ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ನ ವಿವಾದಾತ್ಮಕ ತೀರ್ಪು ರದ್ದುಪಡಿಸಿದ ಸುಪ್ರೀಂ
ನವದೆಹಲಿ, ನವೆಂಬರ್ 18: ಲೈಂಗಿಕ ದೌರ್ಜನ್ಯದ ಕುರಿತು ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ರದ್ದುಪಡಿಸಿದೆ. ಚರ್ಮದಿಂದ ಚರ್ಮಕ್ಕೆ ನೇರ ದೈಹಿಕ ಸಂಪರ್ಕವಿಲ್ಲದ ಕ್ರಿಯೆಯು ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದಾಗುವುದಿಲ್ಲ ಎಂದು ತೀರ್ಪು ನೀಡುವ ಮೂಲಕ ಬಾಂಬೆ ಹೈಕೋರ್ಟ್ ವಿ೯ವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕವಾಗದೆ, ಮಗುವಿನ ಎದೆಯನ್ನು ಆಕೆಯ ಉಡುಪಿನ ಮೇಲಿನಿಂದ ಒತ್ತಿರುವುದು ಲೈಂಗಿಕ ಅಪರಾಧವಾಗುವುದಿಲ್ಲ ಎಂದು ತೀರ್ಪು ನೀಡುವ ಮೂಲಕ ವ್ಯಕ್ತಿಯೊಬ್ಬನನ್ನು ಆರೋಪದಿಂದ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಹಾಗೆಯೇ ಇದು ಚರ್ಮದಿಂದ ಚರ್ಮಕ್ಕೆ ನೇರ ದೈಹಿಕ ಸಂಪರ್ಕವಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ಹೇಳಿತ್ತು.
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು
ಸತೀಶ್ ಬಂಡು ರಗ್ಡೆ ಎಂಬ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಸೆಕ್ಷನ್ 8ರ ಅಡಿ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ವಿ. ಗಣೇಡಿವಾಲಾ ಜ. 19ರಂದು ವಜಾಗೊಳಿಸಿದ್ದರು. ತೀರ್ಪಿನ ಹಿಂದಿನ ತಾರ್ಕಿಕತೆಯನ್ನು ಕಾನೂನು ತಜ್ಞರು ಮತ್ತು ಜನ ಸಾಮಾನ್ಯರು ತೀವ್ರವಾಗಿ ಟೀಕಿಸಿದ್ದರು.
ಹಾಗೆಯೇ ಈ ತೀರ್ಪನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದು ಮಾಡಿದೆ. ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ. "ಪೊಕ್ಸೊ ಕಾಯಿದೆಯಡಿ 'ಲೈಂಗಿಕ ಆಕ್ರಮಣ'ದ ಅಪರಾಧವನ್ನು ನಿರ್ಧಾರ ಮಾಡುವ ಪ್ರಮುಖ ಅಂಶವು ಲೈಂಗಿಕ ಉದ್ದೇಶವಾಗಿದೆ, ಬದಲಾಗಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದು ಅಲ್ಲ," ಎಂದು ಪೀಠ ಸ್ಪಷ್ಟಪಡಿಸಿದೆ.
"ಲೈಂಗಿಕ ಉದ್ದೇಶ ಮಾತ್ರ ಲೈಂಗಿಕ ದೌರ್ಜನ್ಯದ ಅಪರಾಧವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಅದರ ಬದಲಾಗಿ ಇಲ್ಲಿ ಮಗುವಿನೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕ ಹೊಂದುವ ವಿಚಾರ ಬರುವುದಿಲ್ಲ. ನಾವು ನಿಯಮವೊಂದನ್ನು ರೂಪಿಸುವುದು ನಿಯಮಕ್ಕೆ ಪರಿಣಾಮಕಾರಿಯಾಗುವಂತೆ ಇರಬೇಕೆ. ನಿಯಮವನ್ನು ನಾಶ ಮಾಡುವಂತಹ ನಿಯಮ ಇರಬಾರದು," ಎಂದು ಕೂಡಾ ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನು ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿ ಕಡ್ಡಾಯಗೊಳಿಸುವುದು ಅಸಂಬದ್ಧ ವ್ಯಾಖ್ಯಾನ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇನ್ನು ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ನ್ಯಾಯಾಲಯ ಆರೋಪಿಯು 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಕಾರಣವಾದ ಪ್ರಕರಣವೇನು?
ಮುಂಬೈ ಮೂಲದ ಆರೋಪಿ ಸತೀಶ್ ರಗ್ಡೆ 2016ರಲ್ಲಿ 12 ವರ್ಷದ ಬಾಲಕಿಗೆ ಸೀಬೆ ಹಣ್ಣು ನೀಡುವ ನೆಪದಲ್ಲಿ ಮನೆಗೆ ಕರೆದೊಯ್ದು ಆಕೆಯ ಎದೆಯನ್ನು ಒತ್ತುವುದು ಮತ್ತು ಸಲ್ವಾರ್ ಕಳಚುವ ಪ್ರಯತ್ನ ಮಾಡುತ್ತಿದ್ದ. ಇದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ್ದ ಬಾಲಕಿಯ ತಾಯಿ ಮಗಳನ್ನು ಗಮನಿಸಿದ್ದರು. ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಐವರು ಸಾಕ್ಷಿಗಳು ಮತ್ತು ಪೊಲೀಸರ ಹೇಳಿಕೆ ಪರಿಗಣಿಸಿ ಕೆಳ ನ್ಯಾಯಾಲಯವು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿತ್ತು. ಮಹಿಳೆಯ ಎದೆಯನ್ನು ಒತ್ತುವುದು ಆಕೆಯ ವಿನಮ್ರತೆಗೆ ಧಕ್ಕೆ ತರುವ ಉದ್ದೇಶದ ಬಲವಂತದ ಅಪರಾಧವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಬಲವಂತವಿಲ್ಲದೆ ಲೈಂಗಿಕ ಬಯಕೆಯಿಂದ ದೈಹಿಕವಾದ ಚರ್ಮದಿಂದ ಚರ್ಮದ ನೇರ ಸಂಪರ್ಕವಿಲ್ಲ' ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)