ಸುಪ್ರೀಂಕೋರ್ಟ್ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಯಾರ ವಾದ ಏನು?
ನವದೆಹಲಿ, ಜುಲೈ 16: ಸುಪ್ರೀಕೋರ್ಟ್ನಲ್ಲಿ ಇಂದು ರಾಜ್ಯದ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ನಡೆಯಿತು. ದೀರ್ಘವಾಗಿ ನಡೆದ ವಿಚಾರಣೆಯಲ್ಲಿ ಅತೃಪ್ತ ಶಾಸಕರ ಪರ, ಸ್ಪೀಕರ್ ಪರ ಹಾಗೂ ಮುಖ್ಯಮಂತ್ರಿಗಳ ಪರ ವಾದ ಮಂಡನೆ ಮಾಡಲಾಯಿತು.
4:30 ನಿಮಿಷಗಳಷ್ಟು ಸುದೀರ್ಘವಾಗಿ ನಡೆದ ವಿಚಾರಣೆಯನ್ನು ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಪೀಠವು ಆದೇಶನ್ನು ನಾಳೆ (ಜುಲೈ 17) ಬೆಳಿಗ್ಗೆ 10:30ಕ್ಕೆ ಕಾಯ್ದಿರಿಸಿದೆ.
ಪ್ರಸ್ತುತ ಪ್ರಕರಣವು ದೇಶದ ಗಮನ ಸೆಳೆದಿದ್ದು, ಸರ್ಕಾರವೊಂದರ ಅಳಿವು-ಉಳಿವಿನ ಪ್ರಶ್ನೆಯ ಜೊತೆಗೆ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿ ಗುರುತಿಸುವಿಕೆ, ವಿವೇಚನೆ ಅವಕಾಶ, ಶಾಸಕರ ಹಕ್ಕುಗಳ ಸ್ಪಷ್ಟನೆ, ರಾಜೀನಾಮೆ ಹಿಂದಿನ ಉದ್ದೇಶದ ಬಗ್ಗೆ ಸ್ಪೀಕರ್ ಗಮನಹರಿಸಬಹುದೇ ಬೇಡವೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಈ ಪ್ರಕರಣ ನೀಡಲಿದೆ.
LIVE: ಜುಲೈ 17ಕ್ಕೆ ಸುಪ್ರೀಂ ಆದೇಶ: ಅಡಕತ್ತರಿಯಲ್ಲಿ ಅತೃಪ್ತರ ಭವಿಷ್ಯ
ಇಂದಿನ ನ್ಯಾಯಾಲಯದ ಕಲಾಪದಲ್ಲಿ, ಸ್ಪೀಕರ್ ಅವರು ರಾಜೀನಾಮೆಯನ್ನು ಮೊದಲಿಗೆ ಪರಿಗಣಿಸಬೇಕೆ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ನೀಡಿರುವ ಶಾಸಕರ ಮೇಲಿನ ದೂರನ್ನು ಮೊದಲು ಪರಿಗಣಿಸಬೇಕೆ? ಎಂಬ ಬಗ್ಗೆ ಮಹತ್ವವಾದ ವಾದ-ವಿವಾದ ನಡೆಯಿತು. ನಾಳಿನ ಆದೇಶದಲ್ಲೂ ಸಹ ಈ ವಿಷಯವೇ ಬಹಳ ಮಹತ್ವದ್ದಾಗಿರುತ್ತದೆ.
ಅತೃಪ್ತ ಶಾಸಕರ ಪರ ವಕೀಲರ ವಾದವೇನು?
ಇಂದು ಬೆಳಿಗ್ಗೆ 10:50 ಕ್ಕೆ ಆರಂಭವಾದ ಕಲಾಪದಲ್ಲಿ ಮೊದಲಿಗೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ ಅವರು ವಾದ ಆರಂಭಿಸಿದರು. ರೊಹ್ಟಗಿ ಅವರ ಪ್ರಕಾರ, ಶಾಸಕರ ರಾಜೀನಾಮೆಯನ್ನು ಅದರ ಹಿಂದಿನ ಉದ್ದೇಶದ ಕಾರಣಕ್ಕೆ ವಿಚಾರಣೆಗೆ ಒಳಪಡಿಸುವುದು ಅಥವಾ ಅಂಗೀಕಾರ ಮಾಡದೇ ಇರುವುದು ಶಾಸಕರಿಗೆ ಇರುವ ಹಕ್ಕಿನ ಉಲ್ಲಂಘನೆ ಆಗುತ್ತದೆ. ರಾಜೀನಾಮೆ ನೀಡಲು ಲಕ್ಷಾಂತರ ಕಾರಣ ಇರಬಹುದು, ರಾಜೀನಾಮೆ ನೀಡಿ ಜನರ ಜೊತೆ ಹೋಗಬಹುದು, ನಿವೃತ್ತಿಯನ್ನೂ ಪಡೆಯಬಹುದು ಎಂದು ರೊಹ್ಟಗಿ ವಾದಿಸಿದರು.
