ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಯಂತ್ರಣ?: ಸುಪ್ರೀಂಕೋರ್ಟ್ ಚಿಂತನೆ
ನವದೆಹಲಿ, ಸೆಪ್ಟೆಂಬರ್ 16: ಟಿವಿ ಕಾರ್ಯಕ್ರಮಗಳ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯನ್ನಾಗಿರುವ ಪ್ರಯತ್ನಗಳು ದ್ರೋಹ ಹಾಗೂ ಕ್ರೋಧೋನ್ಮತ್ತ ಕಾರ್ಯ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಸುದರ್ಶನ್ ಟಿವಿ ಎಂಬ ಖಾಸಗಿ ಟಿ.ವಿ. ಚಾನೆಲ್ನಲ್ಲಿ ಮುಸ್ಲಿಮರು ಸರ್ಕಾರಿ ಸೇವೆಗಳಲ್ಲಿ 'ನುಸುಳುತ್ತಿದ್ದಾರೆ' ಎಂಬಂತಹ ಕಾರ್ಯಕ್ರಮಗಳನ್ನು ಬಿತ್ತರಿಸುವುದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದು ಮುಸ್ಲಿಮರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಪ್ರಯತ್ನ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ. ಸುದರ್ಶನ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಂದಾಸ್ ಬೋಲ್' ಕಾರ್ಯಕ್ರಮದ 9 ಕಂತುಗಳ ಪೈಕಿ 7 ಕಂತುಗಳ ಪ್ರಸಾರ ಬಾಕಿ ಇದ್ದು, ಅವುಗಳಿಗೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಕೆ.ಎಂ ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ತಡೆ ನೀಡಿದೆ.
ಪ.ಬಂಗಾಳದಲ್ಲಿ ಟಿವಿ ನೋಡಿದರೆ, ಸಂಗೀತ ಕೇಳಿದರೆ, ಕೇರಂ ಆಡಿದರೆ ದಂಡ
ವಿದ್ಯುನ್ಮಾನ ಮಾಧ್ಯಮದ ಶಕ್ತಿ ಹಾಗೂ ಪ್ರಸರಣ ಸಾಮರ್ಥ್ಯವನ್ನು ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ದಾಳಿ ನಡೆಸಲು ಬಳಸಿಕೊಳ್ಳುತ್ತಿರುವುದರ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು. 'ನಾಗರಿಕ ಸೇವೆಗಳಲ್ಲಿ ಮುಸ್ಲಿಮರು ಒಳನುಸುಳುತ್ತದ್ದಾರೆ ಎಂಬಂತೆ ನೀವು ಹೇಳುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ಏನನ್ನು ಬೇಕಾದರೂ ಹೇಳಲು ಪತ್ರಕರ್ತರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಯಾರೂ ಹೇಳುವುದಿಲ್ಲ' ಎಂದು ಕಿಡಿಕಾರಿತು. ಮುಂದೆ ಓದಿ.
ಕಾರ್ಯಕ್ರಮ ಸಂಹಿತೆಗೆ ಬದ್ಧ
ಭಾರತವು ವೈವಿಧ್ಯಮಯ ಸಂಸ್ಕೃತಿಯ ದೇಶ ಎಂಬ ಸಂಗತಿಯನ್ನು ಒಪ್ಪಿಕೊಳ್ಳದೆ ಇರುವುದು ದೇಶಕ್ಕೆ ಎಸಗುವ ವಂಚನೆಯಾಗುತ್ತದೆ. ನಿಮ್ಮ ಕಕ್ಷಿದಾರರು ತಮ್ಮ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಿದೆ. ಕೇಬಲ್ ಟಿವಿ ಕಾಯ್ದೆ ಅಡಿ ಸೃಷ್ಟಿಸಿರುವ ಕಾರ್ಯಕ್ರಮ ಸಂಹಿತೆಗಳಿಗೆ ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಸುದರ್ಶನ್ ಟಿವಿ ಪರ ವಕೀಲ ಶ್ಯಾಮ್ ದಿವಾನ್ ಅವರಿಗೆ ತೀಕ್ಷ್ಣವಾಗಿ ಹೇಳಿತು.
ಮಾಧ್ಯಮಗಳಿಂದ ಹಾನಿಯಾಗಬಹುದು
'ವಿದ್ಯುನ್ಮಾನ ಮಾಧ್ಯಮಗಳು ವಿಸ್ತೃತವಾಗಿವೆ. ಅವು ನಿರ್ದಿಷ್ಟ ಸಮುದಾಯಗಳನ್ನು ಗುರಿ ಮಾಡುವ ಮೂಲಕ ದೇಶವನ್ನು ಅಸ್ಥಿರಗೊಳಿಸಬಹುದು. ಕೆಲವು ಮಾನದಂಡಗಳು ಅವುಗಳಿಗೆ ಮಾರ್ಗದರ್ಶನ ಮಾಡುವಂತಿರಬೇಕು. ಇವು ನಿರ್ದಿಷ್ಟ ಗೌರವವನ್ನು ಹಾನಿ ಮಾಡಬಹುದು. ವರ್ಚಸ್ಸಿಗೆ ಕುಂದು ತರಬಹುದು' ಎಂದು ನ್ಯಾಯಪೀಠ ಹೇಳಿತು.
ಮುಂದಿನ ತಿಂಗಳು ಟಿವಿಗಳ ಬೆಲೆ ಹೆಚ್ಚಳ ಸಾಧ್ಯತೆ: ಏಕೆ ಗೊತ್ತಾ?
ನಿಯಂತ್ರಿಸುವುದು ಹೇಗೆ?
