ಜನರು ಮದುವೆಯಾಗ್ತಿದ್ದಾರೆ.. ಆರ್ಥಿಕತೆ ಸುಧಾರಿಸಿದೆ: ಬಾನಗಡಿ ಮಾಡಿದ ಅಂಗಡಿ ಹೇಳಿಕೆ!
ನವದೆಹಲಿ, ನವೆಂಬರ್ 16: ಭಾರತೀಯ ಆರ್ಥಿಕ ಕುಸಿತಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ನೀಡುತ್ತಿದ್ದಾರೆ. ಇವೆಲ್ಲದರೊಟ್ಟಿಗೆ ನಂದೂ ಒಂದಿರಲಿ ಎಂಬಂತೆ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ನೀಡಿದ ಹೇಳಿಕೆ ಕೇಂದ್ರ ಸರ್ಕಾರಕ್ಕೆ ಇರಿಸುಮುರಿಸುಂಟು ಮಾಡಿದೆ.
"ಭಾರತದ ಆರ್ಥಿಕತೆ ಕುಸಿತ ಕಾಣುತ್ತಿದೆ ಎಂದವರು ಯಾರು? ವಿಮಾನ ನಿಲ್ದಾಣಗಳು, ರೈಲುಗಳು ಭರ್ತಿಯಾಗುತ್ತಿವೆ. ಜನರುಮದುವೆಯಾಗ್ತಿದ್ದಾರೆ. ಅಂದರೆ ಆರ್ಥಿಕತೆ ಚೆನ್ನಾಗಿದೆ ಎಂದೇ ಅರ್ಥ. ಕೇಂದ್ರ ಸರ್ಕಾರದ ಪ್ರಗತಿ ನೋಡಲಾಗದವರು ಆರ್ಥಿಕ ಪ್ರಗತಿಯಾಗಿಲ್ಲ ಎಂಬ ಮಾತನ್ನಾಡುತ್ತಾರೆ" ಎಂದು ಸುರೇಶ್ ಅಂಗಡಿ ಹೇಳಿದ್ದರು.
ಸುರೇಶ್ ಅಂಗಡಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಿಜೆಪಿ ನಾಯಕರು ಆರ್ಥಿಕತೆಯನ್ನು ಅಳೆಯುವ ಮಾನದಂಡವನ್ನಾಗಿ ಏನೇನನ್ನಲ್ಲ ಬಳಸುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ತಮ್ಮ ಸರ್ಕಾರದ ಸಮರ್ಥನೆಗೆ ಈ ರೀತಿ ಅಪ್ರಬುದ್ಧ ಹೇಳಿಕೆಗಳನ್ನು ನೀಡಬಾರದು ಎಂದು ಮತ್ತೆ ಕೆಲವರು ಹೇಳಿದ್ದಾರೆ.
ಯುಪಿಎಸ್ಸಿ ಪರೀಕ್ಷೆ ಅಧಿಕಾರಿಗಳಿಗೆ ಮಾತ್ರ ಏಕೆ?
ಇದೇ ಕಾರಣಕ್ಕೇ ಜನಪ್ರತಿನಿಧಿಗಳು ಕನಿಷ್ಠ ವಿದ್ಯೆಯನ್ನಾದರೂ ಪಡೆದಿರಬೇಕು ಎನ್ನುವುದು. ಯುಪಿಎಸ್ಸಿ ಪರೀಕ್ಷೆ ಕೇವಲ ಅಧಿಕಾರಿಗಳಿಗೆ ಮಾತ್ರವೇಕೆ ಎಂದು ಉಜ್ವಲ್ ಸಿನ್ಹಾ ಪ್ರಶ್ನಿಸಿದ್ದಾರೆ.
ಆಗ ಮೂವಿ, ಈಗ ಮದುವೆ!
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಬಾಲಿವುಡ್ ಮೂವಿಗಳು ನೂರು ಕೋಟಿ ದಾಟುತ್ತಿವೆ, ಆರ್ಥಿಕ ಕುಸಿತವಾಗಿಲ್ಲ ಎಂದಿದ್ದರು. ಇದೀಗ ಸುರೇಶ್ ಅಂಗಡಿ ಈ ರೀರಿ ಹೇಳಿಕೆ ನೀಡಿದ್ದಾರೆ. ಮೊದಲು ಮೂವಿ, ಮದುವೆ, ಭಾರತೀಯ ಆರ್ಥಿಕ ಸುಧಾರಣೆಯನ್ನು ಅಳೆಯುವ ಹೊಸ ಮಾನದಂಡಗಳನ್ನು ಬಿಜೆಪಿ ಸರ್ಕಾರ ಪರಿಚಯಿಸಿದೆ ಎಂದಿದ್ದಾರೆ ರಾಜೀವ್ ಪವಾರ್.
ರವಿಶಂಕರ್ ಪ್ರಸಾದ್ ಅವರಿಗೆ ಪ್ರತಿಸ್ಪರ್ಧಿ
ಸುರೇಶ್ ಅಂಗಡಿ ಹೇಳಿಕೆಯ ನಂತರ ಹೇಳಬಹುದಾದ ಒಂದೇ ಒಂದು ಮಾತೆಂದರೆ, ರವಿಶಂಕರ್ ಪ್ರಸಾದ್ ಅವರಿಗೆ ಒಬ್ಬ ಗಟ್ಟಿ ಪ್ರತಿಸ್ಪರ್ಧಿ ಸಿಕ್ಕಿದ್ದಾರೆ ಎಂದು ಕಾಲೆಳೆದಿದ್ದಾರೆ ಆಗಸ್ಟ್ ಲಿಯೋ.
ಎಂಥ ನುಡಿಮುತ್ತು!
ಬಿಜೆಪಿಯೋರು ಎಲ್ಲಿಂದ ಹೆಕ್ಕಿ ತರ್ತಾರಪ್ಪ ಇಂತಹ ಮುತ್ತುಗಳನ್ನ ಎಂದು ಪ್ರಶ್ನಿಸಿದ್ದಾರೆ ಕನ್ವರ್!