ಡಿ.ಕೆ. ಶಿವಕುಮಾರ್ಗೆ ಹಿನ್ನಡೆ: ಐಟಿ ಪ್ರಕರಣದ ವಿಚಾರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ
ನವದೆಹಲಿ, ಆಗಸ್ಟ್ 27: ತಮ್ಮ ವಿರುದ್ಧ ಆದಾಯ ತೆರಿಗೆ ವಂಚನೆ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಗುರುವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡಿತು. ನಾಲ್ಕು ವಾರಗಳ ಬಳಿಕ ಈ ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ಮುಂದೂಡಿತು.
ಬೇರೆಯವರ ಆಸ್ತಿಯನ್ನು ನಮ್ಮ ಆಸ್ತಿ ಎನ್ನುತ್ತಿದ್ದಾರೆ: ಡಿ.ಕೆ.ಸುರೇಶ್
2017ರ ಆಗಸ್ಟ್ನಲ್ಲಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ದಾಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ವಿಚಾರಣೆಗೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿತು. ಡಿ.ಕೆ. ಶಿವಕುಮಾರ್ ಅವರಿಗೆ ಈ ಪ್ರಕರಣದಲ್ಲಿ ಏಕೆ ವಿನಾಯಿತಿ ನೀಡಬಾರದು ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಐಟಿ ಇಲಾಖೆಗೆ ಸೂಚಿಸಿ, ನಾಲ್ಕು ವಾರಗಳ ಕಾಲ ಪ್ರಕರಣವನ್ನು ಮುಂದೂಡಿತು.
ವಿನಾಯಿತಿ ಕೋರಿ ಅರ್ಜಿ
2019ರ ನವೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಅವರು ಸುಪ್ರೀಂಕೋರ್ಟ್ನಲ್ಲಿ ವಿಶೇಷ ರಜೆ ಅರ್ಜಿ ಸಲ್ಲಿಸಿದ್ದರು. ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣದಿಂದ ವಿನಾಯಿತಿ ಕೋರಿ ಅವರು ಮನವಿ ಮಾಡಿದ್ದರು. ಆದರೆ ಅದನ್ನು ತಿರಸ್ಕರಿಸಲಾಗಿದೆ.
ಅಕ್ರಮ ಆದಾಯ ಎನ್ನುವಂತಿಲ್ಲ
ಡಿ.ಕೆ. ಶಿವಕುಮಾರ್ ಅವರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವವರೆಗೂ ಕಾಯದೆಯೇ ದಾಳಿಯ ವೇಳೆ ಸಿಕ್ಕ ಮೊತ್ತವನ್ನು ಅಕ್ರಮ ಆದಾಯ ಎಂದು ಇಲಾಖೆಯು ಪರಿಗಣಿಸಬಾರದು ಎಂಬುದಾಗಿ ಈ ಅರ್ಜಿಯಲ್ಲಿ ವಾದಿಸಲಾಗಿದೆ. ವಿಚಾರಣೆಗೆ ಅನುಮತಿ ನೀಡಲು ಪ್ರಿನ್ಸಿಪಲ್ ಡೈರೆಕ್ಟರ್ಗೆ ಅಧಿಕಾರವಿಲ್ಲ. ಐಟಿ ಕಾಯ್ದೆಯ ಪ್ರಕಾರ ಕಮಿಷನರ್ ಅನುಮತಿ ನೀಡಬೇಕೇ ವಿನಾ, ನಿರ್ದೇಶಕರಲ್ಲ ಎಂದು ವಾದಿಸಲಾಗಿದೆ.
ಜನ ಪ್ರತಿನಿಧಿಗಳ ಕೋರ್ಟ್ಗೆ ಡಿಕೆ ಶಿವಕುಮಾರ್ ಹಾಜರ್
ರಿಟರ್ನ್ಸ್ ಸಲ್ಲಿಕೆವರೆಗೆ ಕಾದಿಲ್ಲ
1961ರ ಆದಾಯ ತೆರಿಗೆ ಕಾಯ್ದೆಯಡಿ, ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಹಣದ ಕುರಿತು ತೆರಿಗೆದಾರನ ವಿವರಣೆಯು ತೃಪ್ತಿಕರವೆನಿಸದೆ ಹೋದರೆ ಮಾತ್ರವೇ ಕ್ರಿಮಿನಲ್ ವಿಚಾರಣೆ ನಡೆಸಬಹುದಾಗಿ. ಆದರೆ ಡಿ.ಕೆ. ಶಿವಕುಮಾರ್ ಅವರು ತಮ್ಮ ರಿಟರ್ನ್ಸ್ ಸಲ್ಲಿಕೆ ಮಾಡುವವರೆಗೂ ಕಾಯದೆಯೇ ಮತ್ತು ಅವರ ಸಲ್ಲಿಕೆಯ ನಂತರದ ಮೌಲ್ಯಮಾಪನ ಆದೇಶ ಮಾಡುವುದನ್ನು ಪರಿಗಣಿಸದೆಯೇ ಆದಾಯ ತೆರಿಗೆ ಇಲಾಖೆ ವಿಚಾರಣೆ ಶುರುಮಾಡಿದೆ ಎಂದು ಆಕ್ಷೇಪಿಸಲಾಗಿದೆ.
ಕಾನೂನಾತ್ಮಕ ವಿಚಾರಣೆಗೆ ಸಾಧ್ಯವೇ ಇಲ್ಲ
ಕೇಂದ್ರ ನೇರ ತೆರಿಗೆಗಳ ಮಂಡಳಿ ಹೊರಡಿಸಿದ್ದ ಅಧಿಸೂಚನೆ ಪ್ರಕಾರ, ಆದಾಯದ ಮರೆಮಾಚುವಿಕೆ ಖಚಿತವಾದಾಗ ದಂಡ ವಿಧಿಸಿದಾಗ ಮತ್ತು ಅದನ್ನು ಸಂಬಂಧಿತ ನ್ಯಾಯಮಂಡಳಿ ಎತ್ತಿಹಿಡಿದಾಗ ಮಾತ್ರವೇ ಪ್ರಾಸಿಕ್ಯೂಷನ್ಗೆ ಚಾಲನೆ ನೀಡಬಹುದು. ವಿಚಾರಣೆ ಆರಂಭಿಸಿದ ವೇಳೆ ಐಟಿ ಇಲಾಖೆಯು ಕಾನೂನಾತ್ಮಕವಾಗಿ ಅದನ್ನು ಪ್ರಾರಂಭಿಸಲು ಸಾಧ್ಯವೇ ಇರಲಿಲ್ಲ ಎಂದು ವಾದ ಮಂಡಿಸಲಾಗಿದೆ.
ಆರ್ಥಿಕ ಅವ್ಯವಹಾರ: ಸಾಕ್ಷಿ ಸಂಗ್ರಹಿಸದ ಸಿಬಿಐ, ಡಿಕೆಶಿಗೆ ಸದ್ಯಕ್ಕೆ ರಿಲೀಫ್