ಬಿಎಸ್ವೈ ಆಪ್ತ ಸಂತೋಷ್, ಬಿಜೆಪಿ ಮುಖಂಡ ಸಿ.ಪಿ.ಯೋಗೀಶ್ವರ್ಗೆ ಸಂಕಷ್ಟ
'ಸರ್ಕಾರಕ್ಕೆ ನೆರವು ನೀಡುವ ಉದ್ದೇಶ ಸ್ಪೀಕರ್ಗೆ ಇದೆ'
ರಾಜೀನಾಮೆ ನೀಡಿರುವ ಶಾಸಕರು ತಮ್ಮ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯು ನಕಲು ಅಲ್ಲ, ಸ್ವ-ಇಚ್ಛೆಯಿಂದ ಕೂಡಿದ ರಾಜೀನಾಮೆ ಎಂದು ಪರಿಶೀಲಿಸಿ ರಾಜೀನಾಮೆ ಅಂಗೀಕಾರ ಮಾಡಬೇಕು. ವಿವೇಚನೆ ಮಾಡುವ ಅಧಿಕಾರವನ್ನು ಸ್ಪೀಕರ್ ಅವರಿಗೆ ಸಂವಿಧಾನ ನೀಡಿಲ್ಲ. ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶ ಕೊಡಿಸಲು, ಸ್ಪಷ್ಟ ಕಾರಣ ಇಲ್ಲದಿದ್ದರೂ ಸಹ ಸ್ಪೀಕರ್ ಅವರು ರಾಜೀನಾಮೆ ಅಂಗೀಕಾರವನ್ನು ಬೇಕೆಂದೆ ತಡ ಮಾಡುತ್ತಿದ್ದಾರೆ ಎಂದು ರೊಹ್ಟಗಿ ವಾದಿಸಿದರು.
ಸ್ಪೀಕರ್ ಪರ ವಕೀಲರ ವಾದವೇನು?
ನಂತರ ಸ್ಪೀಕರ್ ಪರ ವಾದ ಆರಂಭಿಸಿದ ಅಭಿಷೇಕ್ ಸಿಂಘ್ವಿ, ಈ ಪ್ರಕರಣದಲ್ಲಿ ರಾಜೀನಾಮೆಗೂ ಅನರ್ಹತೆಗೂ ನೇರವಾದ ಸಂಬಂಧವಿದೆ, ಪಕ್ಷ ವಿರೋಧಿ ಚಟುವಟಿಕೆಯ ಉದ್ದೇಶದಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ ಮತ್ತು ಅನರ್ಹತೆಯಿಂದ ಪಾರಾಗಲು ರಾಜೀನಾಮೆ ನೀಡಿದ್ದಾರೆ ಎಂದು ವಾದಿಸಿದರು. ಶಾಸಕನೊಬ್ಬ ವಿಶ್ವಾಸಮತ ಯಾಚನೆಗೆ ಮುನ್ನಾ ದಿನ ರಾಜೀನಾಮೆ ನೀಡಿದರೆ ಅದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ, ಆತ ಅನರ್ಹತೆಗೆ ಅರ್ಹನಾಗುತ್ತಾನೆ, ಈ ಪ್ರಕರಣದಲ್ಲಿಯೂ ಅದೇ ಆಗಿದೆ ಎಂದು ಸಿಂಘ್ವಿ ವಾದಿಸಿದರು.
'ರಾಜೀನಾಮೆ ಸಲ್ಲಿಸುವ ಮುನ್ನವೇ ದೂರು ಸಲ್ಲಿಸಲಾಗಿದೆ'
190 ವಿಧಿ ಪ್ರಕಾರ ರಾಜೀನಾಮೆ ನೀಡಿರುವ ಶಾಸಕರು ಸ್ಪೀಕರ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು. ಆದರೆ ಈ ಪ್ರಕರಣದಲ್ಲಿ ಜುಲೈ 6 ರಂದು ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ ಹಾಗೂ ಅಂದು ಸ್ಪೀಕರ್ ಅವರನ್ನು ಶಾಸಕರು ಭೇಟಿ ಆಗಿರಲಿಲ್ಲ ಹಾಗಾಗಿ ಜುಲೈ 11 ರಂದು ಹದಿನೈದರಲ್ಲಿ 11 ಶಾಸಕರು ಸ್ಪೀಕರ್ ಮುಂದೆ ಹಾಜರಾಗಿದ್ದಾರೆ. ಆದರೆ ಶಾಸಕರ ವಿರುದ್ಧ ಜುಲೈ 10 ರಂದೇ ದೂರು ಸಲ್ಲಿಸಲಾಗಿದೆ. ಹಾಗಾಗಿ ರಾಜೀನಾಮೆ ವಿಷಯಕ್ಕೆ ಮುನ್ನಾ ಅನರ್ಹತೆ ವಿಷಯವನ್ನೇ ಮೊದಲು ಪರಿಗಣಿಸಬೇಕು ಎಂದು ಸಿಂಘ್ವಿ ವಾದಿಸಿದರು.
