ಜನರ ನೋವಿಗೆ ಸ್ಪಂದಿಸಲು 'ಸಾಮಾಜಿಕ ನ್ಯಾಯ ಪೀಠ'
ನವದೆಹಲಿ, ಡಿ. 4: ಜನರ ಪ್ರತಿ ನೋವಿಗೂ ಸ್ಪಂದಿಸುತ್ತೇವೆ. ಹೀಗೆಂದು ದೇಶದ ಸರ್ವೋಚ್ಚ ನ್ಯಾಯಾಲಯ ದೇಶದ ಜನರಿಗೆ ಭರವಸೆ ನೀಡಿದೆ.
ಭಾರತದ ಪ್ರಧಾನ ನ್ಯಾಯಾಧೀಶ ಎಚ್.ಎಲ್. ದತ್ತು ಅವರು ಜನಸಾಮಾನ್ಯರ ದೈನಂದಿನ ನೋವಿಗೆ ಸ್ಪಂದಿಸುವ ಉದ್ದೇಶದಿಂದ ಇಬ್ಬರು ನ್ಯಾಯಾಧೀಶರ ನೇತೃತ್ವದ 'ಸಾಮಾಜಿಕ ನ್ಯಾಯ ಪೀಠ'ವನ್ನು ಸ್ಥಾಪಿಸಿ ಆದೇಶ ಹೊರಡಿಸಿದ್ದಾರೆ. [ಪಿಐಎಲ್ ವಜಾ]
ಆದ್ದರಿಂದ ಇನ್ನು ಮುಂದೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರತಿಯೊಬ್ಬರಿಗೂ ವಿಚಾರಣೆ ಸಂದರ್ಭದಲ್ಲಿ ನೋವು ತೋಡಿಕೊಳ್ಳುವ ಅವಕಾಶ ಸಿಗಲಿದೆ. ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ವಿಚಾರಣೆಗೊಳಗಾಗುವ ನಿರೀಕ್ಷೆ ಹುಟ್ಟಿದೆ. ಇಲ್ಲಿಯವರೆಗೆ ಇಂತಹ ಪ್ರಕರಣಗಳು ವಿವಿಧ ಪೀಠಗಳಲ್ಲಿ ಹಂಚಿಹೋಗುತ್ತಿದ್ದವು. ಆದರೆ, ಇನ್ನು ಮುಂದೆ ಎಲ್ಲ ಪ್ರಕರಣಗಳೂ ಒಂದೇ ಪೀಠದಲ್ಲಿ ವಿಚಾರಣೆಗೊಳ್ಳಲಿವೆ.
ಮುಖ್ಯ ನ್ಯಾಯಮೂರ್ತಿ ಹೇಳಿಕೆ: ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಎಚ್.ಎಲ್. ದತ್ತು ಅವರು, "ಸಾಮಾಜಿಕ ಸಮಸ್ಯೆಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಜನರ ಮೇಲೆ ನೇರ ಪರಿಣಾಮ ಬೀರುವಂತಹ ಸಮಸ್ಯೆಗಳಿಗೆ ನ್ಯಾಯಾಲಯವು ಆದ್ಯತೆ ನೀಡಬೇಕು. ಆಗಲೇ ಸಂವಿಧಾನದ ಗುರಿ ಈಡೇರುತ್ತದೆ" ಎಂದು ತಿಳಿಸಿದ್ದಾರೆ. [ಕನ್ನಡ ಮಾಧ್ಯಮ ಕಡ್ಡಾಯವಲ್ಲ]
ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿರುವ ಸಾಮಾಜಿಕ ಪೀಠವು ಡಿಸೆಂಬರ್ 12ರಿಂದ ಕಾರ್ಯಾರಂಭಗೊಳ್ಳಲಿದೆ. ಅಲ್ಲದೆ, ಪ್ರತಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಹಿಂದಿನ ನಿರ್ದೇಶನಗಳು ಜಾರಿಗೊಂಡಿರುವ ಕುರಿತು ಪರಿಶೀಲಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ವಿಎಸ್ಆರ್ ಅವಧಾನಿ ತಿಳಿಸಿದ್ದಾರೆ.
200 ಪ್ರಕರಣ ಬಾಕಿ: ಸಾಮಾಜಿಕ ನ್ಯಾಯ ಪೀಠಕ್ಕೆ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ ಹಾಗೂ ಉದಯ ಯು ಲಲಿತ್ ಅವರನ್ನು ನೇಮಿಸಲಾಗಿದೆ. ಈ ಪೀಠವು ಬಾಕಿ ಪ್ರಕರಣಗಳು ಹಾಗೂ ಪ್ರಚಲಿತ ವಿವಾದಗಳ ವಿಚಾರಣೆ ಕೈಗೊಳ್ಳಲಿದೆ. ಸುಪ್ರೀಂ ಕೋರ್ಟ್ನಲ್ಲಿ ಈ ಪೀಠಕ್ಕೆ ಸಂಬಂಧಿಸಿದ 200 ಪ್ರಕರಣಗಳು ಬಾಕಿ ಉಳಿದಿದ್ದು, 65 ಪ್ರಕರಣಗಳ ವಿಚಾರಣೆಯನ್ನು ಹೊಸದಾಗಿ ಆರಂಭಿಸಬೇಕಾಗುತ್ತದೆ. ಈಗಾಗಲೇ ಇತರ ಪೀಠಗಳಲ್ಲಿ ವಿಚಾರಣೆಗೊಳ್ಳುತ್ತಿರುವ ಇಂತಹ ಪ್ರಕರಣಗಳನ್ನು ಕೂಡ ಈ ಪೀಠಕ್ಕೆ ವರ್ಗಾಯಿಸಲಾಗುವುದು. [ಫತ್ವಾಗಳಿಗೆ ಕಾನೂನು ಮಾನ್ಯತೆ ಇಲ್ಲ]
ಇಂತಹ ಪ್ರಕರಣಗಳು: ನೈಸರ್ಗಿಕ ವಿಪತ್ತು ಬಾಧಿತರಿಗೆ ಆಹಾರ ಧಾನ್ಯ ಬಿಡುಗಡೆ, ವೇಶ್ಯೆಯರಿಗೆ ಪುನರ್ವಸತಿ, ಅಪೌಷ್ಠಿಕತೆ ಹಾಗೂ ವೈದ್ಯಕೀಯ ಸೌಲಭ್ಯ ಕೊರತೆಯಿಂದ ಉಂಟಾಗುತ್ತಿರುವ ಗರ್ಭಿಣಿ ಹಾಗೂ ಮಕ್ಕಳ ಸಾವು, ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ಮನೆ ಇಂತಹ ಪ್ರಕರಣಗಳನ್ನು ಸಾಮಾಜಿಕ ನ್ಯಾಯ ಪೀಠಕ್ಕೆ ವರ್ಗಾಯಿಸಲಾಗುವುದು.