ನ್ಯಾಯಾಂಗ ನಿಂದನೆ: ಪ್ರಶಾಂತ್ ಭೂಷಣ್ ವಿಷಾದ ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಕಾರ
ನವದೆಹಲಿ, ಆಗಸ್ಟ್ 10: ಸುಪ್ರೀಂಕೋರ್ಟ್ನ 15 ಮಾಜಿ ಮುಖ್ಯ ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಮಂದಿ ಭ್ರಷ್ಟರು ಎಂಬ ಹೇಳಿಕೆಗೆ ವಕೀಲ ಪ್ರಶಾಂತ್ ಭೂಷಣ್ ಅವರು ವ್ಯಕ್ತಪಡಿಸಿದ ವಿಷಾದದ ಹೇಳಿಕೆಯನ್ನು ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಪ್ರಶಾಂತ್ ಭೂಷಣ್ ಅವರ ಹೇಳಿಕೆಯಲ್ಲಿ ನ್ಯಾಯಾಂಗ ನಿಂದನೆಗೆ ಅರ್ಹವಾಗುವ ಅಂಶಗಳು ಮೇಲ್ನೋಟಕ್ಕೆ ಕಾಣಿಸುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕರಣದ ವಿಚಾರಣೆ ಆಗಸ್ಟ್ 17ರಿಂದ ಆರಂಭವಾಗಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಾಂಗ ನಿಂದನೆ ಅರ್ಜಿಗೆ ವಿಡಂಬನಾತ್ಮಕವಾಗಿ ಕ್ಷಮೆ ಕೋರಿದ ಪ್ರಶಾಂತ್ ಭೂಷಣ್
ತೆಹೆಲ್ಕಾ ನಿಯತಕಾಲಿಕೆಗೆ 2009ರಲ್ಲಿ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ನ್ಯಾಯಾಂಗದ ಕುರಿತು ನೀಡಿದ್ದ ಹೇಳಿಕೆಯ ವಿಚಾರವಾಗಿ ಈ ಪ್ರಕರಣ ನಡೆಯುತ್ತಿದೆ. ಹಿರಿಯ ವಕೀಲ ಹರೀಶ್ ಸಾಳ್ವೆ ನೀಡಿದ್ದ ದೂರಿನ ಅನ್ವಯ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅವಿಧೇಯತೆ ನಡುವೆ ಸಣ್ಣದಾದ ಗೆರೆ ಇದೆ. ಈ ವ್ಯವಸ್ಥೆ ನಿಮಗೆ ಸೇರಿದ್ದು. ಈ ಅಸಂಬದ್ಧ ಪ್ರಲಾಪವನ್ನು ಎದುರಿಸಲು ಬೇರೆ ಯಾವುದಾದರೂ ಮಾರ್ಗ ಇದ್ದರೆ ಸೂಚಿಸಿ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದ್ದರು. ಈ ವಿವರಣೆಯನ್ನು ಒಪ್ಪಿಕೊಳ್ಳಬೇಕೇ ಅಥವಾ ವಿಚಾರಣೆಯನ್ನು ಕೈಬಿಡಬೇಕೇ ಎಂಬ ಕುರಿತು ತನ್ನ ತೀರ್ಪನ್ನು ನ್ಯಾಯಪೀಠ ಮೀಸಲಿರಿಸಿದೆ.