ಜಗತ್ತಿಗೆ ಮಾಲಿನ್ಯದ ಕುರಿತು ದೆಹಲಿ ರವಾನಿಸುತ್ತಿರುವ ಸಂದೇಶದ ಅರಿವಿದೆಯೇ: ಸುಪ್ರೀಂಕೋರ್ಟ್
ನವದೆಹಲಿ, ನವೆಂಬರ್ 24: ರಾಷ್ಟ್ರ ರಾಜಧಾನಿಯಲ್ಲಿನ ವಾಯು ಗುಣಮಟ್ಟದ ಬಿಕ್ಕಟ್ಟಿನ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕಿದೆ. "ತಾತ್ಕಾಲಿಕ ಕ್ರಮಗಳು" ಈ ಸಮಸ್ಯೆಯನ್ನು ಬಗೆಹರಿಸಲಾರವು ಎಂದು ಬುಧವಾರ ಸುಪ್ರೀಂಕೋರ್ಟ್ ಹೇಳಿದೆ.
'ದೆಹಲಿಯಲ್ಲಿ ಈಗ ವಾಯು ಮಾಲಿನ್ಯದ ಮಟ್ಟ ಕಡಿಮೆಯಾದರೂ, ನಾವು ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸುತ್ತೇವೆ ಮತ್ತು ನಿರ್ದೇಶನಗಳನ್ನು ನೀಡುತ್ತೇವೆ' ಎಂದು ನ್ಯಾಯಾಲಯ ನೀಡಿದ ಕಠಿಣ ಎಚ್ಚರಿಕೆಯಲ್ಲಿ ಒತ್ತಿ ಹೇಳಿದೆ. ಬೆಳೆಯ ನಂತರದಲ್ಲಿ ಕಸವನ್ನು ಸುಡುವ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು "ಸೂಕ್ಷ್ಮ ನಿರ್ವಹಣೆ ಮಾಡಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದು, ಸರ್ಕಾರವೇ ದಂಡವನ್ನು ನಿರ್ಧರಿಸಬೇಕು ಎಂದು ಸೂಚಿಸಿದೆ.
ದೆಹಲಿಯಲ್ಲಿ 22 ದಿನಗಳ ನಂತರ ಗಾಳಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ
ಮೂರು ವಾರಗಳಿಂದಲೂ ದೆಹಲಿ ಮತ್ತು ಅಕ್ಕಪಕ್ಕದ ನಗರಗಳಲ್ಲಿ ವಿಷಕಾರಿ ಅನಿಲವು ಆವರಿಸಿಕೊಂಡಿದೆ. "ಇದು ರಾಷ್ಟ್ರ ರಾಜಧಾನಿ. ನಾವು ಜಗತ್ತಿಗೆ ಎಂಥಾ ಸಂದೇಶವನ್ನು ಕಳುಹಿಸುತ್ತಿದ್ದೇವೆ ನೋಡಿ. ನೀವು ಅಂಕಿಅಂಶಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ಊಹಿಸಬೇಕು. ಪರಿಸ್ಥಿತಿಯು ತೀವ್ರಗೊಳ್ಳದಂತೆ ಪೂರ್ವಭಾವಿಯಾಗಿ ಕ್ರಮ ತೆಗೆದುಕೊಳ್ಳಬೇಕು," ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ನಿಷೇಧದ ನಡುವೆಯೂ ಪಟಾಕಿ ಹೊಡೆದ ಪರಿಣಾಮ
"ಈಗ ಸೂಪರ್ ಕಂಪ್ಯೂಟರ್ಗಳಿವೆ... ಅಂಕಿಅಂಶಗಳ ಮಾದರಿಯನ್ನು ನೀವು ಹೊಂದಿರಬೇಕು" ಎಂದು ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿತು. ಇದರ ಮಧ್ಯೆ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಬುಧವಾರ ಬೆಳಿಗ್ಗೆ "ಅತ್ಯಂತ ಕಳಪೆ" ವಿಭಾಗದಲ್ಲಿತ್ತು. ಪಟಾಕಿಗಳ ಮೇಲಿನ ನಿಷೇಧವನ್ನು ವ್ಯಾಪಕವಾಗಿ ಉಲ್ಲಂಘಿಸಿದ ಕಾರಣದಿಂದಾಗಿ ಈ ತಿಂಗಳ ಆರಂಭದಲ್ಲಿ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿತ್ತು.
