ಮಸೀದಿಗೆ ಮುಸ್ಲಿಂ ಮಹಿಳೆ ಪ್ರವೇಶ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ನವದೆಹಲಿ, ಅಕ್ಟೋಬರ್ 25: ಮಸೀದಿಯೊಳಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಗೆ ಹಾಕಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆದಿದ್ದು, ಈ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ.
ಯಾಸ್ಲಿನ್ ಜುಬೀರ್ ಅಹ್ಮದ್ ಪರೀಜಾದ್ ಎಂಬುವರು ಮುಸ್ಲಿಂ ಮಹಿಳೆಯರಿಗೆ ಮಸೀದಿಗೆ ಪ್ರವೇಶ ನೀಡಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ಎಸ್.ಎ.ಬೋಬ್ಡೆ, ಎಸ್.ಎ.ನಜೀರ್ ಅವರು ಕೇಂದ್ರ ಕಾನೂನು ಸಚಿವರಿಗೆ ನೊಟೀಸ್ ನೀಡಿ ಪ್ರಕ್ರಿಯೆ ಕೇಳಿದೆ.
ವಕ್ತ್ ಬೋರ್ಡ್ ಸೇರಿದಂತೆ ಇನ್ನೂ ಕೆಲವು ಮುಸ್ಲಿಂ ಸಂಸ್ಥೆಗಳಿಗೆ ಸೂಚನೆ ನೀಡಿ, ಮಹಿಳೆಯರನ್ನು ಮಸೀದಿ ಒಳಕ್ಕೆ ಬಿಟ್ಟುಕೊಳ್ಳಲು ಅನುಮತಿ ನೀಡುವಂತೆ ಕೇಳಲಾಗಿದೆ.
ಮಹಿಳೆಯರಿಗೆ ಮಸೀದಿ ಒಳಕ್ಕೆ ಪ್ರವೇಶಿಸಲು ಅವಕಾಶ ನೀಡದಿರುವುದು ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎಂದು ಪಿಐಎಲ್ನಲ್ಲಿ ಉಲ್ಲೇಖಿಸಲಾಗಿದೆ.
ಅಯ್ಯಪ್ಪ ದೇವರ ದೇವಾಲಯದ ಒಳಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆಗಲೇ ಮುಸ್ಲಿಂ ಮಹಿಳೆಯರಿಗೆ ಮಸೀದಿ ಒಳಕ್ಕೆ ಹೋಗಲು ಅವಕಾಶ ನೀಡುವ ಬಗ್ಗೆ ಚರ್ಚೆಗಳು ಎದ್ದಿದ್ದವು.
ಈಗಾಗಲೇ ತ್ರಿವಳಿ ತಲಾಖ್ ರದ್ದು ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರ, ಮಹಿಳೆಯರಿಗೆ ಮಸೀದಿಗೆ ಪ್ರವೇಶಿಸುವ ಅವಕಾಶ ನೀಡಿ ಮತ್ತೊಂದು ಇತಿಹಾಸ ಸೃಷ್ಟಿಸುವುದೋ ನೋಡಬೇಕಿದೆ.