ನ್ಯಾ. ರಂಜನ್ ಗೊಗೊಯ್ ಪ್ರಕರಣದಲ್ಲಿ ಹೊರಬಂದ ಅನಿಲ್ ಅಂಬಾನಿ ಹುಳುಕು
ನವದೆಹಲಿ, ಏಪ್ರಿಲ್ 27 : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳದ ಪ್ರಕರಣದ ವಿಚಾರಣೆಯಲ್ಲಿ, ಉದ್ಯಮಿ ಅನಿಲ್ ಅಂಬಾನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರು ಗೋಲ್ ಮಾಲ್ ಮಾಡಿರುವುದು ಮತ್ತೆ ಬೆಳಕಿಗೆ ಬಂದಿದೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದೇಶಿಸಿದ್ದರು. ಆದರೆ, ಇದೀಗ ಅಮಾನತಾಗಿರುವ ಇಬ್ಬರು ಮಾಡಿದ ಗೋಲ್ ಮಾಲ್ ನಿಂದಾಗಿ, ಅನಿಲ್ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಬಿಂಬಿಸಲಾಗಿತ್ತು.
ಇಂಥ ನ್ಯಾಯಾಂಗ ದ್ರೋಹದ ಕೆಲಸ ಮಾಡಿ ವಜಾ ಆಗಿರುವ ಇಬ್ಬರ ಹೆಸರನ್ನು, ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಉದ್ದೇಶಪೂರ್ವಕವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅಫಿಡವಿಟ್ ನಲ್ಲಿ ನಮೂದಿಸಲಾಗಿದೆ. ಈ ಅಫಿಡವಿಟ್ ಸಲ್ಲಿಸಿದವರು ಚಂಡೀಗಢದ ವಕೀಲ ಉತ್ಸವ್ ಸಿಂಗ್ ಬೇನ್ಸ್.
ಸಿಜೆಐ ವಿರುದ್ಧದ ಪ್ರಕರಣ: ಮಹಿಳೆಗೆ ನೋಟಿಸ್, ಏ. 26ಕ್ಕೆ ವಿಚಾರಣೆ
ಇದೀಗ ಮುಖ್ಯ ನ್ಯಾಯಮೂರ್ತಿಯ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಷಡ್ಯಂತ್ರ ರಚಿಸಿದ ಆರೋಪ ಹೊತ್ತವರು ಕೋರ್ಟ್ ಮಾಸ್ಟರ್ ಆಗಿದ್ದ ತಪನ್ ಚಕ್ರವರ್ತಿ ಮತ್ತು ಸಹಾಯಕ ರಿಜಿಸ್ಟ್ರಾರ್ ಆಗಿದ್ದ ಮಾನವ್ ಶರ್ಮಾ. ಇವರಿಬ್ಬರನ್ನು ವಜಾ ಮಾಡಿದ್ದಲ್ಲದೆ, ಕೋರ್ಟಿನ ದಾರಿ ತಪ್ಪಿಸಿದ್ದಕ್ಕಾಗಿ ಬಂಧಿಸಲಾಗಿದೆ.
ನ್ಯಾಯಾಂಗದ ದಾರಿ ತಪ್ಪಿಸಿದ್ದ ದ್ವಯರು
ಸ್ವೀಡನ್ನಿನ ಟೆಲಿಕಾಂ ಕಂಪನಿ ಎರಿಕ್ಸನ್ ಗೆ 550 ಕೋಟಿ ರುಪಾಯಿ ನೀಡಲು ಅನಿಲ್ ಅಂಬಾನಿ ಮಾಲಿಕತ್ವದ ಆರ್ಕಾಂ ಕಂಪನಿ ವಿಫಲವಾಗಿದ್ದ ಕೇಸಿಗೆ ಸಂಬಂಧಿಸಿದಂತೆ, ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಅನಿಲ್ ಅಂಬಾನಿ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಮತ್ತು ನ್ಯಾ. ವಿನೀತ್ ಸರನ್ ಅವರು ಆದೇಶಿಸಿದ್ದರು. ಆದರೆ, ಖುದ್ದಾಗಿ ಹಾಜರಾಗಲು ವಿನಾಯಿತಿ ನೀಡಬೇಕೆಂದು ಅಂಬಾನಿ ಕೋರಿದ್ದರು. ಇದನ್ನು ವಿಭಾಗೀಯ ಪೀಠ ತಿರಸ್ಕರಿಸಿತ್ತು. ಆಗ, ಮೇಲಿನಿಬ್ಬರು ಆರೋಪಿಗಳಾದ ತಪನ್ ಮತ್ತು ಮಾನವ್, ಖುದ್ದು ಹಾಜರಾಗಲು ವಿನಾಯಿತಿ ನೀಡಲಾಗಿದೆ ಎಂಬ ಆದೇಶವನ್ನು ವೆಬ್ ಸೈಟಿನಲ್ಲಿ ಅಪ್ಲೋಡ್ ಮಾಡಿಬಿಟ್ಟಿದ್ದರು. ಈ ಪ್ರಕರಣದಲ್ಲಿ 550 ಕೋಟಿ ರುಪಾಯಿ ನೀಡುವುದಾಗಿ ಅಂಬಾನಿ ಅವರು ವೈಯಕ್ತಿಕ ಗ್ಯಾರಂಟಿ ನೀಡಿದ್ದರು.
ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ
ಇಬ್ಬರನ್ನೂ ವಜಾ ಮಾಡಿದ್ದ ಗೊಗೊಯ್
ಸರ್ವೋಚ್ಚ ನ್ಯಾಯಾಲಯಕ್ಕೆ ಮೋಸ ಮಾಡಿದ್ದಲ್ಲದೆ, ದಾಖಲೆಯನ್ನು ಫೋರ್ಜ್ ಮಾಡಲಾಗಿದೆ ಎಂದು ಆರೋಪಿಸಿ, ಕಳೆದ ಫೆಬ್ರವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಪನ್ ಚಕ್ರವರ್ತಿ ಮತ್ತು ಮಾನವ್ ಶರ್ಮಾ ಅವರನ್ನು ಕೆಲಸದಿಂದ ವಜಾ ಮಾಡಿದ್ದರು. ಈ ಮೋಸವನ್ನು ಎರಿಕ್ಸನ್ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರೊಬ್ಬರು ಕೋರ್ಟಿನ ಗಮನಕ್ಕೆ ತಂದಿದ್ದರು. ನಂತರ, ಅನಿಲ್ ಅಂಬಾನಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗಿಲ್ಲ ಎಂದು ತಿದ್ದುಪಡಿ ಮಾಡಿದ ಆದೇಶವನ್ನು ಮೂರು ದಿನಗಳ ನಂತರ ಹೊರಡಿಸಲಾಗಿತ್ತು.
Big Breaking: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ
ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ
ನ್ಯಾಯಮೂರ್ತಿ ನಾರಿಮನ್ ಅವರು ಮುಕ್ತ ನ್ಯಾಯಾಲಯದಲ್ಲಿಯೇ ತಪನ್ ಚಕ್ರವರ್ತಿ ಮತ್ತು ಮಾನವ್ ಶರ್ಮಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆಸಲಾಗಿ, ಶಾರ್ಟ್ ಹ್ಯಾಂಡ್ ನಲ್ಲಿ ಬರೆದುಕೊಳ್ಳಲಾಗಿದ್ದ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ತಿರುಚಿ ಟೈಪ್ ಮಾಡಲಾಗಿತ್ತು ಎಂಬುದು ಸಾಬೀತಾಗಿತ್ತು. ಮತ್ತು ಇದನ್ನು ಕಣ್ತಪ್ಪಿನಿಂದ ಮಾಡಿಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂಬುದು ತಿಳಿದುಬಂದಿತ್ತು. ಅನಿಲ್ ಅಂಬಾನಿ ಅವರನ್ನು ಪಾರು ಮಾಡುವ ಉದ್ದೇಶದಿಂದಲೇ ನ್ಯಾಯಾಲಯಕ್ಕೆ ಕಳಂಕ ತರುವಂಥ ಕೆಲಸವನ್ನು ಅವರಿಬ್ಬರು ಮಾಡಿದ್ದರು.
ಇದು ಬಹುದೊಡ್ಡ ಪಿತೂರಿ: ಆರೋಪಕ್ಕೆ ರಂಜನ್ ಗೊಗೊಯ್ ಪ್ರತಿಕ್ರಿಯೆ
ನಾಪತ್ತೆಯಾಗಿದ್ದ ತಪನ್ ಚಕ್ರವರ್ತಿ
ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 466, 467, 468, 218, 219, 471 ಮತ್ತು 120B ಅಡಿಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ತಪನ್ ಮತ್ತು ಮಾನವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಒಂದು ತಿಂಗಳ ಕಾಲ ಐವರಿದ್ದ ತಂಡದಿಂದ ತನಿಖೆ ನಡೆಸಲಾಗಿತ್ತು. ಆರೋಪ ಸಾಬೀತಾಗುತ್ತಿದ್ದಂತೆ ತಪನ್ ಚಕ್ರವರ್ತಿ ನಾಪತ್ತೆಯಾಗಿದ್ದ. ನಂತರ ಆತನ ಮೊಬೈಲ್ ಜಾಡನ್ನು ಹಿಡಿದು ಬಂಧಿಸಲಾಗಿತ್ತು. ಏಪ್ರಿಲ್ 8ರಂದು ಅವರಿಬ್ಬರನ್ನು ಬಂಧಿಸಲಾಯಿತು. ಅವರಿಬ್ಬರನ್ನು ಪಟಿಯಾಲಾ ಕೋರ್ಟಿಗೆ ಸೋಮವಾರ ಏಪ್ರಿಲ್ 29ರಂದು ಹಾಜರುಪಡಿಸಲಾಗುತ್ತಿದೆ.
ರಂಜನ್ ಗೊಗೊಯ್ ವಿರುದ್ಧ ತನಿಖೆ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮನ್ನು ಲೈಂಗಿಕವಾಗಿ ದುರ್ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ನಂತರ, ಮೂವರು ನ್ಯಾಯಮೂರ್ತಿಗಳಿರುವ ಸಮಿತಿಯನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಆ ಮಹಿಳೆ ಈಗಾಗಲೆ ತನ್ನ ಹೇಳಿಕೆಯನ್ನು ನೀಡಿದ್ದಾಳೆ. ಆದರೆ, ನ್ಯಾಯಾಂಗಕ್ಕೆ ಕಳಂಕ ತರುವ ಉದ್ದೇಶದಿಂದಲೇ ಷಡ್ಯಂತ್ರ ರಚಿಸಿ ನ್ಯಾ. ರಂಜನ್ ಗೊಗೊಯ್ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಚಂಡೀಗಢದ ವಕೀಲರು ಅಫಿಡವಿಟ್ ಸಲ್ಲಿಸಿದ್ದಾರೆ. ಇದೇ ಅಫಿಡವಿಟ್ ನಲ್ಲಿ ತಪನ್ ಮತ್ತು ಮಾವನ್ ಸೇರಿದಂತೆ ಇನ್ನೂ ಹಲವರ ಹೆಸರನ್ನು ಕೂಡ ನಮೂದಿಸಲಾಗಿದೆ.