ಮೊಹರಂ ಮೆರವಣಿಗೆ ಮಾಡುವಂತಿಲ್ಲ: ಸುಪ್ರೀಂ ಮಹತ್ವದ ಆದೇಶ
ನವದೆಹಲಿ, ಆಗಸ್ಟ್ 27: ದೇಶದಾದ್ಯಂತ ಮೊಹರಂ ಮೆರವಣಿಗೆ ನಡೆಸಲು ಅವಕಾಶ ನೀಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಮೊಹರಂ ಮೆರವಣಿಗೆಗೆ ಅವಕಾಶ ನೀಡಿದರೆ ಅದು ಗದ್ದಲಗಳಿಗೆ ಕಾರಣವಾಗಬಹುದು ಮತ್ತು ಕೋವಿಡ್ 19ಅನ್ನು ಹರಡಲು ನಿರ್ದಿಷ್ಟ ಸಮುದಾಯವೊಂದು ಕಾರಣ ಎಂಬ ಅಪವಾದಕ್ಕೆ ಗುರಿಯಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದರೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು, ಸಂವಿಧಾನ 32ನೇ ವಿಧಿ ಅಡಿ ಈ ರೀತಿಯ ವರ್ಗಾಧಾರಿತ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಲಕ್ನೋ ಮೂಲದ ಅರ್ಜಿದಾರ, ಶಿಯಾ ಮುಖಂಡ ಸೈಯದ್ ಕಲ್ಬೆ ಜಾವದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, 'ಈ ಸಮುದಾಯದ ಪರವಾಗಿ ಇಡೀ ದೇಶಕ್ಕೆ ಅಸ್ಪಷ್ಟ ನಿರ್ದೇಶನಕ್ಕಾಗಿ ಕೇಳಿಕೊಳ್ಳುತ್ತಿದ್ದೀರಾ?' ಎಂದು ಪ್ರಶ್ನಿಸಿತು. ಈ ಅರ್ಜಿಯನ್ನು ಅವರ ರಾಜ್ಯದ ಅಲಹಾಬಾದ್ ಹೈಕೋರ್ಟ್ನಲ್ಲಿ ಸಲ್ಲಿಸುವಂತೆ ಸೂಚನೆ ನೀಡಿತು.
ಮೊಹರಂ ಆಚರಣೆ ಏಕೆ? ಏನಿದು ಕರ್ಬಲಾದ ಯುದ್ಧ, ಹುಸೇನರ ಬಲಿದಾನ
ಇಡೀ ದೇಶಕ್ಕೆ ಅನ್ವಯವಾಗುವಂತೆ ಇದರಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಈ ಅರ್ಜಿಯಲ್ಲಿ ರಾಜ್ಯ ಸರ್ಕಾರಗಳು ಕೂಡ ಎದುರು ಪಾರ್ಟಿಗಳಾಗಿಲ್ಲ ಎಂದು ಕೋರ್ಟ್ ಹೇಳಿತು. ಮುಂದೆ ಓದಿ.
ಜಗನ್ನಾಥ ರಥಯಾತ್ರೆಗೆ ಕೊಟ್ಟಿದ್ದಿರಲ್ಲ...
ಜಗನ್ನಾಥ ಪುರಿ ರಥ ಯಾತ್ರೆಗೆ ಅವಕಾಶ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಸ್ತಾಪಿಸಿದ ಅರ್ಜಿದಾರರ ಪರ ವಕೀಲರು ಅದರಂತೆಯೇ ಮೊಹರಂ ಮೆರವಣಿಗೆಗೂ ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಈ ಎರಡೂ ಪ್ರಕರಣಗಳು ಸಂಪೂರ್ಣ ವಿಭಿನ್ನ ಎಂದು ಸುಪ್ರೀಂಕೋರ್ಟ್ ಹೇಳಿತು.
ಎರಡೂ ವಿಭಿನ್ನ ಪ್ರಕರಣ
ಜಗನ್ನಾಥ ಪುರಿ ಒಂದು ನಿರ್ದಿಷ್ಟ ಸ್ಥಳ. ಇಲ್ಲಿ ರಥ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುತ್ತದೆ. ಇಂತಹ ವಿಚಾರಗಳಲ್ಲಿ ಒಂದು ನಿರ್ದಿಷ್ಟ ಸ್ಥಳವಾದರೆ ನಾವು ಅಲ್ಲಿ ಉಂಟಾಗಬಹುದಾದ ಅಪಾಯಗಳನ್ನು ಮೌಲ್ಯಮಾಪನ ಮಾಡಿ ಆದೇಶವನ್ನು ಹೊರಡಿಸಬಹುದು. ಆದರೆ ಈ ಪ್ರಕರಣದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಹೇಳಿದರು.
ತಬ್ಲಿಘಿ ಜಮಾತ್; ಭಾರತಕ್ಕೆ 10 ವರ್ಷ ಬರದಂತೆ ನಿರ್ಬಂಧ
ಒಂದು ಸಮುದಾಯದ ವಿರುದ್ಧ ಗುರಿ
ನಾವು ಸಾಮಾನ್ಯವಾದ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಸಾಮಾನ್ಯವಾದ ನಿರ್ದೇಶನಗಳನ್ನು ನೀಡಲು ಆಗುವುದಿಲ್ಲ. ಏಕೆಂದರೆ ಇದು ಗೊಂದಲಗಳನ್ನು ಸೃಷ್ಟಿಸುತ್ತದೆ ಮತ್ತು ಕೋವಿಡ್-19ನ್ನು ಹರಡಿಸಿದ್ದಕ್ಕೆ ಒಂದು ನಿರ್ದಿಷ್ಟ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತದೆ ಎಂದರು.
ಹೈಕೋರ್ಟ್ಗೆ ಹೋಗಬಹುದು
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಸೇರುತ್ತಾರೆ. ಅನೇಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವಂತಹ ಆದೇಶವನ್ನು ನ್ಯಾಯಾಲಯ ನೀಡುವುದಿಲ್ಲ ಎಂದು ನ್ಯಾಯಪೀಠ, ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡು ಲಕ್ನೋದಲ್ಲಿ ಸೀಮಿತ ಪ್ರಾರ್ಥನೆಯೊಂದಿಗೆ ಮೆರವಣಿಗೆ ನಡೆಸಲು ಹೈಕೋರ್ಟ್ಗೆ ಮನವಿ ಸಲ್ಲಿಸಲು ಸ್ವತಂತ್ರರು ಎಂದು ತಿಳಿಸಿತು.