ಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆ
ನವದೆಹಲಿ, ಅಕ್ಟೋಬರ್ 7: ಮುಂಬೈನ ಆರೇ ಕಾಲೋನಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಮರಗಳನ್ನು ಕಟಾವು ಮಾಡುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಮುಂದಿನ ಆದೇಶದವರೆಗೂ ಮರಗಳನ್ನು ಕಡಿಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ವಿಶೇಷ ರಜಾ ಪೀಠದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಶೋಕ್ ಭೂಷಣ್ ಅವರು ಮಧ್ಯಂತರ ತಡೆಯಾಜ್ಞೆ ನೀಡಿತು. ಜತೆಗೆ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಬಂಧನಕ್ಕೆ ಒಳಗಾದ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆ ಸೂಚಿಸಿತು.
ಮರಗಳ ಆಕ್ರಂದನ ಕೇಳಿ ಮುಂಬೈಯಲ್ಲಿ ಮಧ್ಯರಾತ್ರಿ ಬೀದಿಗಿಳಿದ ಜನ...
ಅ. 21ರವರೆಗೂ ಮರಗಳನ್ನು ಕಡಿಯುವಂತಿಲ್ಲ ಎಂದಿರುವ ಸುಪ್ರೀಂಕೋರ್ಟ್, ವಿಚಾರಣೆಯನ್ನು ಅ. 14ಕ್ಕೆ ಮುಂದೂಡಿತು. ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿತು.
ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕಾಗಿ 2,500 ಮರಗಳನ್ನು ಕಡಿಯಲು ಮುಂಬೈ ಮೆಟ್ರೋ ರೈಲು ನಿಗಮ ಮುಂದಾಗಿತ್ತು. ಇದಕ್ಕೆ ಪರಿಸರವಾದಿಗಳ ತೀವ್ರ ವಿರೋಧವಿದ್ದಿದ್ದರಿಂದ ರಾತ್ರೋರಾತ್ರಿ ಮರಗಳನ್ನು ಕಡಿಯಲಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 29 ಮಂದಿಯನ್ನು ಭಾನುವಾರ ಬಂಧಿಸಲಾಗಿತ್ತು. ಇದನ್ನು ಖಂಡಿಸಿ ವಿದ್ಯಾರ್ಥಿಗಳ ಗುಂಪೊಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರಬರೆದಿತ್ತು. ಅದರ ಆಧಾರದಲ್ಲಿ ವಿಚಾರಣೆ ನಡೆಸಲು ಇಬ್ಬರು ನ್ಯಾಯಮೂರ್ತಿಗಳ ವಿಶೇಷ ನ್ಯಾಯಪೀಠ ರಚಿಸಲಾಗಿತ್ತು.
ಎಲಿವೇಟೆಡ್ ಕಾರಿಡಾರ್ನಿಂದ ಮರಗಳಿಗಷ್ಟೇ ಅಲ್ಲ ಬಫರ್ ವಲಯಕ್ಕೂ ಅಪಾಯ
ಆರೆ ಕಾಲೋನಿಯಲ್ಲಿ 1,287 ಹೆಕ್ಟೇರ್ ಪ್ರದೇಶದಲ್ಲಿ ಉದ್ಯಾನಕ್ಕೆ ಹೊಂದಿಕೊಂಡಂತೆ ಕಾರ್ ಶೆಡ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 1951ರಲ್ಲಿ ಪ್ರಧಾನಿ ಜವಹರಲಾಲ್ ನೆಹರೂ ಅವರು 12 ಗ್ರಾಮಗಳನ್ನು ಒಳಗೊಂಡ ಆರೆ ಮಿಲ್ಕ್ ಕಾಲೋನಿಯಲ್ಲಿ ಗಿಡ ನೆಟ್ಟು ಈ ಉದ್ಯಾನವನ್ನು ಉದ್ಘಾಟಿಸಿದ್ದರು.