ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು: ಸುಪ್ರೀಂಕೋರ್ಟ್ ಮಹತ್ವದ ಆದೇಶ
ನವದೆಹಲಿ, ಜನವರಿ 10: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದು ಮತ್ತು ಅದರ ಸಂಬಂಧ ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ 370ನೇ ವಿಧಿ ರದ್ದತಿ ವಿರುದ್ಧ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ವಿಚಾರಣೆ ನಡೆಸಿದ್ದು ಸುಪ್ರೀಂಕೋರ್ಟ್ ಕಳೆದ ವರ್ಷ ನ.27ರಂದು ಆದೇಶ ಕಾಯ್ದಿರಿಸಿತ್ತು. ನ್ಯಾಯಮೂರ್ತಿ ವಿ. ರಮಣ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠ ಈ ಕುರಿತು ಶುಕ್ರವಾರ ಆದೇಶ ಪ್ರಕಟಿಸಿತು.
ಜಮ್ಮು ಕಾಶ್ಮೀರ ಸ್ಥಿತಿ ಅಧ್ಯಯನಕ್ಕೆ ಜಾಗತಿಕ ನಿಯೋಗ ಭೇಟಿ, ಐರೋಪ್ಯ ಒಕ್ಕೂಟದಿಂದ ಬಹಿಷ್ಕಾರ
ಆದೇಶ ಪ್ರಕಟಿಸುವುದಕ್ಕೂ ಮುನ್ನ ನ್ಯಾ. ರಮಣ ಅವರು ಚಾರ್ಲ್ಸ್ ಡಿಕನ್ಸ್ ಅವರ ಪ್ರಸಿದ್ಧ ಕಾದಂಬರಿ 'ಟೇಲ್ ಆಫ್ ಟು ಸಿಟೀಸ್' ಕೃತಿಯ ಒಂದು ಭಾಗವನ್ನು ಓದಿದರು. 'ಈ ಆದೇಶದ ಹಿಂದೆ ಕಾಶ್ಮೀರದ ರಾಜಕಾರಣದಲ್ಲಿ ಮಧ್ಯಪ್ರವೇಶ ಮಾಡುವುದು ನಮ್ಮ ಉದ್ದೇಶವಲ್ಲ' ಎಂದರು.
ಅಗತ್ಯ ಸೇವೆಗಳಿಗೆ ಅಂತರ್ಜಾಲ ನೀಡಿ
ಕಾಶ್ಮೀರ ಕಣಿವೆಯಲ್ಲಿ ಎಲ್ಲ ಅಗತ್ಯ ಸೇವೆಗಳಿಗೂ ಅಂತರ್ಜಾಲ ಸೌಲಭ್ಯವನ್ನು ಮರಳಿ ಒದಗಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಒಂದು ವಾರದೊಳಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಆಡಳಿತವು ಎಲ್ಲ ನಿರ್ಬಂಧ ಆದೇಶಗಳನ್ನು ಪರಾಮರ್ಶೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ನ್ಯಾಯಾಂಗದ ವ್ಯಾಪ್ತಿಗೆ ಬರುತ್ತದೆ
ನಿಗದಿತ ಅವಧಿಯವರೆಗೆ ಮಾತ್ರ ಅಂತರ್ಜಾಲ ನಿರ್ಬಂಧಗಳನ್ನು ಹೇರಬಹುದು. ಅಂತರ್ಜಾಲ ಸೇವೆಗಳನ್ನು ನಿರ್ಬಂಧಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಆದೇಶಗಳನ್ನು ಹೊರಡಿಸಿದರೆ ಅದು ನ್ಯಾಯಾಂಗದ ಪರಿಶೀಲನೆಯ ವ್ಯಾಪ್ತಿಗೆ ಬರುತ್ತದೆ. ಕೆಲವು ಸೂಕ್ತ ಅಂಶಗಳನ್ನು ಪರಿಗಣಿಸಿದ ಬಳಿಕವೇ ಈ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು ಮತ್ತು ಬೇರೆ ಯಾವುದೇ ಆಯ್ಕೆ ಇಲ್ಲದಾಗ ಮಾತ್ರ ಇಂತಹ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನ್ಯಾ. ರಮಣ ಹೇಳಿದರು.
