ಸಿಎಎಗೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ
ನವದೆಹಲಿ, ಜನವರಿ 22: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್ಪಿಆರ್) ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಿಎಎ ಮತ್ತು ಎನ್ಪಿಆರ್ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆಗೆ ಮುಂದಾಗಿರುವ ಸುಪ್ರೀಂಕೋರ್ಟ್, ಈ ಅರ್ಜಿಗಳ ಕುರಿತಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಸಮಾಯವಕಾಶ ನೀಡಿದೆ.
ಸಿಎಎ ವಿರುದ್ಧ ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಬುಧವಾರದಿಂದ ವಿಚಾರಣೆ
ಕೇಂದ್ರ ಸರ್ಕಾರದ ಸಿಎಎ ವಿರುದ್ಧ ಸುಪ್ರೀಂಕೋರ್ಟ್ಗೆ ಸುಮಾರು 140 ಅರ್ಜಿಗಳು ದಾಖಲಾಗಿದ್ದು, ಬುಧವಾರ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆಗೆ ಎತ್ತಿಕೊಂಡಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ 144 ಅರ್ಜಿಗಳಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚನೆ ನೀಡಿತು. ಆದರೆ ಇವುಗಳಲ್ಲಿ 60 ಅರ್ಜಿಗಳ ಪ್ರತಿಗಳನ್ನು ಮಾತ್ರ ಕೇಂದ್ರಕ್ಕೆ ಈ ಮೊದಲು ನೀಡಲಾಗಿದೆ. ಹೀಗಾಗಿ ಉಳಿದ 80 ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಸಮಯ ಕೊಡುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಪ್ರಶ್ನಿಸಿದರು.
ಐದು ವಾರಗಳ ಮಧ್ಯಂತರ ಆದೇಶದ ಬಳಿಕ ಈ ಪ್ರಕರಣದ ವಿಚಾರಣೆ ಆರಂಭವಾಗಲಿದೆ. ಇದಕ್ಕಾಗಿ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ರಚನೆಯಾಗಲಿದೆ. ಮೂವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆಯ ಅವಧಿಗಳನ್ನು ನಿಗದಿಗೊಳಿಸಲಿದೆ.
ಎಷ್ಟೇ ಪ್ರತಿಭಟನೆ ಮಾಡಿ, ಸಿಎಎಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಅಮಿತ್ ಶಾ
ಅಸ್ಸಾಂ ಮತ್ತು ತ್ರಿಪುರಾದ ಪ್ರಕರಣಗಳನ್ನು ಒಂದುಗೂಡಿಸಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಈ ಪ್ರಕರಣಗಳನ್ನು ಗುರುತಿಸಲು ಸಹಾಯ ಮಾಡುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ನ್ಯಾಯಪೀಠ ಸೂಚನೆ ನೀಡಿದೆ.
ಹಾಗೆಯೇ ಸಿಎಎ ಕುರಿತು ದೇಶದ ಯಾವುದೇ ಹೈಕೋರ್ಟ್, ಯಾವುದೇ ರೀತಿಯ ಆದೇಶಗಳನ್ನು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ, ಸಿಎಎ ಕಾರ್ಯಾಚರಣೆಗೆ ತಡೆ ನೀಡಬೇಕು ಮತ್ತು ಎನ್ಪಿಆರ್ ನಡೆಸುವುದನ್ನು ಒಂದಷ್ಟು ಕಾಲಾವಧಿವರೆಗೆ ಮುಂದೂಡಬೇಕು ಎಂದು ಕೋರಿದರು. ಇದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿತು.