ಸುಪ್ರೀಂಕೋರ್ಟ್ನಲ್ಲಿ ಮತ್ತೆ ಹಿನ್ನಡೆ: ಅನರ್ಹ ಶಾಸಕರು ಕಂಗಾಲು
Recommended Video
ನವದೆಹಲಿ, ಆಗಸ್ಟ್ 26: ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ರಾಜ್ಯದ ಬಂಡಾಯ ಶಾಸಕರಿಗೆ ಭಾರಿ ಹಿನ್ನಡೆಯಾಗಿದೆ.
ತಮ್ಮ ಅನರ್ಹತೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಶಾಸಕರು, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಕೋರಿದ್ದರು. ಆದರೆ, ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟಿನಲ್ಲಾದ ಎರಡು ಆಘಾತ ಏನು?
ಸುಪ್ರೀಂಕೋರ್ಟ್ನಲ್ಲಿ ತಮ್ಮ ಅರ್ಜಿ ವಿಚಾರಣೆಗೆ ಬಂದರೆ ಅರ್ಧ ಹೊರೆ ಕಡಿಮೆಯಾಗಲಿದೆ. ಇಷ್ಟು ಸಮಯ ನಡೆಸಿದ ಓಡಾಟ, ಸಂಘರ್ಷಗಳಿಗೆ ಅಂತಿಮ ವಿರಾಮ ಸಿಗಲಿದೆ ಎಂದು ಭರವಸೆ ಹೊಂದಿದ್ದರು. ಆದರೆ, ಅವರ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ಆತುರ ತೋರಿಸುತ್ತಿಲ್ಲ. ಅಯೋಧ್ಯಾ ವಿವಾದ ಸೇರಿದಂತೆ ವಿವಿಧ ಪ್ರಮುಖ ಅರ್ಜಿಗಳ ವಿಲೇವಾರಿಗೆ ಸುಪ್ರೀಂಕೋರ್ಟ್ ಆದ್ಯತೆ ನೀಡಿರುವುದರಿಂದ ಬೇರೆ ಅರ್ಜಿಗಳ ವಿಚಾರಣೆಗೆ ಅದು ಮಹತ್ವ ಕೊಡುತ್ತಿಲ್ಲ.
ಅನರ್ಹ ಶಾಸಕರ ಉದ್ದೇಶಕ್ಕೆ ಬ್ರೇಕ್
ಇದರಿಂದ ಪಕ್ಷಗಳ ನಿರ್ಧಾರದ ವಿರುದ್ಧ ಕಾನೂನು ಸಮರ ಕೈಗೊಂಡಿರುವ ಅನರ್ಹ ಶಾಸಕರ ಸಂಕಟ ಹೆಚ್ಚಾಗಿದೆ. ಸುಪ್ರೀಂಕೋರ್ಟ್ ಆದಷ್ಟು ಬೇಗನೆ ಅರ್ಜಿ ಕೈಗೆತ್ತಿಕೊಂಡು ವಿಚಾರಣೆ ನಡೆಸಿ, ತೀರ್ಪು ತಮ್ಮ ಪರವಾಗಿ ಬಂದರೆ, ಈಗಲೇ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಮಂತ್ರಿಗಿರಿ ಪಡೆದುಕೊಳ್ಳಲು ಸಾಧ್ಯ ಎನ್ನುವುದು ಅವರ ಉದ್ದೇಶ. ಇಂದು ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎನ್ವಿ ರಮಣ ಅವರ ನೇತೃತ್ವದ ನ್ಯಾಯಪೀಠ, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಒಳಪಡಿಸಲು ನಿರಾಕರಿಸಿತು.
ಕೈಕೊಟ್ಟರೇ ವಕೀಲ ರೋಹಟಗಿ?
ಶಾಸಕರ ಅರ್ಜಿ ತಿರಸ್ಕೃತವಾಗಲಿದೆ ಎನ್ನುವುದು ಅವರ ಪರ ವಕೀಲ ಮುಕುಲ್ ರೋಹಟಗಿ ಅವರಿಗೆ ಅರಿವಿತ್ತು. ಹೀಗಾಗಿ ಅವರು ಅರ್ಜಿ ಕುರಿತು ಪ್ರಸ್ತಾಪ ಮಾಡಲು ಮುಂದಾಗಲಿಲ್ಲ. ಅವರ ಪರವಾಗಿ ಕಿರಿಯ ವಕೀಲರು ಅರ್ಜಿಯ ತುರ್ತು ವಿಚಾರಣೆಯ ಪ್ರಸ್ತಾಪ ಮಾಡಲು ಸಿದ್ಧರಾಗಿದ್ದರೂ ರೋಹಟಗಿ ಅವರ ಸಲಹೆಯಂತೆ ಪ್ರಸ್ತಾಪ ಮಾಡಲಿಲ್ಲ ಎನ್ನಲಾಗಿದೆ. ನ್ಯಾಯಾಲಯದ ರಿಜಿಸ್ಟ್ರಾರ್ ಅವರೇ ಅದನ್ನು ಲಿಸ್ಟ್ ಮಾಡಲಿ ಎಂದು ಪೀಠ ಹೇಳಿತ್ತು. ಇದರಿಂದ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸುಪ್ರೀಂಕೋರ್ಟ್ ಕದತಟ್ಟಿರುವ 17 ಅನರ್ಹ ಶಾಸಕರ ಸ್ಥಿತಿ ಅತಂತ್ರವಾಗಿಯೇ ಉಳಿದುಕೊಂಡಿದೆ.
ಅತೃಪ್ತರ ಕಾಲೆಳೆದ ದೆಹಲಿ ವಾರ್ತೆ ಜಾಹೀರಾತು, ಏನಿದರ ಹಕೀಕತ್ತು
ಕಾದು ನೋಡೋಣ ಎಂದ ವಕೀಲರು
ಅನರ್ಹ ಶಾಸಕರು ಅರ್ಜಿ ಸಲ್ಲಿಸಿ ತಿಂಗಳು ಕಳೆದಿದ್ದರೂ ಇನ್ನೂ ಅದು ವಿಚಾರಣೆಗೆ ಬಂದು ಇತ್ಯರ್ಥವಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ತುರ್ತು ವಿಚಾರಣೆಗೆ ಮನವಿ ಮಾಡುವಂತೆ ವಕೀಲರ ಬಳಿ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಆದರೆ, ಅರ್ಜಿಯು ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಕಾದು ನೋಡೋಣ ಎಂದು ರೋಹಟಗಿ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸುಪ್ರೀಂ ತೀರ್ಪಿನ ಮೇಲೆ ಭವಿಷ್ಯ
ಅತ್ತ ಪಕ್ಷದಿಂದ ಉಚ್ಚಾಟನೆಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುಖಂಡರು ಸದ್ಯದ ಪರಿಸ್ಥಿತಿಯಲ್ಲಿ ದಿಕ್ಕೆಟ್ಟಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ತಮ್ಮ ಅರ್ಜಿ ಇತ್ಯರ್ಥವಾಗುವುದು ವಿಳಂಬವಾದಷ್ಟೂ ತಮ್ಮ ರಾಜಕೀಯ ಬದುಕಿಗೆ ಮಾರಕವಾಗಲಿದೆ. ಆದಷ್ಟು ಬೇಗನೆ ಇತ್ಯರ್ಥವಾದರೆ ಬಿಜೆಪಿ ಸರ್ಕಾರದಲ್ಲಿ ಅವರು ನೀಡಿದ ಭರವಸೆಯಂತೆ ಮಂತ್ರಿ ಸ್ಥಾನ ಸಿಗಲಿದೆ. ಇದು ರಾಜಕೀಯ ಮೈಲೇಜ್ ಹೆಚ್ಚಿಸಿಕೊಳ್ಳಲು ನೆರವಾಗಲಿದೆ. ಉಪಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಮೊದಲು ನ್ಯಾಯಾಲಯದಲ್ಲಿ ಗೆಲ್ಲುವುದು ಅನಿವಾರ್ಯ ಎಂಬ ಒತ್ತಡಕ್ಕೆ ಸಿಲುಕಿದ್ದಾರೆ.