ಕಾಶ್ಮೀರ ಕಗ್ಗಂಟು: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಬಂಧನ
ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯಬಾರದು
ಅಸಮ್ಮತಿಯು ಅಸ್ಥಿರತೆಯನ್ನು ಸಮರ್ಥಿಸುವುದಿಲ್ಲ. ಸಿಆರ್ಪಿಸಿಯ ಸೆಕ್ಷನ್ 144 ಅನ್ನು ಪ್ರಜಾಪ್ರಭುತ್ವದ ಹಕ್ಕುಗಳಲ್ಲಿನ ನ್ಯಾಯಬದ್ಧ ಅಭಿವ್ಯಕ್ತದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಳಸುವಂತಿಲ್ಲ. 19 (1) (a) ಅಡಿ ಪತ್ರಿಕಾ ಸ್ವಾತಂತ್ರ್ಯವು ಒಂದು ಹಕ್ಕು ಎಂಬುದರಲ್ಲಿ ಅನುಮಾನವಿಲ್ಲ. ಇದು ಪ್ರತಿ ಆಧುನಿಕ ಪ್ರಜಾಪ್ರಭುತ್ವದಲ್ಲಿಯೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು.
ನಿರ್ಬಂಧ ಸಮೀಕ್ಷೆಗೆ ಸಮಿತಿ
ಕಾಶ್ಮೀರದಲ್ಲಿ ವಿಧಿಸಲಾಗಿದ್ದ ನಿರ್ಬಂಧದ ಬಗ್ಗೆ ಸಮೀಕ್ಷೆ ನಡೆಸಲು ಸಮಿತಿ ರಚನೆಯಾಗಲಿದೆ. ರಾಜ್ಯದಲ್ಲಿ ಬ್ಯಾಂಕಿಂಗ್-ವ್ಯಾಪಾರ ಸೇವೆಗಳು ಆರಂಭವಾಗಬೇಕು. ಇ- ಬ್ಯಾಂಕಿಂಗ್ ನಿರ್ಬಂಧವನ್ನು ತೆರವುಗೊಳಿಸಿ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
'ಸ್ವಾತಂತ್ರ್ಯ ಮತ್ತು ಭದ್ರತೆ ಎಂದಿಗೂ ಸಂಘರ್ಷಕ್ಕೆ ಒಳಪಡುತ್ತಲೇ ಇರುತ್ತವೆ. ನಾಗರಿಕರಿಗೆ ಎಲ್ಲ ಹಕ್ಕುಗಳು ಮತ್ತು ಭದ್ರತೆ ಸೂಕ್ತವಾಗಿ ಸಿಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ನ್ಯಾಯಾಲಯದ ಕರ್ತವ್ಯ' ಎಂದು ಹೇಳಿದರು.
ಎಲ್ಲ ಆದೇಶಗಳನ್ನೂ ಸಲ್ಲಿಸಿ
ಅಂತಹ ಸೇವೆಗಳನ್ನು ನಿರ್ಬಂಧಿಸಿದ ಎಲ್ಲ ಆದೇಶಗಳನ್ನು ಪ್ರಕಟಿಸಬೇಕು. ಅಗತ್ಯಬಿದ್ದರೆ ಅದನ್ನು ಪ್ರಶ್ನಿಸಬಹುದು. ಎಲ್ಲ ಆದೇಶಗಳನ್ನೂ ಸಾರ್ವಜನಿಕ ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು. ಆಗ ಅದನ್ನು ನ್ಯಾಯಾಲಯದ ಕಾನೂನಿನಲ್ಲಿ ಪ್ರಶ್ನಿಸಲು ಸಾಧ್ಯ. ಯಾವುದೇ ನಿರ್ದಿಷ್ಟ ಅವಧಿಯವರೆಗೆ ಅಥವಾ ಅನಿರ್ದಿಷ್ಟಾವಧಿಗೆ ಅಂತರ್ಜಾಲ ನಿರ್ಬಂಧಿಸುವುದು ದೂರಸಂಪರ್ಕ ನಿಯಮಾವಳಿಗಳ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ಹೇಳಿತು.
