ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ತರಬೇತಿ ನೀಡಲಾಗುತ್ತೆ
ನವದೆಹಲಿ, ಫೆಬ್ರವರಿ 02: ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ತರಬೇತಿಯನ್ನು ಶೀಘ್ರ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಭಾರತೀಯ ಔಷಧ ಮಂಡಳಿ ತಿದ್ದುಪಡಿ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 58 ಶಸ್ತ್ರ ಚಿಕಿತ್ಸೆಯ ತರಬೇತಿ ನೀಡುವ ಅವಶ್ಯಕತೆ ಇದೆ.
ಕೋರ್ಸ್ ಪೂರೈಸಿದ ಬಳಿಕ ಅವರು ವೈಯುಕ್ತಿಕವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಮರ್ಥರಾಗಬೇಕಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಭಾರತೀಯ ಔಷಧ ಕೇಂದ್ರ ಮಂಡಳಿ (ಆಯುರ್ವೇದ ಸ್ನಾತಕೋತ್ತರ ಶಿಕ್ಷಣ) ತಿದ್ದುಪಡಿ ಅಧಿಸೂಚನೆಯಲ್ಲಿ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದ್ದಾರೆ.
ನಿರ್ದಿಷ್ಟ ಶಸ್ತ್ರ ಚಿಕಿತ್ಸಾ ವಿಧಾನಗಳನ್ನು ನಿರ್ವಹಿಸಲು ಆಯರ್ವೇದ ಸ್ನಾತಕೋತ್ತರಪದವೀಧರರು ಉತ್ತಮ ತರಬೇತಿ ಪಡೆದಿದ್ದಾರೆ ಎಂದು ವಿವರಿಸಿದರು.
ಅಧಿಸೂಚನೆಯು ನಿರ್ದಿಷ್ಟ ಶಸ್ತ್ರ ಚಿಕಿತ್ಸಾಕ್ರಮಗಳಿಗೆ ಸೀಮಿತವಾಗಿದ್ದು,ಇತರೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಅನುಮತಿ ನೀಡಿಲ್ಲ ಎಂದು ಆಯುಷ್ ಇಲಾಖೆ ಖಾತೆಯ ಹೆಚ್ಚುವರಿ ಹೊಣೆ ವಹಿಸಿರುವ ಕಿರಣ್ ರಿಜಿಜು ತಿಳಿಸಿದ್ದಾರೆ.