ಶಾಹಿನ್ ಬಾಗ್ ಹೋರಾಟ: ಮಾ.23ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ.26: ಶಾಹಿನ್ ಬಾಗ್ ನಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟಗಾರರನ್ನು ತೆರವುಗೊಳಿಸುವಂತೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್.23ಕ್ಕೆ ಮುಂದೂಡಿದೆ.
Recommended Video
ಬುಧವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಕೆ.ಕೌಲ್ ಮತ್ತು ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠ, ಶಾಹಿನ್ ಬಾಗ್ ವಿಚಾರಣೆಗೂ ಮೊದಲು ದೆಹಲಿಯಲ್ಲಿ ಪರಿಸ್ಥಿತಿಯನ್ನು ಕೊಂಚ ತಿಳಿಗೊಳಿಸಬೇಕಿದೆ ಎಂದು ಹೇಳಿತು.
ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆಯಾದ್ರೆ ಐದು ರಸ್ತೆಗಳಲ್ಲಿ ಸಂಚಾರ ಬಂದ್
ಇದಕ್ಕೂ ಮೊದಲು ಸುಪ್ರೀಂಕೋರ್ಟ್ ನೇಮಿಸಿದ ಮೂವರು ಮಧ್ಯವರ್ತಿಗಳು ಶಾಹಿನ್ ಬಾಗ್ ಪ್ರತಿಭಟನಾಕಾರರ ಜೊತೆ ನಡೆಸಿದ ಸಂಧಾನ ಮಾತುಕತೆ ನಡೆಸಿದರು. ಬಳಿಕ ಅಲ್ಲಿರುವ ಪರಿಸ್ಥಿತಿ ಮತ್ತು ಪೊಲೀಸರು ತೆಗೆದುಕೊಂಡ ಕ್ರಮದ ಬಗ್ಗೆ ಸಂಪೂರ್ಣ ಚಿತ್ರಣವುಳ್ಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಿದ್ದರು.
ಮಧ್ಯವರ್ತಿಗಳ ಸಲ್ಲಿಸಿದ ವರದಿ ಬಗ್ಗೆ ಗೌಪ್ಯತೆ:
ಶಾಹಿನ್ ಬಾಗ್ ಹೋರಾಟಗಾರರ ಜೊತೆಗೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ವಕೀಲ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಹಾಗೂ ಮಾಹಿತಿ ಆಯೋಗದ ಮಾಜಿ ಮುಖ್ಯಸ್ಥ ವಜಾಹತ್ ಹಬೀಬುಲ್ಲಾ ಸಂಧಾನ ಚರ್ಚೆ ನಡೆಸಿ ಪರಿಸ್ಥಿತಿಯ ಕುರಿತು ಮುಚ್ಚಿದ ಲಕೋಟೆಯಲ್ಲಿ ಸಂಪೂರ್ಣ ವರದಿಯನ್ನು ಸುಪ್ರೀಂಕೋರ್ಟ್ ಗೆ ಸೋಮವಾರ ಸಲ್ಲಿಸಿದ್ದರು. ಹೀಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವರದಿ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ ಎಂದು ದ್ವಿಸದಸ್ಯ ಪೀಠವು ತಿಳಿಸಿದೆ. ವರದಿಯಲ್ಲಿ ಇರುವ ಅಂಶಗಳ ಬಗ್ಗೆ ಅರ್ಜಿದಾರರಿಗೆ ಆಗಲಿ, ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಿಗೆ ಆಗಲಿ ಬಿಟ್ಟುಕೊಡುವುದಿಲ್ಲ ಎಂದು ಕೋರ್ಟ್ ತಿಳಿಸಿತ್ತು.
ಕಳೆದ ಡಿಸೆಂಬರ್.15ರಿಂದ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳಿನಿಂದ ಕಲಿಂದಿ ಕುಂಜ್ ಮತ್ತು ಶಾಹಿನ್ ಬಾಗ್ ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯ ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಅಮಿತ್ ಸಹಾನಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಫೆಬ್ರವರಿ.17ರಂದು ಸಂಧಾನ ಮಾತುಕತೆ ನಡೆಸುವುದಕ್ಕಾಗಿ ಮೂವರು ಮಧ್ಯವರ್ತಿಗಳನ್ನು ನೇಮಿಸಿತ್ತು.