ಎಸ್ಸಿ ಎಸ್ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ ಎತ್ತಿಹಿಡಿದ ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ 10: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ (ಎಸ್ಸಿ, ಎಸ್ಟಿ) ವಿರುದ್ಧದ ದೌರ್ಜನ್ಯ ತಿದ್ದುಪಡಿ ಕಾಯ್ದೆ, 2018ರ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿ ಮೇಲೆ ದೂರು ದಾಖಲಾದ ಕೂಡಲೇ ಪ್ರಾಥಮಿಕ ತನಿಖೆ ನಡೆಸದೆಯೂ ಬಂಧಿಸುವುದನ್ನು ಮತ್ತು ಎಫ್ಐಆರ್ ದಾಖಲಿಸುವುದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಇದರಿಂದ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ತೀರ್ಪನ್ನು ಅನೂರ್ಜಿತಗೊಳಿಸುವಂತೆ ಅಂಶಗಳನ್ನು ಅಡಕಮಾಡಿತ್ತು.
ಮೀಸಲಾತಿ ಮೂಲಭೂತ ಹಕ್ಕು ಅಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯು ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು ಎಂದು ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆಗ ಸುಪ್ರೀಂಕೋರ್ಟ್, ದೇಶದ ಕಾನೂನುಗಳು ಜಾತಿ ಆಧಾರಿತವಾಗಿರಬಾರದು ಮತ್ತು ಏಕರೂಪತೆ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟು, ಕಾಯ್ದೆಯ ತಿದ್ದುಪಡಿಗಳನ್ನು ರದ್ದುಗೊಳಿಸಿ 2018ರ ಮಾರ್ಚ್ 20ರಂದು ತೀರ್ಪು ಪ್ರಕಟಿಸಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿ, ದೇಶದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ತ್ರಿಸದಸ್ಯ ನ್ಯಾಯಪೀಠದ ತೀರ್ಪು
ತನ್ನ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರ ಕೂಡ ಮನವಿ ಸಲ್ಲಿಸಿತ್ತು. ಪುನರ್ ಪರಿಶೀಲನೆಗೆ ಒಳಪಡಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ನ್ಯಾಯಪೀಠ, ಕಾಯ್ದೆಯನ್ನು ಎತ್ತಿಹಿಡಿದು ಸೋಮವಾರ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ವಿನೀತ್ ಸರಣ್ ಮತ್ತು ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, ಕಾಯ್ದೆಯಲ್ಲಿನ ಅಂಶಗಳು ಸೂಕ್ತವಾಗಿವೆ ಎಂದು ಹೇಳಿದೆ.
ಸಂವಿಧಾನದ ವಿಧಿ ಉಲ್ಲಂಘನೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ಕ್ಕೆ 2018ರಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು. ಇದನ್ನು ಖಂಡಿಸಿ ವಕೀಲರಾದ ಪೃಥ್ವಿರಾಜ್ ಚೌಹಾಣ್, ಪ್ರಿಯಾ ಶರ್ಮಾ ಹಾಗೂ ಇತರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸಂವಿಧಾನದ ಮೂಲ ರಚನೆಯಾದ 14, 19 ಮತ್ತು 21ನೇ ವಿಧಿಯನ್ನು ಉಲ್ಲಂಘಿಸುವುದರಿಂದ ಅದನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಎಸ್ಸಿ ಎಸ್ಟಿ ಮೀಸಲಾತಿ ವಿಸ್ತರಣೆ: ಮಸೂದೆ ಅಂಗೀಕಾರ
ರದ್ದುಗೊಳಿಸಿದ ಸುಪ್ರೀಂಕೋರ್ಟ್
1989 ರ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಡಿ, ಈ ಸಮುದಾಯಕ್ಕೆ ಸೇರಿದ ಯಾವುದೇ ವ್ಯಕ್ತಿ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರು ನೀಡಿದ್ದರೆ, ಯಾವುದೇ ವಿಚಾರಣೆಯಿಲ್ಲದೆ ಆರೋಪಿಯನ್ನು ಬಂಧಿಸುವುದಕ್ಕೆ ಸಾಧ್ಯವಿತ್ತು. ಬಂಧಿತರಾದವರಿಗೆ ಜಾಮೀನು ಸಹ ಸಿಗುತ್ತಿರಲಿಲ್ಲ. ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ ತಿದ್ದುಪಡಿ ಕಾಯ್ದೆಯಲ್ಲಿ ಅದಕ್ಕೆ ಸೆಕ್ಷನ್ 18ಎ ಅನ್ನು ಅಳವಡಿಸಲಾಗಿತ್ತು.
ರಾಜಕೀಯ ಒತ್ತಡದಿಂದ ತಿದ್ದುಪಡಿ
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ, ಜಾತಿನಿಂದನೆ ಪ್ರಕರಣದಲ್ಲಿ ಅಪರಾಧ ಎಸಗಿದವರಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಬೇಷರತ್ ನಿಷೇಧ ಹೇರುವ ನಿಯಮವನ್ನು ಮತ್ತೆ ಅಳವಡಿಸಲಾಗಿತ್ತು. ಅಪರಾಧದ ಸತ್ಯಾಸತ್ಯತೆ ಅರಿಯಲು ದೂರು ದಾಖಲಿಸುವ ಮುನ್ನ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ತೀರ್ಪನ್ನು ಕೂಡ ಕಾಯ್ದೆ ಅನೂರ್ಜಿತಗೊಳಿಸಿತ್ತು. ಈ ತಿದ್ದುಪಡಿಗಳನ್ನು ರಾಜಕೀಯ ಒತ್ತಡದ ಕಾರಣದಿಂದ ಮಾಡಲಾಗಿದೆ. ನಿರೀಕ್ಷಣಾ ಜಾಮೀನು ಸಿಗದಂತೆ ಮಾಡಿರುವುದು ಅನ್ಯಾಯದ ನಿರ್ಧಾರ ಎಂದು ಅರ್ಜಿದಾರರು ವಾದಿಸಿದ್ದರು.