ಶಾಸಕರ ರಾಜೀನಾಮೆ ಅಂಗೀಕಾರವಾಗಲು ಹೇಗಿರಬೇಕು? ಹೇಗಿರಬಾರದು?
ಮುಖ್ಯಮಂತ್ರಿಗಳ ಪರ ವಕೀಲರ ವಾದವೇನು?
ಸಿಎಂ ಅವರ ಪರ ರಾಜೀವ್ ಧವನ್ ಅವರು ವಾದ ಮಾಡಿ, ಸರ್ಕಾರವನ್ನು ಬೀಳಿಸುವ ಉದ್ದೇಶದಿಂದಲೇ ಈ ಎಲ್ಲ ಶಾಸಕರು ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ ಹಿಂದೆ ದುರುದ್ಧೇಶವಿದ್ದಾಗ ಸ್ಪೀಕರ್ ಅವರು ಉದ್ದೇಶದ ಬಗ್ಗೆ ಗಮನವಹಿಸಲೇಬೇಕಾಗುತ್ತದೆ. ಅಷ್ಟೆ ಅಲ್ಲದೆ, ಈ ಎಲ್ಲ ಶಾಸಕರಿಗೆ ಸ್ಪೀಕರ್ ಅವರನ್ನು ಭೇಟಿ ಮಾಡುವ ಅವಕಾಶ ಇದ್ದರೂ ಸಹ ಅವರು ಮುಂಬೈಗೆ ಹಾರಿದರು, ಇದು ಅವರ ಉದ್ದೇಶದ ಅನಾವರಣ ಮಾಡುತ್ತದೆ ಎಂದರು. ಶಾಸಕರು ಸರ್ಕಾರ ಉರುಳಿಸುವ ಉದ್ದೇಶದಿಂದಲೇ ಗುಂಪಾಗಿ ದಾಳಿ ಮಾಡುತ್ತಿದ್ದಾರೆ ಇದಕ್ಕೆ ಅವಕಾಶ ನೀಡಬಾರದು ಎಂದು ಧವನ್ ವಾದಿಸಿದರು.
ಶಾಸಕರ ರಾಜೀನಾಮೆ ಉದ್ದೇಶದ ಸುತ್ತಲೇ ಸುತ್ತಿದ ವಾದ-ಪ್ರತಿವಾದ
ಮೂರೂ ವಕೀಲರ ವಾದವು ಶಾಸಕರ ರಾಜೀನಾಮೆಯ ಹಿಂದಿನ 'ಉದ್ದೇಶ'ದ ಸುತ್ತಲೇ ಗಿರಕಿ ಹೊಡೆಯಿತು. ಶಾಸಕರ ಪರ ವಕೀಲರು 'ಮೂಲಭೂತ ಹಕ್ಕು' ಉಲ್ಲಂಘನೆ ಕುರಿತಾಗಿ ನ್ಯಾಯಾಲಯದ ಗಮನ ಸೆಳೆದರು. ಶಾಸಕರ ಪರ ವಕೀಲರು ಸ್ಪೀಕರ್ ಅವರು ರಾಜೀನಾಮೆಯ ಉದ್ದೇಶದ ಬಗ್ಗೆ ವಿವೇಚನೆ ಮಾಡುವಂತಿಲ್ಲವೆಂದರೆ, ಇನ್ನಿಬ್ಬರು ವಕೀಲರು ಶಾಸಕರು ಸರ್ಕಾರವನ್ನು ಉರುಳಿಸುವ ಉದ್ದೇಶದಿಂದಲೇ ರಾಜೀನಾಮೆ ನೀಡಿದ್ದಾರೆ, ಇದು ಪಕ್ಷ ವಿರೋಧಿ ಚಟುವಟಿಕೆ ಹಾಗಾಗಿ ಅವರು ಅನರ್ಹತೆಗೆ ಅರ್ಹರು ಎಂದು ವಾದಿಸಿದರು.
ಅತೃಪ್ತ ಶಾಸಕರಿಗೆ ಹಿನ್ನಡೆ ಸಾಧ್ಯತೆ
ನಾಳೆ ಬೆಳಿಗ್ಗೆ 10:30 ಕ್ಕೆ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಹೊರಡಿಸಲಿದ್ದು, ಮೂರೂ ಜನರ ವಾದವನ್ನು ಗಮನಿಸಿದರೆ ಶಾಸಕರಿಗೆ ಅಲ್ಪ ಹಿನ್ನಡೆ ಆಗುವ ಸಾಧ್ಯತೆಗಳು ಗೋಚರವಾಗುತ್ತಿವೆ.