3 ಕೋಟಿ ಪಡಿತರ ಚೀಟಿ ರದ್ದು; ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಸೂಚನೆ
ನವದೆಹಲಿ, ಮಾರ್ಚ್ 17: ಆಧಾರ್ ಸಂಖ್ಯೆ ಜೋಡಣೆಯಾಗದ ಕಾರಣ ಸುಮಾರು ಮೂರು ಕೋಟಿ ಪಡಿತರ ಚೀಟಿಗಳನ್ನು ಕೇಂದ್ರ ರದ್ದುಗೊಳಿಸಿರುವುದು "ಅತಿ ಗಂಭೀರ ವಿಷಯ" ಎಂದು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಹಾಗೂ ಎಲ್ಲಾ ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದೆ.
ಎಸ್.ಎ.ಬೊಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠ ಈ ಸಂಬಂಧ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದು, "ಈ ವಿಷಯವನ್ನು ದುರದೃಷ್ಟ ಎಂದು ಹೇಳಿ ಸುಮ್ಮನಾಗುವಂತಿಲ್ಲ. ಪಡಿತರ ಚೀಟಿ ರದ್ದುಗೊಳಿಸುವುದು ಅತಿ ಗಂಭೀರ ವಿಷಯ. ಇದನ್ನು ಅಂತಿಮ ವಿಚಾರಣೆಗೆ ಒಳಪಡಿಸಲಾಗುವುದು" ಎಂದು ಹೇಳಿದೆ.
ಬಿಪಿಎಲ್ ಕಾರ್ಡ್ದಾರರಿಗೆ 3 ಲೀಟರ್ ಸೀಮೆಎಣ್ಣೆ ವಿತರಿಸಲು ಆದೇಶ
2018ರಲ್ಲಿ ಕೊಯಿಲಿ ದೇವಿ ಎಂಬುವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಅರ್ಜಿದಾರ ಪರ ವಕೀಲ ಕಾಲಿನ್ ಗೊನ್ಸಲ್ವ್ಸ್, "ಪಡಿತರ ಚೀಟಿ ರದ್ದತಿಯಿಂದ ಸಮಸ್ಯೆಗೆ ಒಳಗಾಗಿರುವ ಬಹಳಷ್ಟು ಜನರ ಪ್ರತಿನಿಧಿಯಂತೆ ಈ ಅರ್ಜಿ ಸಲ್ಲಿಸಲಾಗಿದೆ. ಸುಮಾರು ಮೂರು ಕೋಟಿ ಪಡಿತರ ಚೀಟಿ ರದ್ದಾಗಿವೆ. ಇದರಿಂದ ಎಷ್ಟೋ ಜನ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ" ಎಂದು ವಾದಿಸಿದ್ದಾರೆ.
ಪ್ರತಿವಾದಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ವಾದಿಸಿದ್ದು, "ಈಗಾಗಲೇ ಕೇಂದ್ರ ಇದಕ್ಕೆ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಕಾಲಿನ್ ತಪ್ಪು ಹೇಳಿಕೆ ನೀಡುತ್ತಿದ್ದಾರೆ" ಎಂದಿದ್ದಾರೆ. ಇದಕ್ಕೆ ಕಾಲಿನ್ ಪ್ರತಿಕ್ರಿಯಿಸಿದ್ದು, "ಪಡಿತರ ಚೀಟಿ ಸಂಬಂಧ ಮುಖ್ಯ ಸಮಸ್ಯೆ ಹೊರತುಪಡಿಸಿ ಇನ್ನಿತರೆ ಸಮಸ್ಯೆಗಳಿಗೆ ಕೇಂದ್ರ ಸ್ಪಷ್ಟನೆ ನೀಡಿದೆಯಷ್ಟೆ" ಎಂದು ತಿಳಿಸಿದ್ದಾರೆ.
ಈ ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠವು, "ಪಡಿತರ ಚೀಟಿಯಲ್ಲಿ ಆಧಾರ್ ಜೋಡಣೆ ಒಳಗೊಂಡಿರುವ ಕಾರಣ ಈ ವಿಷಯದಲ್ಲಿ ಕೇಂದ್ರದ ಪ್ರತಿಕ್ರಿಯೆ ನಿರೀಕ್ಷಿಸಿದ್ದೇವೆ. ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು" ಎಂದು ಸೂಚಿಸಿದೆ.
2018ರಲ್ಲಿ ಜಾರ್ಖಂಡ್ನ ಸಿಮ್ದೇಗಾ ಜಿಲ್ಲೆಯಲ್ಲಿ 11 ವರ್ಷದ ಬಾಲಕಿ ಸಂತೋಷಿ ಮೃತಪಟ್ಟಿದ್ದು, ತಮ್ಮ ಮಗಳು ಹಸಿವಿನಿಂದಾಗಿ ಸಾವನ್ನಪ್ಪಿದ್ದಾಳೆ. ಇದಕ್ಕೆ ಸ್ಥಳೀಯ ಆಡಳಿತ ಪಡಿತರ ಚೀಟಿ ರದ್ದುಗೊಳಿಸಿದ್ದೇ ಕಾರಣ ಎಂದು ಆರೋಪಿಸಿ ಆಕೆ ತಾಯಿ ಕೊಯಿಲಿ ದೇವಿ ಅರ್ಜಿ ಸಲ್ಲಿಸಿದ್ದರು.