ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆ ತಡೆ ತೆರವಿಗೆ ಸುಪ್ರೀಂ ನಕಾರ
ನವದೆಹಲಿ, ಮಾರ್ಚ್ 11: ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನಿಂದ ನೀರು ಹರಿಸುವ ಯೋಜನೆಗಿದ್ದ ತಡೆಯನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಜಲಮಂಡಳಿ ಲಕ್ಷಾಂತರ ಲೀಟರ್ ನೀರನ್ನು ವಿವಿಧ ಹಂತಗಳಲ್ಲಿ ಶುದ್ಧೀಕರಿಸುತ್ತದೆ. ಅದರಲ್ಲಿ ಬಹುಪಾಲು ಬಳಕೆಯಾಗದೇ ಮತ್ತೆ ಕೆರೆ, ಕಾಲುವೆಗಳಿಗೆ ಹರಿದು ಹೋಗುತ್ತದೆ.
ಆದರೆ ಈ ನೀರನ್ನು ಸದುಪಯೋಪಡಿಸಿಕೊಳ್ಳಲು ಸಣ್ಣ ನೀರಾವರಿ ಇಲಾಖೆ ನಿರ್ಧರಿಸಿತ್ತು. ಹಾಗಾಗಿ ಜಲಮಂಡಳಿ ಜೊತೆ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ಇಲ್ಲಿಂದ ಶುದ್ಧೀಕರಿಸಿದ ನೀರನ್ನು ಹರಿಸಲು ನಿರ್ಧರಿಸಿದ್ದು, ಇದಕ್ಕೆ ಜಲಮಂಡಳಿ ಕೂಡಾ ಒಪ್ಪಿಕೊಂಡಿತ್ತು.
ಈ ನೀರು ತಮ್ಮ ಕೆರೆಗಳಿಗೆ ಕೊಡುವ ಮೊದಲು ಸರಿಯಾಗಿ ಶುದ್ಧೀಕರಿಸಿ ಅಂತ ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟಗಾರರು ಕಿಡಿಕಾರಿದ್ದರು. ಕೋರ್ಟ್ ಮೆಟ್ಟಿಲೇರಿದ್ದರು.
ಈ ಯೋಜನೆಯಡಿಯಲ್ಲಿ ಕೋಲಾರಕ್ಕೆ 400 ಎಂಎಲ್ ಡಿ ಮತ್ತು ಚಿಕ್ಕಬಳ್ಳಾಪುರಕ್ಕೆ 210 ಎಂಎಲ್ ಡಿ ಶುದ್ಧೀಕರಿಸಿದ ತ್ಯಾಜ್ಯ ನೀರು ಪೂರೈಕೆಯಾಗುವುದಿತ್ತು.ಈ ನೀರು ಆರೋಗ್ಯಕ್ಕೆ ಹಾನಿಕರ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕಲುಷಿತ ನೀರನ್ನು ಕೊಡುವುದು ಅವರಿಗೆ ನಾವು ಮಾಡುವ ದ್ರೋಹ ಎಂದು ವಿಜ್ಞಾನಿಗಳು ಹೇಳಿದ್ದರು.