ನ್ಯಾಯಾಂಗ ನಿಂದನೆ: ಆಗಸ್ಟ್.20ರಂದು ವಕೀಲ ಪ್ರಶಾಂತ್ ಭೂಷಣ್ ರಿಗೆ ಶಿಕ್ಷೆ
ನವದೆಹಲಿ, ಆಗಸ್ಟ್.14: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ರನ್ನು ಸುಪ್ರೀಂಕೋರ್ಟ್ ಅಪರಾಧಿ ಎಂದು ಪರಿಗಣಿಸಿದೆ. ಆಗಸ್ಟ್.20ರಂದು ಶಿಕ್ಷೆಯ ಬಗ್ಗೆ ತೀರ್ಪು ನೀಡುವುದಾಗಿ ಕೋರ್ಟ್ ತಿಳಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನಾಲ್ವರು ಪೂರ್ವಾಧಿಕಾರಿಗಳ ವಿರುದ್ಧ ವಕೀಲ ಪ್ರಶಾಂತ್ ಭೂಷಣ್ ನಿಂದನೆ ಮಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವಂತೆ ನ್ಯಾಯಾಂಗವು ಏನನ್ನೂ ಮಾಡಿಲ್ಲ ಎಂದು ದೂಷಿಸಿದ್ದರು.
ನ್ಯಾಯಾಂಗ ನಿಂದನೆ: ಪ್ರಶಾಂತ್ ಭೂಷಣ್ ವಿಷಾದ ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಕಾರ
ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಮಹಾರಾಷ್ಟ್ರದ ನಾಗಪುರದಲ್ಲಿದ್ದರು. ಅಂದು ಹರ್ಲೆ ಡೇವಿಡ್ ಸನ್ ಬೈಕ್ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಖತ್ ಸುದ್ದಿಯಾಗಿತ್ತು.
ನ್ಯಾ.ಎಸ್.ಎ. ಬೊಬ್ಡೆ ನಡೆಗೆ ಪ್ರಶಾಂತ್ ಭೂಷಣ್ ವಿರೋಧ:
ಭಾರತ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಹರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಕುಳಿತು ಫೋಟೋ ತೆಗೆಸಿಕೊಂಡ ನ್ಯಾ.ಎಸ್.ಎ. ಬೊಬ್ಡೆ ವಿರುದ್ಧ ವಕೀಲ ಪ್ರಶಾಂತ್ ಭೂಷಣ್ ಟ್ವಿಟರ್ ನಲ್ಲಿ ಟೀಕಿಸಿದ್ದರು. ಬೈಕ್ ಮೇಲೆ ಕುಳಿತ ನ್ಯಾ. ಎಸ್.ಎ. ಬೊಬ್ಡೆಯವರು ತಲೆಗೆ ಹೆಲ್ಮೆಟ್ ಹಾಕಿಲ್ಲ. ಅಲ್ಲದೇ ಲಾಕ್ ಡೌನ್ ನಿಂದಾಗಿ ಸುಪ್ರೀಂಕೋರ್ಟ್ ಬಾಗಿಲು ಹಾಕಿಕೊಂಡು ಬೈಕ್ ಮೇಲೆ ಸುತ್ತಾಡುತ್ತಿದ್ದಾರೆ ಎಂದೆಲ್ಲ ಟ್ವೀಟ್ ಮಾಡಿದ್ದರು.
ವಕೀಲ ಪ್ರಶಾಂತ್ ಭೂಷಣ್ ರಿಗೆ ನೋಟಿಸ್:
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾಡಿರುವ ಟ್ವೀಟ್ ನಿಂದಾಗಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ನೋಟಿಸ್ ಜಾರಿಗೊಳಿಸಲಾಗಿತ್ತು. ಈ ನೋಟಿಸ್ ಗೆ ಉತ್ತರ ನೀಡಿದ ವಕೀಲರು, ಸಿಜೆಐ ಅವರು ತಲೆಗೆ ಹೆಲ್ಮೆಟ್ ಧರಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಏಕೆಂದರೆ ಅಂದು ಅವರು ಕುಳಿತ ಬೈಕಿನ ಸ್ಟ್ಯಾಂಡ್ ಹಾಕಲಾಗಿದ್ದು, ಆಗ ಹೆಲ್ಮೆಟ್ ಧರಿಸುವ ಅಗತ್ಯ ಇರಲಿಲ್ಲ. ಆದರೆ, ಟ್ವೀಟ್ ನ ಉಳಿದ ಭಾಗಕ್ಕೆ ನಾನೀಗಲೂ ಬದ್ಧನಾಗಿದ್ದೇನೆ. ಆ ಟ್ವೀಟ್ ನ ಅಂಶಗಳನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿದ್ದಾರೆ.