ಅಧಿಕಾರಕ್ಕೆ ಬರುತ್ತಿದ್ದಂತೆ ಬಿಎಸ್ವೈಗೆ ಸಂಕಷ್ಟ: ಹಳೆ ಕೇಸ್ ರೀಓಪನ್
Recommended Video
ನವದೆಹಲಿ, ಜುಲೈ 27: ಮುಖ್ಯಮಂತ್ರಿಯಾಗಿ ನಾಲ್ಕನೆಯ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆಯೇ ಬಿಎಸ್ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಹಳೆಯ ಪ್ರಕರಣದ ಕಾನೂನು ಸಮರ ನಡೆಸಿ ಗೆದ್ದ ಖುಷಿಯಲ್ಲಿ ನಿಟ್ಟುಸಿರುಬಿಟ್ಟಿದ್ದ ಅವರು ಮತ್ತೆ ನ್ಯಾಯಾಲಯದ ವಿಚಾರಣೆ ಎದುರಿಸುವಂತಾಗಿದೆ.
ಯಡಿಯೂರಪ್ಪ ಅವರು ಮಾತ್ರವಲ್ಲ, ಮಾಜಿ ಸಚಿವ, ಕಾಂಗ್ರೆಸ್ನ ಡಿ.ಕೆ. ಶಿವಕುಮಾರ್ ಅವರೂ ಹಳೆಯ ಪ್ರಕರಣವೊಂದರಲ್ಲಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬಿಎಸ್ ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ಅವರ ವಿರುದ್ಧದ 9 ವರ್ಷಗಳಷ್ಟು ಹಳೆಯದಾದ ಭ್ರಷ್ಟಾಚಾರ ಪ್ರಕರಣವನ್ನು ಪುನಃ ತೆರೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ. ನಾಲ್ಕು ವರ್ಷಗಳ ಹಿಂದೆಯೇ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿತ್ತು.
ಯಡಿಯೂರಪ್ಪಗೆ ತಾತ್ಕಾಲಿಕ ನೆಮ್ಮದಿ ನೀಡಿದ 5 ಪ್ರಕರಣಗಳು
ಕೆಲವು ವರ್ಷಗಳ ಹಿಂದೆ ಮುಕ್ತಾಯ ಹಾಡಲಾಗಿದ್ದ ಈ ಪ್ರಕರಣವನ್ನು ಮರುವಿಚಾರಣೆಗೆ ಒಳಪಡಿಸುವಂತೆ ಎನ್ಜಿಒ ಸಮಾಜ ಪರಿವರ್ತನಾ ಸಮುದಾಯ ಅರ್ಜಿ ಸಲ್ಲಿಸಿದ್ದು, ಈ ಸಂಸ್ಥೆಯ ಬಾಧ್ಯಸ್ಥಿಕೆ (ಲೋಕಸ್ ಸ್ಟ್ಯಾಂಡಿ) ಕುರಿತು ನಿರ್ಧರಿಸುವುದಾಗಿಯೂ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಹೇಳಿದೆ ಎಂದು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ತಿಳಿಸಿದೆ.
ಯಡಿಯೂರಪ್ಪ ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ , 2015ರ ಡಿಸೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವ ಭ್ರಷ್ಟಾಚಾರ ಪ್ರಕರಣವನ್ನು ಮತ್ತೆ ತೆರೆಯಲು ಅನಗತ್ಯವಾಗಿ ಎನ್ಜಿಓ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಈ ಪ್ರಕರಣವನ್ನು ವಜಾಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಮರು ವಿಚಾರಣೆಗೆ ಕೋರಿ ಮಧ್ಯಪ್ರವೇಶಿಸಿರುವ ಈ ಸಂಸ್ಥೆಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ರೋಹಟಗಿ ವಾದಿಸಿದರು.
