ಅನರ್ಹ ಶಾಸಕರಿಗೆ ಮತ್ತೊಂದು ಆಘಾತ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ನವೆಂಬರ್ 8: ಈಗಾಗಲೇ ಘೋಷಣೆಯಾಗಿರುವ ಉಪ ಚುನಾವಣೆಯನ್ನು ತಮ್ಮ ಪ್ರಕರಣದ ತೀರ್ಪು ಪ್ರಕಟವಾಗುವವರೆಗೂ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅನರ್ಹ ಶಾಸಕರು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಇದರಿಂದ ಚುನಾವಣೆಯ ಮುಂದೂಡಿಕೆಯಾದರೆ ಸ್ವಲ್ಪ ನಿರಾಳತೆ ಸಿಗಲಿದೆ ಎಂಬ ಅನರ್ಹರ ನಿರೀಕ್ಷೆ ಹುಸಿಯಾಗಿದ್ದು, ಅವರಲ್ಲಿನ ತಳಮಳ ಹೆಚ್ಚಾಗಿದೆ.
ಅನರ್ಹ ಶಾಸಕರ ಪರ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂದೆ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ನ್ಯಾಯಪೀಠವು ಈಗಾಗಲೇ ವಿಚಾರಣೆ ನಡೆಸಿದೆ. ಆದರೆ ತೀರ್ಪು ಪ್ರಕಟವಾಗಿಲ್ಲ. ತೀರ್ಪಿನ ಆಧಾರದಲ್ಲಿ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಗ ನಿಗದಿಯಾದ ದಿನಾಂಕದಂದು ಉಪ ಚುನಾವಣೆ ನಡೆದರೆ ಅದರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಅನರ್ಹ ಶಾಸಕರ ವಾದವಾಗಿತ್ತು.
ಬಿಎಸ್ವೈ ಆಡಿಯೋ ಸಾಕ್ಷಿ: ಅನರ್ಹ ಶಾಸಕರಿಗೆ ತೀವ್ರ ಸಂಕಷ್ಟ
17 ಅನರ್ಹ ಶಾಸಕರ ಪೈಕಿ 15 ಶಾಸಕರ ಕ್ಷೇತ್ರಗಳಿಗೆ ಡಿ.5ರಂದು ಉಪ ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಯನ್ನು ಡಿ.15ಕ್ಕೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಪ್ರಕರಣದ ತೀರ್ಪು ಪ್ರಕಟವಾಗುವವರೆಗೂ ಉಪ ಚುನಾವಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದರು.
ಬುಧವಾರ ವಿಚಾರಣೆಗೆ ಅರ್ಜಿ ಲಿಸ್ಟ್
ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಅವರ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಚುನಾವಣೆ ಮುಂದೂಡಬೇಕೆಂಬ ಮನವಿ ಕುರಿತಂತೆ ಸೂಕ್ತ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿ. ಅದನ್ನು ಪರಿಗಣಿಸುತ್ತೇವೆ ಎಂದು ನ್ಯಾ. ರಮಣ ಸೂಚಿಸಿದರು. ಅದರಂತೆ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದು, ಬುಧವಾರ ವಿಚಾರಣೆಗೆ 'ಲಿಸ್ಟ್' ಮಾಡಿದೆ.
ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭ
ಡಿ. 5ರಂದು ಅನರ್ಹ ಶಾಸಕರ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಿಗದಿಯಾಗಿದೆ. ನ.11ರಿಂದ (ಸೋಮವಾರ) ನೀತಿ ಸಂಹಿತೆ ಜಾರಿಯಾಗಲಿದೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನ.18 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ನೀಡುವ ತೀರ್ಪು ಅವಕಾಶ ನೀಡಲಿದೆ ಎಂಬ ಭರವಸೆ ಅನರ್ಹ ಶಾಸಕರದ್ದು. ಆದರೆ ಸುಪ್ರೀಂಕೋರ್ಟ್ ತೀರ್ಪು ವಿಳಂಬವಾಗುತ್ತಿರುವುದು ಅನರ್ಹ ಶಾಸಕರಲ್ಲಿ ತಳಮಳ ಮೂಡಿಸಿದೆ. ಒಂದು ವೇಳೆ ನಾಮಪತ್ರ ಸಲ್ಲಿಕೆಯ ದಿನಾಂಕದೊಳಗೆ ತೀರ್ಪು ಪ್ರಕಟವಾಗದೆ ಹೋದರೆ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ.
ಮುಖ್ಯಮಂತ್ರಿ ಸ್ಥಾನ ಬೇಕಿರಲಿಲ್ಲ, ಅನರ್ಹ ಶಾಸಕರನ್ನು ನಂಬಿಸಿ ತಪ್ಪು ಮಾಡಿದೆ: ಯಡಿಯೂರಪ್ಪ
ಈಗಾಗಲೇ ಒಮ್ಮೆ ಚುನಾವಣೆ ಮುಂದೂಡಿಕೆ
ಇದಕ್ಕೂ ಮುನ್ನ ಚುನಾವಣಾ ಆಯೋಗ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳ ಉಪ ಚುನಾವಣೆ ಜತೆಗೆ ರಾಜ್ಯದ 15 ಕ್ಷೇತ್ರಗಳಿಗೆ ಅ.21ರಂದು ಚುನಾವಣೆ ನಿಗಡಿಪಡಿಸಿತ್ತು. ಇದನ್ನು ಮುಂದೂಡುವಂತೆ ಅನರ್ಹ ಶಾಸಕರು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಚುನಾವಣಾ ಆಯೋಗವೇ ಸ್ವತಃ ಚುನಾವಣೆ ದಿನಾಂಕವನ್ನು ಮುಂದೂಡಲು ಆಸಕ್ತಿ ತೋರಿ ಡಿ.5ರಂದು ಚುನಾವಣೆ ನಡೆಯುವಂತೆ ಹೊಸ ವೇಳಾಪಟ್ಟಿ ನಿಗದಿಪಡಿಸಿತ್ತು.
ಚಾಮುಂಡಿ ದೇವಿಯ ದರ್ಶನ
ಸುಪ್ರೀಂಕೋರ್ಟ್ ತೀರ್ಪು ಏನಾಗಲಿದೆ ಎಂಬ ಕಳವಳದ ನಡುವೆ ಅನರ್ಹ ಶಾಸಕರಾದ ಗೋಕಾಕ್ನ ರಮೇಶ್ ಜಾರಕಿಹೊಳಿ ಮತ್ತು ಅಥಣಿಯ ಮಹೇಶ್ ಕುಮಟಳ್ಳಿ ಶುಕ್ರವಾರ ಮೈಸೂರಿನಲ್ಲಿ ಚಾಮುಂಡಿ ದೇವಿ ದರ್ಶನ ಪಡೆದರು. ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, 'ನನಗೆ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಯಾವ ಭಯವೂ ಇಲ್ಲ. ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ತೀರ್ಪು ಏನಾಗುತ್ತದೆ ಅದು ಆಗಲಿ ಬಿಡಲಿ. ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ಸಾಕು' ಎಂದು ಹೇಳಿದರು.