ಹಬ್ಬಕ್ಕಿಂತ ಜೀವ ಮುಖ್ಯ; ಹೈಕೋರ್ಟ್ ಆದೇಶಕ್ಕೆ ಹಸ್ತಕ್ಷೇಪ ಮಾಡಲ್ಲ ಎಂದ ಸುಪ್ರೀಂ
ನವದೆಹಲಿ, ನವೆಂಬರ್ 11: "ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ ಬಹು ಮುಖ್ಯ ಸಂಗತಿ ಹೌದು. ಆದರೆ ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದು ಅದಕ್ಕಿಂತ ಮುಖ್ಯ ಎನಿಸುತ್ತಿದೆ..." ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ರಜಾಕಾಲದ ಪೀಠವು ಹೀಗೆ ಹೇಳಿಕೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ಕೋಲ್ಕತ್ತಾ ಹೈ ಕೋರ್ಟ್ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ಗೌತಮ್ ರಾಯ್ ಹಾಗೂ ಬುರಾಬಜಾರ್ ಫೈರ್ ವರ್ಕರ್ ಡೀಲರ್ಸ್ ಅಸೋಸಿಯೇಷನ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯನ್ನು ಕೈಗೆತ್ತಿಕೊಂಡ ಪೀಠವು, ಈ ವಿಷಯದಲ್ಲಿ ಹೈ ಕೋರ್ಟ್ ನೊಂದಿಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಿರಾಕರಿಸಿದೆ.
ದೆಹಲಿ: ನವೆಂಬರ್ 9ರ ಮಧ್ಯರಾತ್ರಿಯಿಂದ ಎಲ್ಲಾ ರೀತಿಯ ಪಟಾಕಿಗಳಿಗೆ ನಿಷೇಧ
ಮಿತಿ ಮೀರಿ ಜನರಿಗೆ ಕಂಟಕವಾಗಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೋಲ್ಕತ್ತಾ ಹೈ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ಈ ನಡುವೆ ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಜೀವವನ್ನು ಉಳಿಸುವುದೂ ಬಹು ಮುಖ್ಯವಾಗಿದೆ. ಹೀಗಿದ್ದಾಗ ಈ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
"ಹಬ್ಬಗಳು ನಮ್ಮ ದೇಶದಲ್ಲಿ ಬಹುಮುಖ್ಯವಾದವು ಹೌದು. ಆದರೆ ಕೊರೊನಾ ಜೀವನವೇ ಕಷ್ಟಕರವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಹೈಕೋರ್ಟ್ ಗೆ ಸ್ಥಳೀಯ ಪರಿಸ್ಥಿತಿಯ ಕುರಿತು ಹೆಚ್ಚು ಅರಿವಿದೆ. ಹಾಗೇನಾದರೂ ಅವಕಾಶವಿದ್ದಿದ್ದರೆ, ಹೈಕೋರ್ಟ್ ಪಟಾಕಿ ಬಳಕೆಗೆ ಅವಕಾಶ ನೀಡುತ್ತಿತ್ತು. ಈ ಪರಿಸ್ಥಿತಿಯಲ್ಲಿ, ನೀವು, ನಾವು ಎಲ್ಲರೂ ಜೀವವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದೇವೆ. ನಮ್ಮೆಲ್ಲರ ಮನೆಯಲ್ಲೂ ಮಕ್ಕಳು, ಹಿರಿಯರು ಇದ್ದಾರೆ. ಜೀವವೇ ಎಲ್ಲಕ್ಕಿಂತ ಅಮೂಲ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಈ ಆದೇಶ ಹೊರಡಿಸಲಾಗಿದೆ. ಹಿರಿಯ ನಾಗರಿಕರ ಆರೋಗ್ಯದ ಹಿತದೃಷ್ಟಿ ಈ ಆದೇಶದಲ್ಲಿದೆ ಎಂದು ಪೀಠವು ಸಮರ್ಥಿಸಿಕೊಂಡಿತು.
ದೀಪಾವಳಿ ಹಬ್ಬಕ್ಕೆ ಕೋಲ್ಕತ್ತಾ ಹೈಕೋರ್ಟ್ ಪಟಾಕಿ ಬಳಕೆ ಮತ್ತು ಮಾರಾಟಕ್ಕೆ ನಿಷೇಧ ವಿಧಿಸಿದೆ. ದೀಪಾವಳಿ, ಕಾಳಿ ಪೂಜೆ, ಚತ್ ಪೂಜೆಯ ಸಂದರ್ಭದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಅತಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಿಬೇಕೆಂದು ಸೂಚಿಸಿದೆ.