ಸಿದ್ದರಾಮಯ್ಯ ಕೊರಳಿಗೆ ಮತ್ತೆ ಸುತ್ತಿಕೊಂಡ ಡಿನೋಟಿಫಿಕೇಶನ್ ಪ್ರಕರಣ
ಇದು ಖಾಸಗಿ ದೂರು. ಹೈಕೋರ್ಟ್ ಇದನ್ನು ರದ್ದುಗೊಳಿಸಿದೆ. ಆದರೆ ನೋಟಿಸ್ ನೀಡದೆಯೂ ವಿಚಾರಣೆಗೆ ಎತ್ತಿಕೊಳ್ಳುವುದು ಸೂಕ್ತವಲ್ಲ ಎಂದು ಅಭಿಷೇಕ್ ಮನು ಸಿಂಘ್ವಿ ಪ್ರತಿಪಾದಿಸಿದರು.
ಎರಡು ವಾರಗಳ ಬಳಿಕ ವಿಚಾರಣೆ
ಸಮಾಜ ಪರಿವರ್ತನಾ ಸಮುದಾಯವನ್ನು ಪ್ರತಿನಿಧಿಸುತ್ತಿರುವ ವಕೀಲ ಪ್ರಶಾಂತ್ ಭೂಷಣ್ ಅವರು, ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆಗ ನ್ಯಾಯಪೀಠ, ತಾನು ಯಾವುದೇ ಹೆಸರು ಅಥವಾ ವ್ಯಕ್ತಿಯಿಂದ ಪ್ರಭಾವಕ್ಕೆ ಒಳಗಾಗುವುದಿಲ್ಲ. ಪ್ರಕರಣದಲ್ಲಿ ಮಹತ್ವದ ಅಂಶಗಳು ಇರುವುದರಿಂದ ಮರುವಿಚಾರಣೆಗೆ ಒಳಪಡಿಸಬಹುದೇ ಎಂಬ ಅಂಶಗಳನ್ನು ಅವಲೋಕಿಸಿ ಎರಡು ವಾರಗಳ ಬಳಿಕ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ತಿಳಿಸಿತು.
ಏನಿದು ಡಿನೋಟಿಫಿಕೇಷನ್ ಪ್ರಕರಣ?
ಕರ್ನಾಟಕ (ವರ್ಗಾವಣೆ ನಿರ್ಬಂಧ ಕಾಯ್ದೆ) ಭೂ ಕಾಯ್ದೆಗೆ ವಿರುದ್ಧವಾಗಿ 4.20 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಈ ಅರ್ಜಿ ಸಂಬಂಧಿಸಿದೆ. 1962ರಲ್ಲಿ ಬಿ.ಕೆ. ಶ್ರೀನಿವಾಸನ್ ಎಂಬುವವರು ಬೆನ್ನಿಗಾನಹಳ್ಳಿಯಲ್ಲಿ ಖರೀದಿಸಿದ್ದ 5.11 ಎಕರೆ ಭೂಮಿಯಲ್ಲಿ 4.20 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಪರಿವರ್ತಿಸಲಾಗಿತ್ತು. 1986ರಲ್ಲಿ ಈ ಭೂಮಿಯನ್ನು ಬಡಾವಣೆ ನಿರ್ಮಿಸುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಯ್ದೆಯಡಿ ಸ್ವಾಧೀನಪಡಿಸಿಕೊಳ್ಳಲು ನೋಟಿಫೈ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಯಡಿಯೂರಪ್ಪಗೆ ರಿಲೀಫ್, 5 ಕೇಸು ವಜಾಗೊಳಿಸಿದ ಸುಪ್ರೀಂಕೋರ್ಟ್
ಜಮೀನು ಖರೀದಿಸಿದ್ದ ಡಿಕೆಶಿ
ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರು ಈ ಜಮೀನು ಡಿನೋಟಿಫೈ ಆಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ 2003ರ ಡಿಸೆಂಬರ್ 18ರಂದು ಶ್ರೀನಿವಾಸನ್ ಅವರಿಗೆ 1.62 ಕೋಟಿ ರೂ. ನೀಡಿ ಜಮೀನು ಖರೀದಿಸಿದ್ದರು. ಇದು ಕರ್ನಾಟಕ ಭೂ ಪರಿವರ್ತನೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 3ರ ಉಲ್ಲಂಘನೆಯಾಗಿದೆ. ಸ್ವಾಧೀನಕ್ಕಾಗಿ ನೋಟಿಫೈ ಮಾಡಲಾದ ಭೂಮಿಯ ಮಾರಾಟವನ್ನು ಈ ಕಾಯ್ದೆ ಅಡಿಯಲ್ಲಿ ನಿರ್ಬಂಧಿಸಲಾಗಿದೆ.
