ಆಂಧ್ರ ಸಿಎಂ ಸ್ಥಾನಕ್ಕೆ ಚ್ಯುತಿ?: ಜಗನ್ ಮೋಹನ್ ರೆಡ್ಡಿ ಭವಿಷ್ಯ ಇಂದು ನಿರ್ಧಾರ
ನವದೆಹಲಿ, ನವೆಂಬರ್ 16: ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸುತ್ತಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ನ ಎರಡನೇ ಹಿರಿಯ ನ್ಯಾಯಮೂರ್ತಿ ವಿರುದ್ಧ ಹಗರಣದ ಆರೋಪ ಮಾಡಿರುವುದಕ್ಕಾಗಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆಗೆ ಒಳಪಡಿಸಲಿದೆ.
ಸುಪ್ರೀಂಕೋರ್ಟ್ ಸಿಜೆಐಗೆ ಆಂಧ್ರ ಸಿಎಂ ಜಗನ್ ಪತ್ರ
ನ್ಯಾಯಮೂರ್ತಿ ಉಮೇಶ್ ಲಲಿತ್ ಅವರ ನೇತೃತ್ವದ ನ್ಯಾಯಪೀಠ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಎನ್ವಿ ರಮಣ ವಿರುದ್ಧ ತೀವ್ರ ಖಾರವಾದ ಮತ್ತು ಗಂಭೀರ ಆರೋಪಗಳನ್ನು ಮಾಡಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರಿಗೆ ಬಹಿರಂಗ ಪತ್ರ ಬರೆದಿದ್ದಕ್ಕಾಗಿ ಜಗನ್ ಅವರಿಂದ ವಿವರಣೆಯನ್ನು ಸಹ ಕೇಳಲಾಗಿದೆ. ಮುಂದೆ ಓದಿ.
ಜಗನ್ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ
ವಕೀಲರಾದ ಜಿಎಸ್ ಮಣಿ, ಪ್ರದೀಪ್ ಕುಮಾರ್ ಯಾದವ್ ಮತ್ತು ಎಸ್ಕೆ ಸಿಂಗ್ ಜಂಟಿಯಾಗಿ ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ. ಅಕ್ರಮ ಹಣವರ್ಗಾವಣೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಗಂಭೀರ ಸ್ವರೂಪದ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಜಗನ್ ಮೋಹನ್ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಎಂ ಸ್ಥಾನದಿಂದ ಕಿತ್ತುಹಾಕಿ
ಸುಪ್ರೀಂಕೋರ್ಟ್ನಲ್ಲಿ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿರುವ ಎನ್ವಿ ರಮಣ ವಿರುದ್ಧ ಯಾವುದೇ ಆಧಾರಗಳಿಲ್ಲದೆ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಆ ಮಟ್ಟದ ಆರೋಪಗಳನ್ನು ಮಾಡಿರುವ ಜಗನ್ ಮೋಹನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ರೆಡ್ಡಿ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಕೂಡಲೇ ನಿರ್ಧಾರ ಮಾಡಬೇಕು ಎಂದು ಕೋರಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್ ಆದೇಶ
ವೈಯಕ್ತಿಕ ಲಾಭಕ್ಕಾಗಿ ಆರೋಪ
'ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದು ತಮ್ಮ ಅಧಿಕಾರ ಮತ್ತು ಹುದ್ದೆ ಬಳಸಿಕೊಂಡು ನ್ಯಾಯಾಲಯದಿಂದ ವೈಯಕ್ತಿಕ ಪ್ರಯೋಜನ ಪಡೆದುಕೊಳ್ಳಲು ಅವರು ಉನ್ನತ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗವಾಗಿ ಸುಳ್ಳು, ಅಪಮಾನಕರ, ಅಸ್ಪಷ್ಟ ಮತ್ತು ರಾಜಕೀಯ ಆರೋಪಗಳನ್ನು ಮಾಡಿದ್ದಾರೆ. ಇದು ಸಾರ್ವಜನಿಕರ ಮನಸಿನಲ್ಲಿ ನ್ಯಾಯಾಂಗದ ಕುರಿತು ಇರುವ ಗೌರವಕ್ಕೆ ಧಕ್ಕೆ ತರುವಂತಿದೆ' ಎಂದು ಆರೋಪಿಸಲಾಗಿದೆ.
ತನಿಖಾ ತಂಡ ರಚನೆಗೆ ಮನವಿ
ನ್ಯಾಯಮೂರ್ತಿ ಎನ್ವಿ ರಮಣ ಅವರ ಕುರಿತು ಜಗನ್ ಮಾಡಿರುವ ಅಸ್ಪಷ್ಟ ಆರೋಪಗಳ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ನಡೆಸಲು ಸುಪ್ರೀಂಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ಆಂತರಿಕ ಸಮಿತಿಯನ್ನು ರಚಿಸುವಂತೆ ಅಥವಾ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ಮೂಲಕ ವಿವರವಾದ ತನಿಖೆ ನಡೆಸುವಂತೆ ಕೋರಲಾಗಿದೆ.