಅವರೊಂದಿಗೇ ಕೂತು ಬ್ರೆಡ್, ಬನ್ ತಿನ್ನುತ್ತಿದ್ದರು. ವಿರೋಧಿಗಳನ್ನೂ ಪ್ರೀತಿಸುವ ಶಕ್ತಿ ಇದ್ದವರು ನನ್ನ ತಾಯಿ. ಅವರನ್ನು ಯಾರನ್ನೂ ದ್ವೇಷಿಸಲೇ ಇಲ್ಲ"- ಬಾನ್ಸುರಿ ಸ್ವರಾಜ್
ನನ್ನ ಆತ್ಮೀಯ ಸ್ನೇಹಿತೆ
"ವೈಯಕ್ತಿಕವಾಗಿ ಅವರು ತೀರಾ ಸರಳವಾಗಿದ್ದರು. ಯಾವ ಹುದ್ದೆಯಲ್ಲಿದ್ದರೂ ಸರಳವಾಗಿಯೇ ಬದುಕಿದ್ದರು. ನನಗೆ ಅವರು ಕೇವಲ ತಾಯಿ ಮಾತ್ರ ಆಗಿರಲಿಲ್ಲ. ಜೀವನದ ಅತ್ಯಂತ ಆತ್ಮೀಯ ಸ್ನೇಹಿತೆಯಾಗಿದ್ದರು. ಜ್ಞಾನದ ಬಂಡಾರವಾಗಿದ್ದರು, ನನ್ನ ಸ್ಪೂರ್ತಿಯಾಗಿದ್ದರು"- ಬಾನ್ಸುರಿ ಸ್ವರಾಜ್
ಪ್ರಧಾನಿಗೆ ಧನ್ಯವಾದ
"ನನ್ನ ತಾಯಿಗೆ, ಅವರ 42 ವರ್ಷಗಳ ರಾಜಕೀಯ ಪಯಣದಲ್ಲಿ ಇಲ್ಲಿರುವ ಎಲ್ಲರೂ ಒಂದಲ್ಲ ಒಮದು ರೀತಿಯಲ್ಲಿ ಸಹಾಯ ಮಾಡಿದ್ದೀರಿ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನ ಮಂತ್ರಿಜೀ, ನಮ್ಮ ತಾಯಿಗೆ ಅತ್ಯುತ್ತಮ ಹುದ್ದೆಗಳನ್ನು ಕೊಟ್ಟು, ಅವರ ಸಂಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿದ್ದೀರಿ. ನಮ್ಮ ಕುಟುಂಬದ ಸಂಕಷ್ಟದಲ್ಲೂ ಜೊತೆಯಾಗಿದ್ದೀರಿ. ನಿಮಗೆ ನಾವೆಲ್ಲರೂ ಋಣಿಗಳು" -ಬಾನ್ಸುರಿ ಸ್ವರಾಜ್
ಬಿಜೆಪಿಗೆ ನಾವು ಚಿರಋಣಿ
"ನಮ್ಮ ತಾಯಿಗೆ ಬಿಜೆಪಿ ನೀಡಿದ ಸ್ಥಾನಮಾನವನ್ನು ನಾವೆಂದಿಗೂ ಮರೆಯುವುದಿಲ್ಲ. ರಾಜಕೀಯದಲ್ಲಿ ಅವರಿಗೆ ಎಲ್ಲವನ್ನೂ ನೀಡಿದ ಭಾರತೀಯ ಜನತಾ ಪಕ್ಷಕ್ಕೆ ನಾವು ಚಿರಋಣಿ. ಅವರ ಸ್ಮರಣೆಯಲ್ಲಿ ಮುಂದಿನ ಬದುಕನ್ನು ಕಳೆಯಬೇಕಾದಿದೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ಅದು ನಿಜಕ್ಕೂ ಕಷ್ಟದ ವಿಷಯ. ಈ ನಿಟ್ಟುನಲ್ಲೂ ನಿಮ್ಮೆಲ್ಲರ ಸಹಕಾರ ಬೇಡುತ್ತ, ಅಮ್ಮನ ಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದ ನಿಮ್ಮೆಲ್ಲರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು"- ಬಾನ್ಸುರಿ ಸ್ವರಾಜ್