'ಇವುಗಳನ್ನು ನಿಯಂತ್ರಿಸುವುದು ಹೇಗೆ? ಸರ್ಕಾರ ಇದನ್ನು ಮಾಡಲಾಗದು. ಇದು ನಿಯಂತ್ರಣಕ್ಕೆ ತರುವಲ್ಲಿನ ಅತ್ಯಂತ ಕಷ್ಟಕರ ವಲಯ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ವಿಚಾರವಾಗಿ ನಾವು ವಿಶಾಲ ಚರ್ಚೆಯನ್ನು ನಡೆಸಬೇಕಿದೆ. ಈ ಕಾರ್ಯಕ್ರಮದ ಬಗ್ಗೆ ನೋಡಿ. ಎಷ್ಟು ಕ್ರೋಧೋನ್ಮತ್ತವಾಗಿದೆ. ನಾಗರಿಕ ಸೇವೆಗಳಿಗೆ ತೊಡಗಿಸಿಕೊಳ್ಳುವ ಸಮುದಾಯವನ್ನು ಗುರಿ ಮಾಡುತ್ತಿದೆ?' ಎಂದು ನ್ಯಾಯಮೂರ್ತಿ ಚಂದ್ರಚೂಡ ಅವರು ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ ಅವರಿಗೆ ಹೇಳಿದರು.
ಮಾಲೀಕತ್ವದ ಮಾಹಿತಿ ನೀಡಬೇಕು
'ನಾವು ದೃಶ್ಯ ಮಾಧ್ಯಮಗಳ ಮಾಲೀಕತ್ವದ ಬಗ್ಗೆ ಗಮನ ಹರಿಸಬೇಕಾಗಿದೆ. ಕಂಪೆನಿಯ ಸಂಪೂರ್ಣ ಷೇರುದಾರರ ಸಂರಚನೆಯು ಸಾರ್ವಜನಿಕರ ವೀಕ್ಷಣೆಗೆ ಸಿಗುವಂತಿರಬೇಕು. ಸರ್ಕಾರವು ಒಂದು ಚಾನೆಲ್ಗೆ ಹೆಚ್ಚು ಜಾಹೀರಾತು, ಇನ್ನೊಂದಕ್ಕೆ ಕಡಿಮೆ ಜಾಹೀರಾತು ನೀಡುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕಂಪೆನಿಯ ಆದಾಯ ಮಾದರಿಯನ್ನೂ ಬಹಿರಂಗಪಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.
ನಿಯಂತ್ರಣ ಮಾಡಲಾಗದು ಎಂದ ಮೆಹ್ತಾ
ಆದರೆ ಮಾಧ್ಯಮಗಳ ಮೇಲೆ ಬಾಹ್ಯ ನಿಯಂತ್ರಣ ಹೇರುವುದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು. 'ಪತ್ರಕರ್ತ ಸ್ವಾತಂತ್ರ್ಯ ಉನ್ನತವಾಗಿರಬೇಕು. ನ್ಯಾ. ಜೋಸೆಫ್ ಅವರ ಹೇಳಿಕೆಯಲ್ಲಿ ಎರಡು ಅಂಶಗಳಿವೆ. ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ವಿದ್ಯುನ್ಮಾನ ಮಾಧ್ಯಮದಾಚೆ ಪೂರಕ ಮಾಧ್ಯಮಗಳಿವೆ. ಲ್ಯಾಪ್ಟಾಪ್ ಮತ್ತು ಪತ್ರಕರ್ತ ತಮ್ಮ ವಿಚಾರಗಳನ್ನು ಲಕ್ಷಾಂತರ ಜನರು ನೋಡುವಂತೆ ಮಾಡಬಹುದು. ಅಪಾರ ಸಂಖ್ಯೆಯ ವೆಬ್ ಪೋರ್ಟಲ್ಗಳಿವೆ. ಅವರು ಏನು ತೋರಿಸುತ್ತಾರೋ ಅದಕ್ಕಿಂತ ಅವರ ಮಾಲೀಕತ್ವ ವಿಭಿನ್ನವಾಗಿದೆ' ಎಂದರು.
ಸಮಿತಿ ರಚನೆ ಸಾಧ್ಯತೆ
ಯೂಟ್ಯೂಬ್ಅನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್, ಈ ರೀತಿಯ ವೇದಿಕೆಯನ್ನು ಹೇಗೆ ನಿಯಂತ್ರಿಸಲು ಸಾಧ್ಯ ಮತ್ತು ಅದರ ಆದಾಯ ಮಾದರಿಯನ್ನು ಪ್ರಶ್ನಿಸುವುದು ಹೇಗೆ? ಎಂದರು. ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಂದು ಮಾಧ್ಯಮದ ನಿಯಂತ್ರಣವನ್ನು ನಿರ್ಲಕ್ಷಿಸಲಾಗದು. ಪತ್ರಕರ್ತರನ್ನು ಕೆಲವು ನಿರ್ದಿಷ್ಟ ತತ್ವಗಳಡಿಯಲ್ಲಿ ನಿಯಂತ್ರಿಸಬೇಕು ಎಂದ ನ್ಯಾಯಪೀಠ, ವಿದ್ಯುನ್ಮಾನ ಮಾಧ್ಯಮಗಳಿಗೆ ಮಾರ್ಗದರ್ಶನ ಮಾಡಲು ಕೆಲವು ತತ್ವಗಳನ್ನು ರೂಪಿಸುವಂತೆ ವಿವಿಧ ವಲಯದ ಐವರು ಪ್ರಮುಖರನ್ನು ಒಳಗೊಂಡ ಸಮಿತಿಯನ್ನು ರಚಿಸುವ ಬಗ್ಗೆ ನ್ಯಾಯಪೀಠ ಒಲವು ತೋರಿಸಿತು. ಸೆ. 17ರಂದು ವಿಚಾರಣೆಯನ್ನು ನಿಗದಿಪಡಿಸಿತು.