ಒಂದು ವಾರದಲ್ಲಿ ಕ್ರಮಗಳ ಕುರಿತು ವರದಿ ಸಲ್ಲಿಸಲು ಸೂಚನೆ
ಕಳೆದ ವಿಚಾರಣೆ ವೇಳೆ ವಾಯು ಮಾಲಿನ್ಯವು ಹೇಗೆ ವಾರ್ಷಿಕ ಸಮಸ್ಯೆಯಾಗಿದೆ ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿ ತೋರಿಸಿತ್ತು. ರಾಷ್ಟ್ರೀಯ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಎಷ್ಟಿದ್ದರೆ ಉತ್ತಮ ಎಂಬುದನ್ನು ವ್ಯಾಖ್ಯಾನಿಸಬೇಕು ಎಂದು ನ್ಯಾಯಾಲಯ ಬುಧವಾರ ಹೇಳಿದೆ. "ಗಾಳಿಯ ಗುಣಮಟ್ಟ ಆಯೋಗವು ಗಾಳಿಯ ದಿಕ್ಕನ್ನು ಆಧರಿಸಿ ವೈಜ್ಞಾನಿಕ ಅಧ್ಯಯನವನ್ನು ನಡೆಸಬೇಕು. ಈ ತಾತ್ಕಾಲಿಕ ಕ್ರಮಗಳು ಸಮಸ್ಯೆ ಬಗೆಹರಿಸುವುದಕ್ಕೆ ಸಹಾಯ ಮಾಡುವುದಿಲ್ಲ. ನೀವು ತೆಗೆದುಕೊಳ್ಳುವ ಕ್ರಮಗಳೇನು ಮತ್ತು ಮುಂದಿನ ಏಳು ದಿನಗಳಲ್ಲಿ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ನಮಗೆ ತಿಳಿಸಬೇಕು," ಎಂದು ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್ ಎದುರು ಸರ್ಕಾರದ ವಾದ ಮಂಡನೆ
"ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ತುರ್ತು ಕ್ರಮಗಳನ್ನು ಪಟ್ಟಿ ಮಾಡಿದ್ದೇವೆ. ದೀರ್ಘಾವಧಿಯ ಯೋಜನೆಗಳೂ ಇವೆ. ನಾವು ಶ್ರೇಣೀಕೃತ ಕ್ರಮಗಳೊಂದಿಗೆ ಬಂದಿದ್ದೇವೆ," ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರಿಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿಕಾಸ್ ಸಿಂಗ್, 'ಒಣ ಹುಲ್ಲು ಸುಡುವ ವಿಚಾರವನ್ನು ಗಮನಹರಿಸಬೇಕು. ರೈತರಿಗೆ ಪರಿಹಾರ ನೀಡಿದರೆ ಕೃಷಿಕರು ಕಸಕ್ಕೆ ಬೆಂಕಿ ಹಚ್ಚುವುದನ್ನು ನಿಯಂತ್ರಿಸಬಹುದು' ಎಂದರು.
ಸರ್ಕಾರಕ್ಕೆ ಮರುಪ್ರಶ್ನೆ ಹಾಕಿದ ಸುಪ್ರೀಂಕೋರ್ಟ್
"ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಎಷ್ಟು ಕೊಳೆ ತೆಗೆಯಲಾಗಿದೆ ಎಂಬುದರ ಕುರಿತು ಯಾವುದಾದರೂ ಅಧ್ಯಯನ ನಡೆದಿದೆಯೇ? ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸರ್ಕಾರದ ಉತ್ತರಕ್ಕೆ ಮರು ಪ್ರಶ್ನೆ ಹಾಕಿದ ಸುಪ್ರೀಂಕೋರ್ಟ್, "ನೀವು ಹುಲ್ಲು ಸುಡುವ ಸಮಸ್ಯೆಯನ್ನು ಹೇಗೆ ನಿಭಾಯಿಸಲಿದ್ದೀರಿ? ನಾವು ಈ ಸಮಸ್ಯೆ ಬಗ್ಗೆ ಚರ್ಚಿಸಲು ನಮ್ಮ ಸಾಮಾನ್ಯ ಜ್ಞಾನವನ್ನು ಬಳಸುತ್ತಿದ್ದೇವೆ. ಅಧಿಕಾರಶಾಹಿಯು ಏನು ಮಾಡುತ್ತಿದೆ? ಕಾರ್ಯದರ್ಶಿಗಳು ಏನಾದರೂ ನಿರ್ಧರಿಸಲಿ. ಅವರು ಹೊಲಗಳಿಗೆ ಹೋಗಿ ರೈತರು, ತಜ್ಞರೊಂದಿಗೆ ಮಾತನಾಡಿ ಶಾಶ್ವತ ಪರಿಹಾರವನ್ನು ಏಕೆ ರೂಪಿಸಬಾರದು?," ಎಂದು ಕೇಳಿದೆ.
ದೆಹಲಿ ವಾಯುಮಾಲಿನ್ಯ ಸಮಸ್ಯೆಯ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಇದು ಸತತ ಮೂರನೇ ವಾರದ ವಿಚಾರಣೆ ಆಗಿದೆ. ಈ ವಿಷಯದ ಬಗ್ಗೆ ಕೋರ್ಟ್ ಕಾಲಹರಣ ಮಾಡುತ್ತಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿದೆ.