ಕೇಂದ್ರ ಸರ್ಕಾರದ ಪರ ರಫೇಲ್ ತೀರ್ಪು: ಗಣ್ಯರೇನಂತಾರೆ?
ನವದೆಹಲಿ, ಡಿಸೆಂಬರ್ 14: ಪಂಚರಾಜ್ಯಗಳ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ನಿರಾಳವಾಗುವಂಥ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಿದೆ.
ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಸರ್ಕಾರ ಮಾಡಿಕೊಂಡಿದ್ದ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಅದರ ತನಿಖೆಗೆ ಆದೇಶಿಸಬೇಕೆಂದು ಕೋರಲಾಗಿದ್ದ ಎಲ್ಲಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ನೀಡಿದ ಇಂದಿನ ತೀರ್ಪಿನಲ್ಲಿ ವಜಾಗೊಳಿಸಲಾಗಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು
ಸುಮಾರು 58,000 ಕೋಟಿ ರೂಪಾಯಿಯ ಈ ಒಪ್ಪಂದದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ತನ್ನ ಚುನಾವಣೆಯ ಪ್ರಚಾರದ ಪರಿಣಾಮಕಾರಿ ಬಾಣವನ್ನಾಗಿ ರಫೇಲ್ ಡೀಲ್ ಅನ್ನೇ ಕಾಂಗ್ರೆಸ್ ಆರಿಸಿಕೊಂಡಿತ್ತು. ಆದರೆ ಈ ಪ್ರಕರಣದ ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟೇ ಹೇಳಿರುವುದು ಕೇಂದ್ರ ಸರ್ಕಾರಕ್ಕೆ ನಿರಾಳವನ್ನುಂಟು ಮಾಡಿದ್ದರೆ, ಕಾಂಗ್ರೆಸ್ ನೇತೃತ್ವದ ವಿಪಕ್ಷಕ್ಕೆ ಮುಖಭಂಗವನ್ನುಂಟು ಮಾಡಿದೆ.
ರಫೇಲ್ ಡೀಲ್ ತೀರ್ಪಿಗೆ ಗಣ್ಯರು ನೀಡಿದ ಪ್ರತಿಕ್ರಿಯೆ ಹೀಗಿದೆ.
ರಾಜನಾಥ್ ಸಿಂಗ್
"ರಫೇಲ್ ಡೀಲ್ ಗೆ ಸಂಬಂಧಿಸಿದ ವಿಷಯ ಸ್ಫಟಿಕದಷ್ಟೇ ಪಾರದರ್ಶಕವಾಗಿತ್ತು. ಆದರೆ ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ತನಿಖೆಗೆ ನಿರಾಕರಿಸಿದ್ದು ಸ್ವಾಗತಾರ್ಹ" ರಾಜನಾಥ್ ಸಿಂಗ್, ಗೃಹಸಚಿವ
ಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳ
ಮಲ್ಲಿಕಾರ್ಜುನ ಖರ್ಗೆ
"ನಮ್ಮ ಬೇಡಿಕೆ ಜಂಟಿ ಸಂಸದೀಯ ಸಮಿತಿಯ ರಚನೆ. ಮತ್ತು ಆ ಬೇಡಿಕೆಯನ್ನು ನಾವು ಈಗಲೂ ಇಡುತ್ತೇವೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸುಕ್ಷ್ಮವಾಗಿ ಗಮನಿಸಿದರೆ, ಅದು 'ರಫೇಳ್ ಶೀಲ್ ತನ್ನ ವ್ಯಾಪ್ತಿಗೆ ಬರುವುದಿಲ್ಲ' ಎಂದಿದೆಯಷ್ಟೆ. ಆದರೆ ಗೃಹ ಸಚಿವರು ಅಪೂರ್ಣ ತೀರ್ಪಿನ ಬಗ್ಗೆ ಮಾತನಾಡುತ್ತಿದ್ದಾರೆ"- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?
ಬಿ ಎಸ್ ಯಡಿಯೂರಪ್ಪ
"ಯಾವುದೇ ಹಗರಣವೂ ನಡೆಯದಿದ್ದರೂ ರಫೇಲ್ ಡೀಲ್ ಬಗ್ಗೆ ಸುಳ್ಳಿನ ಸರಮಾಲೆ ಸೃಷ್ಟಿಸಿದ್ದ ಕಾಂಗ್ರೆಸ್ಸಿಗೆ ರಫೇಲ್ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಮುಖಭಂಗ. ನಮ್ಮ ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದಿದ್ದಕ್ಕಾಗಿ ರಾಹುಲ್ ಗಾಂಧಿ ಈ ದೇಶದ ಜನರ ಕ್ಷಮೆ ಕೇಳಬೇಕು"- ಬಿ ಎಸ್ ಯಡಿಯೂರಪ್ಪ, ಕರ್ನಾಟಕದ ಮಾಜಿ ಮುಖ್ಯಮಂತ್ರಿ
ಆನಂದ್ ಶರ್ಮಾ
"ಸುಪ್ರೀಂ ಕೋರ್ಟ್ ತೀರ್ಪನ್ನು ಕೇಳಿ ಬಿಜೆಪಿಯವರಾಗಲೀ, ಪ್ರಧಾನಿಯವರಾಗಲೀ ಸಂಭ್ರಮಿಸುವ ಅಗತ್ಯವಿಲ್ಲ. ಈ ಪ್ರಕರಣದ ಕೂಲಂಕಷ ವಿಚಾರಣೆಯನ್ನು ಮಾಡುವುದು ಸಮರ್ಪಕವಲ್ಲ ಎಂದಷ್ಟೇ ಗೌರವಾನ್ವಿತ ಸುಪ್ರೀಂ ಕೋರ್ಟ್ ಹೇಳಿರುವುದು"- ಆನಂದ್ ಶರ್ಮಾ, ಕಾಂಗ್ರೆಸ್ ಮುಖಂಡ
ದೇವೇಂದ್ರ ಫಡ್ನವಿಸ್
"ಕಾಂಗ್ರೆಸ್ ಪಕ್ಷ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿಯವರ ಸುಳ್ಳನ್ನು ರಫೇಲ್ ಡೀಲ್ ಕುರಿತ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೊರಹಾಕಿದೆ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ತಕಳೆದ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು"- ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರ ಮುಖ್ಯಮಂತ್ರಿ