ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ
ನವದೆಹಲಿ, ಸೆಪ್ಟೆಂಬರ್ 17: ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿಗಳು ಸೆ.23ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ನ್ಯಾ. ಮೋಹನ್ ಶಾಂತನಗೌಡ ವಿಚಾರಣೆಯಿಂದ ಹಿಂದೆ ಸರಿದ ಹಿನ್ನೆಲೆಯ ವಿಚಾರಣೆಯನ್ನು ಸೋಮವಾರ ಅಂದರೆ ಸೆ.23ಕ್ಕೆ ಮುಂದೂಡಲಾಗಿದೆ.
ಅನರ್ಹ ಶಾಸಕರಿಗೆ ನಿರಾಸೆ ಮೂಡಿಸಿದ ಸುಪ್ರೀಂಕೋರ್ಟ್
ನ್ಯಾ. ಎನ್.ವಿ ರಮಣ, ನ್ಯಾ.ಮೋಹನ್ ಶಾಂತನಗೌಡ ಮತ್ತು ನ್ಯಾ.ಅಜಯ್ ರಸ್ತೋಗಿ ಅವರಿರುವ ತ್ರಿಸದಸ್ಯ ಪೀಠ ಈ ಅನರ್ಹ ಶಾಸಕ ಸಲ್ಲಿಸಿರುವ ಒಟ್ಟು 9 ರಿಟ್ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಿತ್ತು.
ಸ್ಪೀಕರ್ ಅವರು ನಮ್ಮ ಸದಸ್ಯತ್ವವನ್ನು ರದ್ದುಪಡಿಸಿರುವುದು ಸಂಪೂರ್ಣ ಕಾನೂನು ಬಾಹಿರ, ದುರುದ್ದೇಶದ ಮತ್ತು ನಿರಂಕುಶ ಆದೇಶವನ್ನು ಹೊರಡಿಸಿದ್ದಾರೆ. ಪಕ್ಷ ವಿರೋಧಿ ನಡೆಗಾಗಿ ಸದಸ್ಯತ್ವವನ್ನು ರದ್ದು ಪಡಿಸುವ ಸಂವಿಧಾನದ 10ನೇ ಪರಿಚ್ಛೇದವನ್ನು ಅನಾವಶ್ಯಕವಾಗಿ ಸ್ಪೀಕರ್ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಅನರ್ಹ ಶಾಸಕರಿಗೆ ತುಸು ನೆಮ್ಮದಿ ನೀಡಿದ ಸುಪ್ರೀಂಕೋರ್ಟ್
ಎಲ್ಲರೂ ಜು.6ರಂದು ಸ್ವ ಇಚ್ಛೆಯಿಂದ , ನೈಜವಾಗಿ ಸ್ಪೀಕರ್ ಕಚೇರಿಗೆ ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿ ನಮ್ಮ ಮೇಲೆ ಯಾವುದೇ ಅನರ್ಹತೆಯ ದೂರಿರಲಿಲ್ಲ. ಬಳಿಕ ಜು.12ರಂದು ಅನರ್ಹತೆಯ ದೂರು ಸಲ್ಲಿಸಲಾಗಿತ್ತು ಎಂದು ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ , ನಾರಾಯಣಗೌಡ, ಗೋಪಾಲಯ್ಯ ಹೇಳಿದ್ದಾರೆ.
ತುರ್ತು ವಿಚಾರಣೆಗೆ ಇಲ್ಲ ಒಪ್ಪಿಗೆ
17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಲಾಗಿತ್ತು. ಆದರೆ, ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಅಂತಿಮವಾಗಿ ರಿಜಿಸ್ಟ್ರಾರ್ಗೆ ಪ್ರಕರಣವನ್ನು ಲಿಸ್ಟ್ ಮಾಡುವಂತೆ ನ್ಯಾಯಾಲಯ ಸೂಚನೆ ಕೊಟ್ಟಿತ್ತು. ಲಿಸ್ಟ್ ಪ್ರಕಾರ ಸೆ.11ರಂದು ವಿಚಾರಣೆ ನಡೆಯಬೇಕಿತ್ತು. ಬಳಿಕ ಸೆಪ್ಟೆಂಬರ್ 17 ನಿಗದಿಯಾಗಿತ್ತು. ಇದೀಗ ಸೆ.23ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಕಾದು ಕುಳಿತಿರುವ ಶಾಸಕರು
ಜುಲೈ 26 ಮತ್ತು ಆಗಸ್ಟ್ 1ರಂದು ಅನರ್ಹ ಶಾಸರಕರು ಸುಪ್ರೀಂಕೋರ್ಟ್ಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಅಂದಿನಿಂದ ಅರ್ಜಿಯ ವಿಚಾರಣೆ ಬೇಗ ನಡೆಯಲಿ ಎಂದು ಕಾದು ಕುಳಿತಿದ್ದಾರೆ. ಸೆ. 11ರಂದು ನಡೆಯಬೇಕಿದ್ದ ವಿಚಾರಣೆ ಈಗ ಸೆ.17ಕ್ಕೆ ಮುಂದೂಡಲಾಗಿತ್ತು, ಇದೀಗ ಸೆ.23ಕ್ಕೆ ಮುಂದೂಡಲಾಗಿದೆ.
ಅಂತಿಮ ತೀರ್ಪು ಬರುವ ಮುನ್ನವೇ ಅನರ್ಹಗೊಳಿಸಲಾಗಿತ್ತು
ಸುಪ್ರೀಂ ಕೋರ್ಟ್ ಈ ಅರ್ಜಿಗಳ ಕುರಿತು ಅಂತಿಮ ತೀರ್ಪು ನೀಡುವ ಮುನ್ನವೇ ಸಭಾಧ್ಯಕ್ಷ ರಮೇಶ್ ಕುಮಾರ್ 17 ಶಾಸಕರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ, ತೀರ್ಪು ನೀಡಿದ್ದರು. ಸಭಾಧ್ಯಕ್ಷರ ನಿರ್ಧಾರ ಪ್ರಶ್ನಿಸಿ, 17 ಮಂದಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಲ್ಲದೆ, ಅನರ್ಹಗೊಳಿಸಿದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿದ್ದರು.
ಅನರ್ಹ ಶಾಸಕರು ಏನು ಹೇಳ್ತಾರೆ?
ಸ್ಪೀಕರ್ ಅವರು ನಮ್ಮ ಸದಸ್ಯತ್ವವನ್ನು ರದ್ದುಪಡಿಸಿರುವುದು ಸಂಪೂರ್ಣ ಕಾನೂನು ಬಾಹಿರ, ದುರುದ್ದೇಶದ ಮತ್ತು ನಿರಂಕುಶ ಆದೇಶವನ್ನು ಹೊರಡಿಸಿದ್ದಾರೆ. ಪಕ್ಷ ವಿರೋಧಿ ನಡೆಗಾಗಿ ಸದಸ್ಯತ್ವವನ್ನು ರದ್ದು ಪಡಿಸುವ ಸಂವಿಧಾನದ 10ನೇ ಪರಿಚ್ಛೇದವನ್ನು ಅನಾವಶ್ಯಕವಾಗಿ ಸ್ಪೀಕರ್ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.