ಉತ್ತರಾಖಂಡ್ ಸಿಎಂ ರಾವತ್ ವಿರುದ್ಧ ಸಿಬಿಐ ತನಿಖೆ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್
ನವದೆಹಲಿ, ಅಕ್ಟೋಬರ್.29: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಹೈಕೋರ್ಟ್ ತೀರ್ಪಿಗೆ ತಡೆ ನೀಡಿರುವ ಸರ್ವೋಚ್ಛ ನ್ಯಾಯಾಲಯವು ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದೆ.
ಇಬ್ಬರು ಪತ್ರಕರ್ತರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ನೈನಿತಾಲ್ ಹೈಕೋರ್ಟ್, ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಎಂ ರಾವತ್ ಅವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
WFH ಬದಲಿಗೆ ಬಂಪರ್: ಪರ್ವತಗಳ ಮೇಲೆ ಕುಳಿತು ಮಾಡಬಹುದು ಉದ್ಯೋಗ!
ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಇಬ್ಬರು ಪತ್ರಕರ್ತರು ಅರ್ಜಿ ಸಲ್ಲಿಸಿದ್ದರು. 2020ರ ಜುಲೈನಲ್ಲಿ ಉಮೇಶ್ ಶರ್ಮಾ ಮತ್ತು ಶಿವ ಪ್ರಸಾದ್ ಸೆಮ್ವಾಲ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿತ್ತು. ಎಫ್ಐಆರ್ ರದ್ದುಪಡಿಸುವ ಬೆನ್ನಲ್ಲೇ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಸೂಚನೆ ನೀಡಿತ್ತು.
ಸಿಎಂ ಸಂಬಂಧಿಕರ ಖಾತೆಗೆ ಹಣ:
2016ರಲ್ಲಿ ತ್ರಿವೇಂದ್ರ ಸಿಂಗ್ ರಾವತ್, ಉತ್ತರಾಖಂಡ್ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿದ್ದರು. ಅಂದು ಗ್ರಾಮ ಸೇವಾ ಆಯೋಗದ ಮುಖ್ಯಸ್ಥರಾಗಿ ನೇಮಿಸುವುದಕ್ಕಾಗಿ ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಉಮೇಶ್ ಶರ್ಮಾ ಆರೋಪಿಸಿದ್ದಾರೆ. ಅಮೃತೇಶ್ ಚೌವ್ಹಾಣ್ ಎಂಬ ವ್ಯಕ್ತಿಯು ಸರ್ಕಾರಿ ಉದ್ಯೋಗಕ್ಕಾಗಿ ಸಿಎಂ ಸಂಬಂಧಿಕರಾದ ಹರೇಂದ್ರ ಸಿಂಗ್ ರಾವತ್ ಮತ್ತು ಪತ್ನಿ ಸವಿತಾ ರಾವತ್ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದ್ದರು.
ಸಿಎಂ ಸ್ಥಾನದಲ್ಲಿ ಕುಳಿತುಕೊಂಡು ತಮ್ಮ ಅಧಿಕಾರವನ್ನು ದುರಪಯೋಗಪಡಿಸಿಕೊಂಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ವಕೀಲ ದಿವ್ಯಾಮ್ ಅಗರ್ವಾಲ್ ಮೂಲಕ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.