ನ್ಯಾಯಾಂಗ ನಿಂದನೆ ಪ್ರಕರಣ: ಶಿಕ್ಷಣ ಸಚಿವರಿಗೆ ನಿರಾಳತೆ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ಅಕ್ಟೋಬರ್ 26: ಸರ್ಕಾರಿ ಬಂಗಲೆಯ ಬಾಡಿಗೆ ಪಾವತಿಸದೆ ಅಲ್ಲಿ ವಾಸಿಸುತ್ತಿದ್ದ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ವಿರುದ್ಧದ ನ್ಯಾಯಾಂಗ ನಿಂದನೆ ಕ್ರಮವನ್ನು ಸುಪ್ರೀಂಕೋರ್ಟ್ ಸೋಮವಾರ ತಡೆಹಿಡಿದಿದೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಯಾಗಿರುವ ಪೋಖ್ರಿಯಾಲ್, ಕಳೆದ ವರ್ಷ ಹೈಕೋರ್ಟ್ ಆದೇಶ ನೀಡುವವರೆಗೂ ಜೀವಮಾನ ಅವಧಿ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರು.
ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸದೆ ಅಲ್ಲಿಯೇ ವಾಸವಿರುವ ಮಾಜಿ ಮುಖ್ಯಮಂತ್ರಿಗಳು ಮಾರುಕಟ್ಟೆ ದರದಲ್ಲಿ ಬಾಡಿಗೆ ಪಾವತಿಸಬೇಕು ಎಂಬ ಉತ್ತರಾಖಂಡ ಹೈಕೋರ್ಟ್ ಆದೇಶವನ್ನು ಪ್ರಸ್ತುತ ಶಿಕ್ಷಣ ಸಚಿವರಾಗಿರುವ ಪೋಖ್ರಿಯಾಲ್ ಪ್ರಶ್ನಿಸಿದ್ದರು.
ನ್ಯಾಯಮೂರ್ತಿ ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠವು ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಜೀವಮಾನವಿಡೀ ಉಚಿತ ಮನೆ ಹಾಗೂ ಇತರೆ ಸವಲತ್ತುಗಳನ್ನು ನೀಡುವ ಉತ್ತರಾಖಂಡ ಸರ್ಕಾರದ ಆದೇಶವು ಅಕ್ರಮ ಹಾಗೂ ಸಂವಿಧಾನವಿರೋಧಿ ಎಂದು ಕಳೆದ ವರ್ಷ ಉತ್ತರಾಖಂಡ ಹೈಕೋರ್ಟ್ ಹೇಳಿತ್ತು.
ರಮೇಶ್ ಪೋಖ್ರಿಯಾಲ್ ಮತ್ತು ಇತರೆ ಮಾಜಿ ಮುಖ್ಯಮಂತ್ರಿಗಳು ಆರು ತಿಂಗಳ ಒಳಗೆ ಮಾರುಕಟ್ಟೆ ದರದಲ್ಲಿ 2.8 ಕೋಟಿ ರೂ ಬಾಡಿಗೆ ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಇದರ ಜತೆಗೆ ನೀರು, ವಿದ್ಯುತ್, ಫೋನ್ ಬಿಲ್ಗಳು, ಪ್ರವಾಸದ ವೆಚ್ಚ, ಇಂಧನ ವೆಚ್ಚ ಹಾಗೂ ಸಿಬ್ಬಂದಿಯ ಸಂಬಳ ಸೇರಿದಂತೆ 13 ಕೋಟಿ ರೂ ವಿವಿಧ ವೆಚ್ಚಗಳನ್ನು ಸಹ ಪಾವತಿ ಮಾಡುವಂತೆ ಆದೇಶಿಸಿತ್ತು.
ತಾವು ಪಾವತಿಸುವ ಸ್ಥಿತಿಯಲ್ಲಿ ಇಲ್ಲವಾಗಿರುವುದರಿಂದ ಬಾಡಿಗೆ ಬಾಕಿಯನ್ನು ಪರಾಮರ್ಶಿಸುವಂತೆ ಪೋಖ್ರಿಯಾಲ್ ಹೈಕೋರ್ಟ್ಗೆ ಕೋರಿದ್ದರು. ಆದರೆ ಅವರಿಗೆ ನೀಡಿದ್ದ ಗಡುವು ಮುಗಿದಿದ್ದರಿಂದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭವಾಗಿತ್ತು. ಈಗ ಅದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಮಾಜಿ ಮುಖ್ಯಮಂತ್ರಿಗಳಾದ ರಮೇಶ್ ಪೋಖ್ರಿಯಾಲ್, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಬಿಸಿ ಖಂಡೂರಿ, ವಿಜಯ್ ಬಹುಗುಣ ಅವರಿಗೆ ಆಗಸ್ಟ್ ತಿಂಗಳಲ್ಲಿ ಹೈಕೋರ್ಟ್ ಶೋಕಾಸ್ ನೋಟಿಸ್ ನೀಡಿತ್ತು. ಮತ್ತೊಬ್ಬ ಮಾಜಿ ಸಿಎಂ ಎನ್ಡಿ ತಿವಾರಿ 2018ರಲ್ಲಿ ನಿಧನರಾಗಿದ್ದಾರೆ.