ಪ್ರಕರಣ ರದ್ದುಗೊಳಿಸಿದ್ದ ಹೈಕೋರ್ಟ್
ಡಿಕೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಸೇರಿ ಅಕ್ರಮವಾಗಿ ಈ ಭೂಮಿಯನ್ನು ನಿವಾಸಯೋಗ್ಯ ಉದ್ದೇಶಕ್ಕೆ ಪರಿವರ್ತಿಸಿದ್ದರು. ಬಳಿಕ ಅವರು ಶಾಸಕರಾಗಿ ಮತ್ತು ಕಾಂಗ್ರೆಸ್ ಮುಖಂಡರಾಗಿ ತಮ್ಮ ಅಧಿಕಾರವನ್ನು ಬಳಸಿಕೊಂಡು 2010ರ ಮೇ 13ರಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೂಲಕ ಜಮೀನಿನ ಸ್ವಾಧೀನವನ್ನು ಹಿಂದಕ್ಕೆ ಪಡೆದುಕೊಂಡು ಡಿನೋಟಿಫೈ ಮಾಡಿಸಿದ್ದರು ಎಂದು ಆರೋಪಿಸಲಾಗಿತ್ತು.
2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು 29 ಕೋಟಿ ರೂ. ಮೌಲ್ಯದ ಭೂಮಿಯನ್ನು ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶಕ್ಕೆ ಡಿನೋಟಿಫೈ ಮಾಡಿದ್ದರು. ಈ ಡಿನೋಟಿಫಿಕೇಷನ್ ಅಕ್ರಮವಾಗಿದೆ ಎಂದು ಮಹಾ ಲೇಖಪಾಲರ (ಸಿಎಜಿ) ವರದಿ ಹೇಳಿದ್ದರಿಂದ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ, ಹೈಕೋರ್ಟ್ 2015ರಲ್ಲಿ ಎಫ್ಐಆರ್ ರದ್ದುಗೊಳಿಸಿ ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಿತ್ತು.
ಕಾನೂನಿನ ದುರ್ಬಳಕೆ ಸಾಧ್ಯತೆ
ಈ ಆದೇಶ ಪ್ರಶ್ನಿಸಿ ರಾಮನಗರದ ಸಾಮಾಜಿಕ ಕಾರ್ಯಕರ್ತ ಕಬ್ಬಾಳೆಗೌಡ ಎಂಬುವವರು ವಿಶೇಷ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಅರ್ಜಿಯನ್ನು ಹಿಂದಕ್ಕೆ ಪಡೆದ ಕಾರಣ ಫೆಬ್ರವರಿ 21ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಮೂಲ ಅರ್ಜಿದಾರರು ಆರೋಪಿಗಳೊಂದಿಗೆ ರಾಜಿ ಮಾಡಿಕೊಂಡು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಹಾಗೆಯೇ ಆರೋಪಿಗಳು ಕಾನೂನಿನ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಇಲ್ಲಿ ರಾಜಿ ನಡೆದಿದ್ದರೂ ದೂರು ಹಾಗೆಯೇ ಇದೆ. ಹೀಗಾಗಿ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸಬೇಕು ಎಂದು ಮೇ ತಿಂಗಳಿನಲ್ಲಿ ಎಸ್.ಆರ್. ಹಿರೇಮಠ್ ಅವರ ನೇತೃತ್ವದ ಸಂಸ್ಥೆ ಅರ್ಜಿ ಸಲ್ಲಿಸಿತ್ತು.