ಅಂತರ್ಜಾಲ ನಿರ್ಬಂಧ ಸೇರಿದಂತೆ ಸೆಕ್ಷನ್ 144ಅನ್ನು ಹೇರಿಕೆ ಮಾಡಿದ್ದಕ್ಕೆ ಸಂಬಂಧಿಸಿದ ಎಲ್ಲ ಆದೇಶಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಕಾರಣಗಳಿಲ್ಲದೆ ನಿರ್ಬಂಧ ಹೇರುವಂತಿಲ್ಲ
ಅನಿರ್ದಿಷ್ಟಾವಧಿ ಅಂತರ್ಜಾಲ ನಿರ್ಬಂಧವು ಒಪ್ಪುವಂತಹದ್ದಲ್ಲ. ಅದನ್ನು ಸರ್ಕಾರ ಪರಾಮರ್ಶೆನ ಮಾಡಬೇಕು ಮತ್ತು ಅಂತಹ ನಿರ್ಬಂಧಗಳನ್ನು ಸೀಮಿತ ಅವಧಿಯವರೆಗೆ ಮಾತ್ರ ಮಾಡಬಹುದು. ಇದು ನ್ಯಾಯಾಂಗ ಪರಾಮರ್ಶೆಯ ವಿಚಾರ. ತೀವ್ರತರವಾದ ಹಿಂಸಾಚಾರ ಅಥವಾ ಅದನ್ನು ಹೋಲುವಂತಹ ಕಾರಣಗಳಿಲ್ಲದೆ ಮಾತನಾಡುವ ಹಕ್ಕನ್ನು ಹತ್ತಿಕ್ಕಲು ಅಂತರ್ಜಾಲ ಕಡಿತಕ್ಕೆ ಆದೇಶ ನೀಡುವಂತಿಲ್ಲ. ಸೆಕ್ಷನ್ 144ನ ಕಾರಣವನ್ನು ಪ್ರಾದೇಶಿಕ ವ್ಯಾಪ್ತಿ, ನಿರ್ಬಂಧದ ಸ್ವರೂಪ ಮತ್ತು ಅವಧಿಯ ಆಧಾರದಲ್ಲಿ ಪರಿಗಣಿಸಬೇಕು ಎಂದು ಪೀಠ ಹೇಳಿತು.
ಅಂತರ್ಜಾಲ ಸೌಲಭ್ಯ ಪಡೆಯುವುದನ್ನು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿಲ್ಲ. ಆದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಅಂತರ್ಜಾಲ ಬಳಸಿ ವ್ಯಾಪಾರ ವಹಿವಾಟು ನಡೆಸುವುದು ಸಾಂವಿಧಾನಿಕವಾಗಿ ರಕ್ಷಣೆ ಹೊಂದಿದೆ ಎಂದು ಹೇಳಿದೆ.
ನ್ಯಾಯಾಂಗದ ಮೇಲೆ ನಂಬಿಕೆ ವಾಪಸ್
ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ವಿರೋಧಪಕ್ಷಗಳು ಸ್ವಾಗತಿಸಿವೆ. 'ಜಮ್ಮು ಮತ್ತು ಕಾಶ್ಮೀರದ ಜನರಿಗೆ ಆದ ಅನ್ಯಾಯದ ಕುರಿತು ಕೊನೆಗೂ ಸುಪ್ರೀಂಕೋರ್ಟ್ ಎಚ್ಚೆತ್ತುಕೊಂಡಿದೆ. ಕೇಂದ್ರ ಸರ್ಕಾರವು ಹೇರಿದ ಇಂತಹ ನಿರ್ಬಂಧಗಳು ಅಧಿಕಾರ ದುರ್ಬಳಕೆಯ ನಡೆ ಎಂದು ಕರೆಯುವ ಮೂಲಕ ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಮರುಸ್ಥಾಪಿಸಿದೆ ಎಂದು ಪಿಡಿಪಿ ಹೇಳಿಕೆ ನೀಡಿದೆ.